ದೇಶಾದ್ಯಂತ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕಿನ ಆತಂಕವಿನ್ನು ಕಡಿಮೆಯಾಗಿಲ್ಲ. ಇದರ ಜೊತೆಗೆ ಓಮಿಕ್ರಾನ್ ರೂಪಾಂತರಿಯ ಆತಂಕ ಮನೆಮಾಡಿದೆ. ಈ ಕಾರಣದಿಂದ ರಾಜ್ಯದಲ್ಲಿಯೂ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದೆ.
ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಅಶ್ವತ್ಥ್ ನಾಯಾರಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹೊಸ ವರ್ಷದ ಸಂಭ್ರಮಾಚರಣೆ ಆರಂಭವಾಗಲಿರುವ ಡಿಸೆಂಬರ್ 30 ರಿಂದ ಜನವರಿ 2ರ ವರೆಗೆ ರಾಜ್ಯದಾದ್ಯಂತ ನಿರ್ಬಂಧ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಡಿಜೆ, ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ 50 % ಮಂದಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ: ಅಧಿಕಾರ ಶಾಶ್ವತವಲ್ಲ ಎಂದ ಬಸವರಾಜ ಬೊಮ್ಮಾಯಿ
ಜೊತೆಗೆ ಬ್ರಿಗೇಡ್ ರಸ್ತೆ ಶಾಪ್ಸ್ ಅಂಡ್ ಅಸ್ಟಾಬ್ಲಿಷ್ ಮೆಂಟ್ ಅಸೋಸಿಯೇಷನ್ ಕೂಡ ಈ ವರ್ಷ ಕೂಡ ಸಂಭ್ರಮಾಚರಣೆ ಮಾಡದಿರಲು ಮುಂದಾಗಿದೆ.
ಹೀಗಾಗಿ ಈ ಬಾರಿಯೂ ನಗರದ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಇರುವುದಿಲ್ಲ. ಸರ್ಕಾರ ಕ್ರಿಸ್ಮಸ್ ಆಚರಣೆಗೆ ಯಾವುವೇ ನಿರ್ಬಂಧ ಹೇರಿಲ್ಲ. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಹಬ್ಬ ಆಚರಿಸಬಹುದಾಗಿದೆ.