ಕೊಕೇನ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತೆಯಾಗಿರುವ ಬಿಜೆಪಿಯ ಯುವ ವಿಭಾಗದ ನಾಯಕಿ ಪಮೇಲಾ ಗೋಸ್ವಾಮಿ ಹೆಸರಿಸಿರುವ ಬಂಗಾಳ ಬಿಜೆಪಿ ಮುಖಂಡ ರಾಕೇಶ್ ಸಿಂಗ್ನನ್ನು ರಾಜ್ಯದ ಬುರ್ದ್ವಾನ್ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಲಾಗಿದೆ.
ರಾಕೇಶ್ ರಸ್ತೆ ಮಾರ್ಗದ ಮೂಲಕ ರಾಜ್ಯದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಅವರು ಪರಾರಿ ಆಗುವ ಮೊದಲೇ ಬಂಗಾಳ ಪೊಲೀಸರು ಅವರನ್ನು ಮಂಗಳವಾರ ಬಂಧಿಸಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ. ಅವರ ನಿವಾಸಕ್ಕೆ ಪ್ರವೇಶಿಸಲು ಅಡ್ಡಿ ಮಾಡಿದ ರಾಕೇಶ್ ಅವರ ಇಬ್ಬರು ಗಂಡು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾದಕ ದ್ರವ್ಯ ಕೊಕೇನ್ ಹೊಂದಿದ್ದ ಆರೋಪದ ಮೇಲೆ 3 ದಿನಗಳ ಹಿಂದೆ ಬಂಧಿಸಲ್ಪಟ್ಟ ಪಮೇಲಾ ಗೋಸ್ವಾಮಿ, ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯಾ ಅವರ ಆಪ್ತ ಸಹಾಯಕ ರಾಕೇಶ್ ಸಿಂಗ್ ತನ್ನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಪ.ಬಂಗಾಳಕ್ಕೆ ಸ್ವಂತ ಮಗಳು ಬೇಕು: ಟಿಎಂಸಿಯ ಚುನಾವಣಾ ಘೋಷವಾಕ್ಯ
“ಅವರು (ಬಿಜೆಪಿಯವರು) ನನ್ನನ್ನು ಬಹಳ ಸಮಯದಿಂದ ಇಂಥದ್ದರಲ್ಲಿ ಸಿಕ್ಕಿಸಲು ಪ್ರಯತ್ನಿಸುತ್ತಿದ್ದಾರೆ. ರಾಕೇಶ್ ಸಿಂಗ್ ಇದನ್ನು ಮಾಡಿದ್ದಾರೆ. ನನ್ನ ಬಳಿ ವಿಶ್ವಾಸಾರ್ಹ ಮಾಹಿತಿ ಮತ್ತು ಪುರಾವೆಗಳಿವೆ” ಎಂದು ಅವರು ಸ್ಥಳೀಯ ನ್ಯಾಯಾಲಯದ ಹೊರಗೆ ಬಂಗಾಳಿ ಭಾಷೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ರಾಕೇಶ್ ಸಿಂಗ್ ಅವರನ್ನು ಇಂದು (ಮಂಗಳವಾರ) ಕೋಲ್ಕತಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಾಜರಾಗುವಂತೆ ಕೇಳಲಾಯಿತು. ’ನಾನು ದೆಹಲಿಗೆ ಪ್ರಯಾಣಿಸುತ್ತಿದ್ದೇನೆ, ಫೆಬ್ರವರಿ 26 ರಂದು ನಗರಕ್ಕೆ ಹಿಂದಿರುಗಿದಾಗ ಪೊಲೀಸರ ಮುಂದೆ ಹಾಜರಾಗುತ್ತೇನೆ’ ಎಂದು ಹೇಳಿದ್ದರು.
ಮಂಗಳವಾರ ಮುಂಜಾನೆಯೇ ರಾಕೇಶ್ ಸಿಂಗ್ ಮನೆಯ ಹೊರಗೆ ಒಂದು ದೊಡ್ಡ ಪೊಲೀಸ್ ಪಡೆ ತಲುಪಿದ್ದು, ಅವರ ಮಕ್ಕಳು ಪೊಲೀಸರನ್ನು ಒಳಗೆ ಬಿಡಲು ನಿರಾಕರಿಸಿದರು. ಹೀಗಾಗಿ ಅವರನ್ನೂ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದೆ ಎಂದು ಹೇಳಲಾದ ಕೆಲವು ಬ್ಯಾಂಕ್ ವಹಿವಾಟುಗಳ ಬಗ್ಗೆ ಸಿಬಿಐ ತಂಡವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಮನೆಗೆ ಭೇಟಿ ನೀಡಿದ ನಂತರ ಪಶ್ಚಿಮ ಬಂಗಾಳದಲ್ಲಿ ನಾಟಕೀಯ ವಿದ್ಯಮಾನ ಸಂಭವಿಸುತ್ತಿವೆ. ಬಂಗಾಳದ ಚುನಾವಣೆಯಲ್ಲಿ ಈಗ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಬಂಗಾಳ ಪೊಲೀಸರು, ಸಿಐಡಿ, ಕೇಂದ್ರದ ಸಿಬಿಐ, ಇ.ಡಿ ಇತ್ಯಾದಿ ಎಲ್ಲ ಸ್ಪರ್ಧೆಗೆ ಇಳಿದಿವೆ ಎಂದು ರಾಜಕೀಯ ವಿಶ್ಲೇಷಕರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ಜಾರಿಗೊಳಿಸಿದ ಪಶ್ಚಿಮ ಬಂಗಾಳ ನ್ಯಾಯಾಲಯ