ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ರಾಜ್ಯದ ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪವಾದ ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಇದು ದೇವಾಲಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ವಾರಣಾಸಿಯ ಪುರಾತನ ಕಾಶಿಯ ವಿಶ್ವನಾಥ ಮಂದಿರವನ್ನು ವಿಶಿಷ್ಟ ರೀತಿಯಲ್ಲಿ ಜೀರ್ಣೋದ್ಧಾರ ಮಾಡುವ ಮೂಲಕ ಐತಿಹಾಸಿಕ ಕಾಶಿಗೆ ‘ದಿವ್ಯಕಾಶಿ-ಭವ್ಯಕಾಶಿ’ ಎಂಬ ಅಭಿದಾನ ದೊರೆಯುವಂತೆ ಮಾಡಿರುವ ಈ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಯಾತ್ರಾರ್ಥಿಗಳು ಭವ್ಯಕಾಶಿಗೆ ಭೇಟಿ ನೀಡಿ ವಿಶ್ವನಾಥನ ದರ್ಶನವನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಜೊಲ್ಲೆ ತಿಳಿಸಿದ್ದಾರೆ.
ಕಾಶಿಯಾತ್ರೆ ಯೋಜನೆಯನ್ವಯ ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಬಹುದಾಗಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ ಈ ಯೋಜನೆಯನ್ವಯ 5 ಸಾವಿರ ರೂ. ಸಹಾಯಧನ ನೀಡಲಾಗುವುದು. ಈ ಕುರಿತಂತೆ ಸರ್ಕಾರದ ಆದೇಶ ಹೊರಡಿಸಲಾಗಿದ್ದು, ಶೀಘ್ರದಲ್ಲಿಯೇ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಜೀವಮಾನದಲ್ಲಿ ಒಂದು ಬಾರಿಯಾದರೂ ಕಾಶಿಯಾತ್ರೆ ಮಾಡಬೇಕೆನ್ನುವುದು ಬಹುತೇಕ ಹಿಂದೂಗಳ ಕನಸು. ಅನೇಕರಿಗೆ ನಾನಾ ಕಾರಣಗಳಿಂದ ಕಾಶಿಗೆ ಹೋಗಿಬರಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಆಸಕ್ತ ಯಾತ್ರಾರ್ಥಿಗಳನ್ನು ಕಾಶಿಗೆ ಹೋಗಿಬರಲು ಈ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದಿದ್ದಾರೆ.