“ನಾನು ಪ್ರತಿದಿನ ಶಂಖ ಊದುತ್ತೇನೆ; ಹಾಗಾಗಿ ನನಗೆ ಮಾಸ್ಕ್ ಅಗತ್ಯವಿಲ್ಲ” ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ. ಮಾಸ್ಕ್ ಧರಿಸದೆ ವಿಧಾನಸಭೆಗೆ ಪ್ರವೇಶಿಸಿದ ಸಚಿವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದ್ದಾರೆ.
ಮಧ್ಯಪ್ರದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಉಷಾ ಠಾಕೂರ್, “ನಾನು ಹನುಮಾನ್ ಛಾಲೀಸಾ ಪಠಿಸುತ್ತೇನೆ. ಪ್ರತಿದಿನ ಶಂಖ ಊದುತ್ತೇನೆ. ಸಗಣಿಯನ್ನು ಬಳಸಿ ಹೋಮ-ಹವನ ಮಾಡುತ್ತೇನೆ. ಕಷಾಯ ಕುಡಿಯುತ್ತೇನೆ. ಇವುಗಳೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ನಾನು ಮಾಸ್ಕ್ ಹಾಕುವ ಅಗತ್ಯವಿಲ್ಲ” ಎಂದು ಹೇಳಿದರು.
“ಅಷ್ಟೆ ಅಲ್ಲದೇ ನನ್ನ ಕುತ್ತಿಗೆಯ ಬಳಿ ಟವಲ್ ಇದೆ. ಅದನ್ನು ಬಾಯಿಗೆ ಸುತ್ತಿಕೊಳ್ಳುತ್ತೇನೆ. ಯಾರಾದರೂ ನನ್ನ ಬಳಿ ಬಂದರೆ ಅದು ನನ್ನನ್ನು ರಕ್ಷಿಸುತ್ತದೆ. ವೇದಗಳು 10,000 ವರ್ಷಗಳನ್ನು ಪೂರೈಸುತ್ತಿದೆ. ಯಾರಾದರೂ ಉತ್ತಮ ಜೀವನವನ್ನು ನಡೆಸಲು ಬಯಸಿದರೆ ಅವರು ವೈದಿಕ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಯಾವುದೇ ರೋಗವೂ ಅವರ ಹತ್ತಿರ ಸುಳಿಯುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಮೇಲಾ-ಡ್ರಗ್ಸ್ ಪ್ರಕರಣ : ಬಂಗಾಳ ಬಿಜೆಪಿ ನಾಯಕ ರಾಕೇಶ್ ಅರೆಸ್ಟ್
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇತ್ತೀಚೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, “ಮಾಸ್ಕ್ ಇಲ್ಲದೇ ಯಾರು ಕಾಣಿಸಿಕೊಂಡರೂ ಸಹ ಅವರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದರು. ಆದರೆ ಈ ಆದೇಶವನ್ನು ಅಲ್ಲಿನ ಜನಪ್ರತಿನಿದಿಗಳೇ ಪಾಲಿಸುತ್ತಿಲ್ಲ.
ಬಿಜೆಪಿಯವರು ಮಾತ್ರವಲ್ಲದೇ ಬಿಎಸ್ಪಿ ಶಾಸಕಿ ರಮಾಬಾಯಿ ಪರಿಹಾರ್ ಕೂಡಾ ಮಾಸ್ಕ್ ಧರಿಸದೇ ವಿಧಾನಸಭೆಗೆ ಹಾಜರಾಗಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇತ್ತ ಭೋಪಾಲ್ ಮತ್ತು ಇಂಧೋರ್ನಲ್ಲಿ ಕೊರೊನಾ ಸೋಂಕು ಏಕಾಏಕಿ ಹೆಚ್ಚಾಗುತ್ತಿದೆ. ಈ ನಡುವೆ ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ದಿಶಾ ರವಿ ಜಾಮೀನು ವಿಚಾರಣೆಯಲ್ಲಿ ಕೋರ್ಟ್ ಹೇಳಿದ್ದೇನು? 10 ಅಂಶಗಳು