ದೆಹಲಿಯಲ್ಲಿ ಹೋರಾಡುತ್ತಿರುವ ರೈತರಿಗೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ. ಅಲ್ಲಿಂದ ಹಣ ಸರಬರಾಜು ಆಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾವ್ಸಾಹೇಬ್ ಧನ್ವೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸಿಖ್ ಗುರುದ್ವಾರಗಳು ಮತ್ತು ಶಿವಸೇನೆ ತೀವ್ರ ರೀತಿಯಲ್ಲಿ ಪ್ರತಿಕ್ರಿಯಿಸಿವೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದ್ದಾರೆ.
“ರೈತರ ಆಂದೋಲನದ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂದು ಕೇಂದ್ರ ಸಚಿವರಿಗೆ ಮಾಹಿತಿ ಇದ್ದರೆ, ರಕ್ಷಣಾ ಸಚಿವರು ತಕ್ಷಣ ಚೀನಾ ಮತ್ತು ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು. ಸಶಸ್ತ್ರ ಪಡೆಗಳ ಅಧ್ಯಕ್ಷರು, ಪ್ರಧಾನಿ, ಗೃಹಸಚಿವರು ಈ ವಿಷಯವನ್ನು ಗಂಭೀರವಾಗಿ ಚರ್ಚಿಸಬೇಕು” ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಇನ್ನು ಕೇಂದ್ರ ಸಚಿವರ ಈ ಹೇಳಿಕೆಯನ್ನು ದೆಹಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿ ಖಂಡಿಸಿದೆ. “ರೈತರು ಹಲವು ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರ ಅವರಿಗೆ ನ್ಯಾಯ ಕೊಡಲು ವಿಫಲವಾಗಿದೆ. ದೇಶಕ್ಕಾಗಿ ಆಹಾರ ಬೆಳೆಯುವ ಮತ್ತು ತಮಗಾಗಿ ಹೋರಾಡುವ ರೈತರನ್ನು, ದೇಶಕ್ಕಾಗಿ ಪ್ರಾಣ ನೀಡುತ್ತಿರುವ ಅವರ ಮಕ್ಕಳನ್ನು ದೇಶದ್ರೋಹಿಗಳಂತೆ ಚಿತ್ರಿಸಬೇಡಿ” ಎಂದು ಆಡಳಿತ ಮಂಡಳಿ ಅಧ್ಯಕ್ಷ ಮಂಜಿಂಧರ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸಚಿವ ರಾವ್ಸಾಹೇಬ್ ಧನ್ವೆ ಮಹಾರಾಷ್ಟ್ರದಲ್ಲಿ ಆರೋಗ್ಯ ಕೇಂದ್ರವೊಂದನ್ನು ಉದ್ಘಾಟನೆ ಮಾಡುವ ವೇಳೆ “ರೈತರ ಹೋರಾಟದ ಹಿಂದೆ ಕೆಲ ರಾಷ್ಟ್ರಗಳ ಪಿತೂರಿಯಿದೆ. ಈ ಹಿಂದೆ ಮುಸ್ಲಿಮರು ಸಹ ಸಿಎಎ, ಎನ್ಆರ್ಸಿ ಹೆಸರಿನಲ್ಲಿ ದೇಶವನ್ನು ದಿಕ್ಕುತಪ್ಪಿಸಲು ನೋಡಿದ್ದರು” ಎಂದು ಆರೋಪಿಸಿದ್ದರು.
ಇನ್ನು ನಿನ್ನೆ ನಡೆದ ರೈತರು-ಕೇಂದ್ರ ಸಚಿವರ ನಡುವಿನ ಸಭೆಯಲ್ಲಿ “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಪ್ರಸ್ತಾಪವನ್ನು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (AIKSCC) ತಿರಸ್ಕರಿಸಿದ್ದು, ರೈತರ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದೆ” ಎಂದು ಮಾಧ್ಯಮ ಬುಲೆಟಿನ್ನಲ್ಲಿ ತಿಳಿಸಿದೆ.
ಡಿಸೆಂಬರ್ 08 ರಂದು ನಡೆದ ಭಾರತ್ ಬಂದ್ ಯಶಸ್ವಿಯಾಗಿದ್ದು ರೈತರ ಈಗ ಅಂಬಾನಿ ಅದಾನಿಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಇದನ್ನೂ ಓದಿ; ಅಂಬಾನಿಯ ಜಿಯೋ ಸಿಮ್ ಬಳಸುವುದಿಲ್ಲ, ರಿಲೆಯನ್ಸ್ ಪೆಟ್ರೋಲ್ ಹಾಕಿಸುವುದಿಲ್ಲ, ಮಾಲ್ಗೆ ಹೋಗುವುದಿಲ್ಲ: ರೈತರ ಪ್ರತಿಜ್ಞೆ