Homeಮುಖಪುಟಟಿಕ್ರಿ ಗಡಿಯಲ್ಲಿ ಪೊಲೀಸರ ‘ಬೆದರಿಕೆಯ’ ಫಲಕ: ಪ್ರತಿಭಟನಾಕಾರರ ಆಕ್ರೋಶ, ಹೋರಾಟ ಇನ್ನಷ್ಟು ದೃಢ

ಟಿಕ್ರಿ ಗಡಿಯಲ್ಲಿ ಪೊಲೀಸರ ‘ಬೆದರಿಕೆಯ’ ಫಲಕ: ಪ್ರತಿಭಟನಾಕಾರರ ಆಕ್ರೋಶ, ಹೋರಾಟ ಇನ್ನಷ್ಟು ದೃಢ

- Advertisement -
- Advertisement -

ಟಿಕ್ರಿ ಗಡಿಯಲ್ಲಿ ದೆಹಲಿ ಪೊಲೀಸರು ಹಾಕಿರುವ ಫಲಕಗಳು ಪ್ರತಿಭಟನಾಕಾರರು ಮತ್ತು ಕೃಷಿ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ‘ಶಾಸನಬದ್ಧ ಎಚ್ಚರಿಕೆ’ ಎಂಬ ಶೀರ್ಷಿಕೆಯಲ್ಲಿ, ಇವುಗಳಲ್ಲಿ ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಪಠ್ಯವಿದೆ: “ನಿಮ್ಮ ಸಭೆ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ನೀವು ಇಲ್ಲಿಂದ ಚದುರಬೇಕೆಂದು ನಿಮಗೆ ಎಚ್ಚರಿಕೆ ನೀಡಲಾಗುತ್ತಿದೆ, ಇಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.”
ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಅವರ ಸಂಕಲ್ಪವನ್ನು ಇನ್ನಷ್ಟು ದೃಢಗೊಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈಗ ಏಕಾಏಕಿ ಈ ಫಲಕಗಳನ್ನು ಹಾಕಿಲ್ಲ, ಜನವರಿ 26 ರ ಹಿಂಸಾಚಾರದ ನಂತರ ಈ ಫಲಕಗಳನ್ನು ಇರಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಹೊರ) ಸುಧಾನ್ಶು ಧಮಾ ಸ್ಪಷ್ಟೀಕರಣ ನೀಡಿದ್ದಾರೆ.

“ನಾವು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗಡಿಯ ಸಮೀಪ ಹಿಂಸಾಚಾರದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಜಂಕ್ಷನ್‌ಗಳಲ್ಲಿ ಬೋರ್ಡ್‌ಗಳನ್ನು ಹಾಕಿದ್ದೇವೆ. ಒಂದು ವೇಳೆ ರೈತರು ಮತ್ತೆ ಕಾನೂನನ್ನು ಉಲ್ಲಂಘಿಸಿದರೆ, ಅದು ಕಾನೂನುಬಾಹಿರ ಎಂದು ಅವರು ತಿಳಿದುಕೊಳ್ಳಬೇಕು” ಎಂದಿದ್ದಾರೆ.

ಭಾರತೀಯ ಕಿಸಾನ್ ಯುನಿಯನ್-ಬಿಕೆಯು ಉಗ್ರಾಹಣ್ ವಲಯದ ಹಿರಿಯ ಉಪಾಧ್ಯಕ್ಷ ಶಿಂಗರಾ ಸಿಂಗ್ ಮಾನ್ ಮಾತನಾಡಿ “ನಾನು ಈ ಸೂಚನೆಯನ್ನು ಸೊಮವಾರ ಸಂಜೆ 5 ಗಂಟೆ ಸುಮಾರಿಗೆ ಟಿಕ್ರಿ ಗಡಿಯ ಬಳಿ, ದೆಹಲಿ ಪೊಲೀಸರ ನಾಕಾದ ಸ್ಥಳದಲ್ಲಿ ನೋಡಿದೆ. ಇದು ರಾಷ್ಟ್ರೀಯ ಹೆದ್ದಾರಿಯ ಕಂಬದಲ್ಲಿದೆ; ಅದು ಇತರ ಸ್ಥಳಗಳಲ್ಲಿಯೂ ಇರಬಹುದು. ಆದಾಗ್ಯೂ, ನಮಗೆ ತೊಂದರೆಯಾಗಿಲ್ಲ; ರೈತರು ದೃಢವಾಗಿದ್ದಾರೆ ಮತ್ತು ನಾವು ಇದರ ಬಗ್ಗೆ ವಿವಾದ ಮಾಡುವುದಿಲ್ಲ. ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಮ್ಮ ಧರಣಿಗಳು ನಡೆಯುತ್ತವೆ” ಎಂದಿದ್ದಾರೆ.

ಕೃಷಿ ಸಚಿವ ನರೇಂದ್ರ ತೋಮರ್, ಅತಿ ಹೆಚ್ಚು ಜನ ಪ್ರತಿಭಟಿಸಿದ ಕಾರಣಕ್ಕೆ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ಈ ಸೂಚನೆ ಬಂದಿದೆ. “ಅವರು ಈ ಜನಸಮೂಹದೊಂದಿಗೆ 11 ಸಭೆಗಳನ್ನು ನಡೆಸಿದ್ದು ನಿಜಕ್ಕೂ ಆಶ್ಚರ್ಯಕರವಾಗಿದೆ ಮತ್ತು ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕಾಗಿ ಮತ್ತು ಈ ಧರಣಿಯನ್ನು ರಾಜಕೀಯ-ರಹಿತವಾಗಿ ನೋಡಿಕೊಂಡಿದ್ದಕ್ಕಾಗಿ ಸಚಿವರೇ ನಮ್ಮನ್ನು ಅಭಿನಂದಿಸಿದ್ದರು. ನಮ್ಮ ಸಭೆಗಳಲ್ಲಿ ಅವರು ಇದನ್ನು ‘ಕಿಸಾನ್ ಆಂದೋಲನ್’ ಎಂದು ಕರೆಯುತ್ತಿದ್ದರು ಮತ್ತು ಈಗ ನಾವು ಅವರ ಪಾಲಿಗೆ ಬರೀ ಜನಸಮೂಹವಾಗಿದ್ದೇವೆ” ಎಂದಿದ್ದಾರೆ.

ಸಂಯುಕ್ತ್ ಕಿಸಾನ್ ಮೋರ್ಚಾದ ಸದಸ್ಯ ಡಾ. ದರ್ಶನ್ ಪಾಲ್, “ನಾವು ಇಂತಹ ಕ್ರಮಗಳನ್ನು ಬಲವಾಗಿ ಖಂಡಿಸುತ್ತೇವೆ. ಗಡಿಯಲ್ಲಿ 90 ದಿನಗಳ ಕಾಲ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ನಾವು ದೆಹಲಿಯೊಳಗೇನೂ ಕುಳಿತಿಲ್ಲ” ಎಂದಿದ್ದಾರೆ.

ಮಂಗಳವಾರ ಟಿಕ್ರಿ ಗಡಿಯಲ್ಲಿ, ಪೊಲೀಸ್ ನಿಯೋಜನೆಯ ನೆರಳಿನಲ್ಲಿಯೇ ರೈತರು ಎಂದಿನಂತೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಅನಿಲ್ ಮಲಿಕ್ ಎಂಬ ರೈತ ಮಾತನಾಡಿ “ಅವರು ಇದನ್ನು ಈಗಾಗಲೇ ಗಾಜಿಪುರದಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಅದು ಹಿಮ್ಮೆಟ್ಟಿತು. ನಾವು ಎಲ್ಲಿಯೂ ಹೋಗುವುದಿಲ್ಲ. ಯಾವುದೇ ಸುಳಿವು ಇದ್ದರೆ ಪೊಲೀಸ್ ಕ್ರಮ ಜರುಗಿಸಲಿ. ಹೆಚ್ಚಿನ ಜನರು ನಮ್ಮೊಂದಿಗೆ ಸೇರಲು ಬರುತ್ತಲೇ ಇದ್ದಾರೆ..” ಎಂದಿದ್ದಾರೆ.


ಇದನ್ನೂ ಓದಿ: ಇದು ಇಡೀ ದೇಶದ ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ದಕ್ಷಿಣ ಭಾರತದ ಕಾರ್ಯಕರ್ತರ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...