ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟ ಮಾಲಿಕತ್ವದ ಖಾಸಗಿ ಕಾಲೇಜಿನ ಪಿ.ಆರ್.ಓ ಆಗಿ ಕೆಲಸ ಮಾಡುತ್ತಿರುವ ನೌಕರನೊಬ್ಬ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ. ಆತನನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಕಾಲೇಜಿನ ವಿದ್ಯರ್ಥಿಗಳು ಒತ್ತಾಯಿಸಿದ್ದಾರೆ.
ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪಿಆರ್ಓ ಹುದ್ದೆಯಲ್ಲಿರುವ ನಾಗರಾಜ ಶೆಟ್ಟಿ ನೈಕಂಂಬ್ಳಿ ಎಂಬಾತನ ವಿರುದ್ದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಾಜ ಶೆಟ್ಟಿ ರಾತ್ರಿಯ ವೇಳೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ವಾಟ್ಸಾಪ್ ನಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ವಿದ್ಯಾರ್ಥಿನಿಯರಿಗೆ ನಿಮ್ಮ ವೈಯಕ್ತಿಯ ವಿವರರಗಳನ್ನು ಕೊಡಿ, ಪರ್ಸನಲ್ ಆಗಿ ಏನ್ನನ್ನು ಬೇಕಾದರೂ ಮೆಸೇಜ್ ಮಾಡಿ, ರಾತ್ರಿಯ ವೇಳೆ ಒಬ್ಬರೂ ಇರುತ್ತೀರಾ, ನಿಮ್ಮ ಸೆಲ್ಫಿ ಕಳಿಸಿ ಎಂದೆಲ್ಲಾ ಚೇಡಿಸಿದ್ದಾನೆ. ಅಶ್ಲೀಲ ಮೆಸೇಜ್ ಮಾಡುವ ಮೂಲಕ ಕಿರುಕುಳ ನೀಡಿದ್ದಲ್ಲದೆ ಎಲ್ಲಾ ಮೆಸೇಜ್ಗಳನ್ನು ಡಿಲೀಟ್ ಮಾಡಿ ಎಂದು ದುಂಬಾಲು ಬಿದ್ದಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಆತನ ವರ್ತನೆಯ ಬಗ್ಗೆ ಹಲವು ಬಾರಿ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆತನ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಕಾಲೇಜಿ ಆಡಳಿತದ ವಿರುದ್ದ ಸಿಟ್ಟಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿಸಿದ್ದಾರೆ.
ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು, ವಿದ್ಯಾರ್ಥಿನಿಯರು ಒಬ್ಬೊಬ್ಬರಾಗಿ ಬಂದು ಕಂಪ್ಲೇಂಟ್ ಕೊಟ್ಟರೆ ಮಾತ್ರ ಆತನ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಮತ್ತಷ್ಟು ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.
ನಂತರ, ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಲ್ಲಿ ಕೇಳಿಕೊಂಡು ಕಾಲೇಜು ಪ್ರಾಂಶುಪಾಲ ಉಮೇಶ್ ರವರು, ಆರೋಪಿತ ಸಿಬ್ಬಂದಿಯ ವಿರುದ್ದ ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆದರೆ, ಆರೋಪಿತ ಪಿಆರ್ಓ ನನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟು ಹಿಡಿದ ವಿದ್ಯಾರ್ಥಿಗಳು, ಬಿಸಿಲನ್ನೂ ಲೆಕ್ಕಿಸದೇ ಸ್ಥಳದಲ್ಲೇ ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರೂ, ಬೈಂದೂರು ಶಾಸಕರೂ ಆದ ಸುಕುಮಾರ್ ಶೆಟ್ಟಿಯವರನ್ನೂ ಸ್ಥಳಕ್ಕೆ ಕರೆಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ನಟ ಚೇತನ್ ಟ್ವೀಟ್ನಲ್ಲಿ ತಪ್ಪೇನಿದೆ? ದನಿಯೆತ್ತಿದ ನಟಿ ರಮ್ಯಾ ದಿವ್ಯಸ್ಪಂದನ