ಅನಾವರಣಗೊಂಡ ಎರಡು ದಿನಗಳೊಳಗೆ ಕಾಂಗ್ರೆಸ್ನ ದೇಣಿಗೆ ಸಂಗ್ರಹ ವೆಬ್ಸೈಟ್ಗೆ 20,400 ಬಾರಿ ಸೈಬರ್ ದಾಳಿ ನಡೆದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ವೆಬ್ಸೈಟ್ನಿಂದ ಮಾಹಿತಿ ಕದಿಯಲು ಮತ್ತು ಅದನ್ನು ನಿಧಾನಗೊಳಿಸಲು (ಸರ್ವರ್ ಡೌನ್) ಸೈಬರ್ ದಾಳಿಕೋರರು ವಿಫಲ ಯತ್ನ ಮಾಡಿದ್ದಾರೆ. ಈ ನಡುವೆಯೂ ವೆಬ್ಸೈಟ್ ಮೂಲಕ 1.13 ಲಕ್ಷ ಜನರಿಂದ ₹2.81 ಕೋಟಿ ದೇಣಿಗೆ ಸಂಗ್ರಹಿಸಲಾಗಿದೆ ಎಂದು ವರದಿ ಹೇಳಿದೆ.
ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ಒಟ್ಟು 1,13,713 ದಾನಿಗಳು ದೇಣಿಗೆ ನೀಡಿದ್ದಾರೆ. ಈ ಪೈಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಸೇರಿದಂತೆ 32 ಜನರಿಂದ ₹1 ಲಕ್ಷಕ್ಕಿಂತ ಹೆಚ್ಚು ದೇಣಿಗೆ ಬಂದಿದೆ. 612 ಮಂದಿ ₹13,800 ರೂ.ಗಿಂತ ಹೆಚ್ಚು ದೇಣಿಗೆ ನೀಡಿದ್ದಾರೆ.
ಕಳೆದ ಸೋಮವಾರ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದ ಅಂಗವಾಗಿ ಕಾಂಗ್ರೆಸ್ ತನ್ನ ವೆಬ್ಸೈಟ್ ಅನಾವರಣಗೊಳಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ₹1.38 ಲಕ್ಷ ದೇಣಿಗೆ ನೀಡಿದ್ದಾರೆ.
ಇದುವರೆಗೆ ಸಂಗ್ರಹವಾದ ಒಟ್ಟು ₹2.81 ಕೋಟಿಯಲ್ಲಿ ಮಹಾರಾಷ್ಟ್ರದಿಂದ ಗರಿಷ್ಟ ₹56 ಲಕ್ಷ ಸಂಗ್ರಹವಾಗಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನದಿಂದ ₹26 ಲಕ್ಷ, ದೆಹಲಿಯಿಂದ ₹20 ಲಕ್ಷ, ಉತ್ತರ ಪ್ರದೇಶದಿಂದ ₹19 ಲಕ್ಷ ಮತ್ತು ಕರ್ನಾಟಕದಿಂದ ₹18 ಲಕ್ಷ ಸಂಗ್ರಹವಾಗಿದೆ.
ದೇಣಿಗೆ ಸಂಗ್ರಹದ ಕುರಿತು ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ದೇಣಿಗೆಯ ಪ್ರಮಾಣದಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದ್ದರೂ, ಬಿಹಾರದಿಂದ ಹೆಚ್ಚಿನ ಸಂಖ್ಯೆಯ ದಾನಿಗಳು ದೇಣಿಗೆ ನೀಡಿದ್ದಾರೆ. ಇದು ಹೆಚ್ಚಿನ ಸಂಖ್ಯೆಯ ಜನರು ನಮ್ಮೊಂದಿಗೆ ಬೆರೆಯಲು ಸಿದ್ಧರಿದ್ದಾರೆಂದು ತೋರಿಸುತ್ತದೆ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
ದೇಣಿಗೆ ಸಂಗ್ರಹ ವೆಬ್ಸೈಟ್ www.donateinc.inಗೆ ಕಳೆದ 48 ಗಂಟೆಗಳಲ್ಲಿ ₹1.2 ಕೋಟಿ ಜನರು ಭೇಟಿ ನೀಡಿದ್ದಾರೆ. ಈ ನಡುವೆ 20,400 ಸೈಬರ್ ದಾಳಿಗಳು ನಡೆದಿವೆ. ಇದರಲ್ಲಿ 1,340 ಜನರು ಸೈಟ್ನಿಂದ ಮಾಹಿತಿ ಕದಿಯಲು ಪ್ರಯತ್ನಿಸಿದ್ದಾರೆ. ಉಳಿದವರು ವೆಬ್ಸೈಟ್ ನಿಧಾನಗೊಳಿಸಲು ವಿಫಲ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ದೇಣಿಗೆ ಪಾವತಿ ವಿಧಾನದ ವಿಶ್ಲೇಷಣೆ ನೋಡುವುದಾದರೆ, ಶೇ.81ರಷ್ಟು ದಾನಿಗಳು ಪಾವತಿ ಮಾಡಲು ಯುಪಿಐ ಬಳಸಿದ್ದಾರೆ. ಶೇ.7.95 ರಷ್ಟು ಜನರು ಕ್ರೆಡಿಟ್ ಕಾರ್ಡ್, ಶೇ.6.34ರಷ್ಟು ಜನರು ಡೆಬಿಟ್ ಕಾರ್ಡ್, ಶೇ.4.78ರಷ್ಟು ಜನರು ನೆಟ್ ಬ್ಯಾಂಕಿಂಗ್ ಮತ್ತು ಶೇ.0.02 ಜನರು RTGS-NEFT ಬಳಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :‘ಯಾರು ಹೇಗೆ ಅವಮಾನಿಸಿದರು….?’ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ