ರಂಜಾನ್ ಸಮಯದಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ನಲ್ಲಿ ಪ್ರಾರ್ಥನೆಗೆ (ನಮಾಜ್) ಅವಕಾಶ ನೀಡಲು ಒಪ್ಪಿದ ಒಂದು ದಿನದ ನಂತರ ಕೇಂದ್ರ ಸರ್ಕಾರವು, ರಾಜಧಾನಿಯಲ್ಲಿ ಹೊಸ ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಎಲ್ಲಾ ಧಾರ್ಮಿಕ ಸಭೆಗಳನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಹೈಕೋರ್ಟ್ಗೆ ತಿಳಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಪ್ರಕರಣವು ದಕ್ಷಿಣ ದೆಹಲಿಯ ನಿಜಾಮುದ್ದೀನ್ನಲ್ಲಿರುವ ಮಸೀದಿ ಬಂಗ್ಲೆ ವಾಲಿಯನ್ನು ಒಳಗೊಂಡಿದೆ. ಕಳೆದ ವರ್ಷ ಭಾರತದಲ್ಲಿ ಕೊವಿಡ್ ಪ್ರಕರಣಗಳು ದಾಖಲಾಗಲು ಪ್ರಾರಂಭವಾದ ಸಮಯದಲ್ಲಿ ನಡೆದ ತಬ್ಲಿಘಿ ಜಮಾಅತ್ ಪಂಥದ ಸಮಾವೇಶದ ವಿರುದ್ಧ ಪ್ರಕರಣ ದಾಖಲಾದ ನಂತರ ಕಳೆದ ಮಾರ್ಚ್ನಿಂದ ಇದನ್ನು ಮುಚ್ಚಲಾಗಿದೆ.
ಮರ್ಕಾಜ್ ಒಳಗೆ ಜನರು ಪ್ರಾರ್ಥನೆ ಮಾಡಲು ಅವಕಾಶ ನೀಡುವಂತೆ ನಿರ್ಬಂಧಗಳನ್ನು ಸರಾಗಗೊಳಿಸುವಂತೆ ಕೋರಿ ದೆಹಲಿ ವಕ್ಫ್ ಮಂಡಳಿಯು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಪೊಲೀಸರು ಪರಿಶೀಲಿಸಿದ 200 ಜನರ ಪಟ್ಟಿಯಿಂದ ಒಂದು ಬಾರಿಗೆ ಕೇವಲ 20 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಬಹುದು ಎಂಬ ಕೇಂದ್ರದ ಹೇಳಿಕೆಗೆ ಸೋಮವಾರ ನ್ಯಾಯಾಲಯ ತೀವ್ರವಾಗಿ ಪ್ರತಿಕ್ರಿಯಿಸಿತ್ತು.
ಹರಿದ್ವಾರದ ಕುಂಭಮೇಳದಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಲಕ್ಷಾಂತರ ಜನರು ಸೇರಿರುವುದನ್ನು ಪ್ರಸ್ತಾಪಿಸಿದ ಹೈಕೋರ್ಟ್, “ನಿಮ್ಮ ಅಧಿಸೂಚನೆಗಳಲ್ಲಿ, ಧಾರ್ಮಿಕ ಸ್ಥಳ ಕುರಿತಂತೆ ಒಂದು ಬಾರಿಗೆ 20 ಜನರಿಗೆ ಮೊಟಕುಗೊಳಿಸಿದ್ದೀರಾ” ಎಂದು ಇಂದು ಪ್ರಶ್ನಿಸಿದೆ.
ಎಲ್ಲಾ ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾಕೂಟಗಳನ್ನು ನಿಷೇಧಿಸುವ ಹೊಸ ನಿಲುವನ್ನು ಅಫಿಡವಿಟ್ನಲ್ಲಿ ತಿಳಿಸಲು ನ್ಯಾಯಾಲಯ ಕೇಂದ್ರವನ್ನು ಕೇಳಿದೆ.
200 ಜನರ ಪಟ್ಟಿಯನ್ನು ರೂಪಿಸುವುದು ಕಷ್ಟ ಎಂದು ದೆಹಲಿ ವಕ್ಫ್ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಬೇರೆ ಯಾವುದೇ ಧಾರ್ಮಿಕ ಪೂಜಾ ಸ್ಥಳಗಳಿಗೆ ನಿರ್ಬಂಧ ಇಲ್ಲದಿರುವಾಗ ಮಸೀದಿಗೆ ಇಷ್ಟೇ ಜನ ಪ್ರವೇಶ ಮಾಡಬೇಕು ಎಂದು ನಿಗದಿ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನಿನ್ನೆ, ಕೇಂದ್ರವು ತನ್ನ ವಾದವನ್ನು ಬದಲಾಯಿಸಿ ಯು-ಟರ್ನ್ ತೆಗೆದುಕೊಂಡಿತ್ತು ಮತ್ತು ಎಲ್ಲಾ ಧಾರ್ಮಿಕ ಸಭೆಗಳನ್ನು ನಿಲ್ಲಿಸುವ ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆಯ ಮಾರ್ಗಸೂಚಿಗಳನ್ನು ಉಲ್ಲೇಖಿಸಿತ್ತು. ಈ ನಿಯಮಗಳು ದೆಹಲಿಗೆ ಮಾತ್ರ ಅನ್ವಯಿಸುತ್ತವೆ.
ಇದನ್ನೂ ಓದಿ: ಇಫ್ತಾರ್ ಕೂಟ ನಡೆಸುವಂತಿಲ್ಲ, ರಂಜಾನ್ಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ