ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ವಿರೋಧಿಸಿ ದೇಶ ಹೊತ್ತಿ ಉರಿಯುತ್ತಿದೆ. ಆದರೆ ಮೋದಿ ಮಾತ್ರ ಬಟ್ಟೆಗಳ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ವಿರೋಧಿಸಿ ಜಾದವ್ಪುರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮದು ಒಂದೇ ಘೋಷಣೆ ನೋ ಸಿಎಬಿ ಅಂಡ್ ನೋ ಎನ್ಆರ್ಸಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಜಾರ್ಖಂಡ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಲಭೆಗಳಲ್ಲಿ ತೊಡಗಿರುವವರನ್ನು “ಅವರ ಬಟ್ಟೆಗಳಿಂದ ಗುರುತಿಸಬಹುದು” ಎಂದು ಹೇಳಿದ್ದರು. ಆ ಮೂಲಕ ಪರೋಕ್ಷವಾಗಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಗಲಭೆಗಳ ಹೊಣೆ ಹೊರಿಸಿದ್ದರು.
“ಇಡೀ ದೇಶವು ಉರಿಯುತ್ತಿದ್ದರೆ, ಅವರು ನೀವು ಧರಿಸಿರುವ ಬಟ್ಟೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಧರಿಸಿರುವ ಬಟ್ಟೆಯನ್ನು ನೋಡಿ ನಾನು ಯಾರೆಂದು ನೀವು ಹೇಳಬಲ್ಲಿರಾ ಎಂದು ಮಮತಾ ಪ್ರಶ್ನಿಸಿದ್ದಾರೆ.
ಇಂದು ನಡೆದ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಟಿಎಂಸಿ ಸಂಸದರಾದ ಮಿಮಿ ಚಕ್ರವರ್ತಿ ಮತ್ತು ನುಸ್ರತ್ ಜಹಾನ್ ಕೂಡ ಹಾಜರಿದ್ದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ.