ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ನಡೆಸಿದ ವಿವಿಧ ಆಚರಣೆಗಳು ದೇಶವನ್ನು ದಶಕಗಳಿಂದ ಹಿಂದಕ್ಕೆ ಕೊಂಡೊಯ್ಯುತ್ತಿವೆ ಎಂಬುದನ್ನು ತೋರಿಸುತ್ತದೆ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಈ ಬಗ್ಗೆ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ”ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ವೈಜ್ಞಾನಿಕ ಮನೋಧರ್ಮವನ್ನು ಹೊಂದಿರುವ ಸಮಾಜವನ್ನು ಕಲ್ಪಿಸಿದ್ದರು, ಆದರೆ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ನಡೆದಿರುವುದು ಅದಕ್ಕೆ ವಿರುದ್ಧವಾಗಿದೆ” ಎಂದು ಶರದ್ ಪವಾರ್ ಕಿಡಿಕಾರಿದ್ದಾರೆ.
ಭಾನುವಾರ ಬೆಳಗ್ಗೆ ನೂತನ ಸಂಸತ್ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಲೋಕಸಭೆಯ ಸಭಾಂಗಣದಲ್ಲಿ ವಿಶೇಷ ಆವರಣದಲ್ಲಿ ಹವನ, ಬಹು ಧರ್ಮದ ಪ್ರಾರ್ಥನಾ ಸಮಾರಂಭ ಮತ್ತು ಸೆಂಗೋಲ್ ಸ್ಥಾಪನೆಯನ್ನು ಒಳಗೊಂಡ ಭವ್ಯ ಸಮಾರಂಭ ನಡೆಸಿದರು.
”ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಧುನಿಕ ಭಾರತದ ಪರಿಕಲ್ಪನೆಯ ಸಮಾಜವನ್ನು ಕಲ್ಪಿಸಿದ್ದರು. ಇಂದು ನವದೆಹಲಿಯ ಹೊಸ ಸಂಸತ್ ಭವನದಲ್ಲಿ ನಡೆಸಿದ ಆಚರಣೆಗಳ ಬಗ್ಗೆ ಮಾತನಾಡುವ ನಡುವೆ ಅಗಾಧ ವ್ಯತ್ಯಾಸವಿದೆ. ನಮ್ಮ ದೇಶವನ್ನು ದಶಕಗಳಿಂದ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ನಾನು ಭಯಪಡುತ್ತಿದ್ದೇನೆ” ಎಂದು ಪವಾರ್ ಆತಂಕ ಹೊರಹಾಕಿದರು.
ಇದನ್ನೂ ಓದಿ: ಮೋದಿ ಸ್ವಯಂ ವೈಭವೀಕರಣದ ಸರ್ವಾಧಿಕಾರಿ: ನೂತನ ಸಂಸತ್ ಉದ್ಘಾಟನೆ ಬಳಿಕ ಪ್ರತಿಪಕ್ಷಗಳ ಟೀಕಾಪ್ರಹಾರ
”ವಿಜ್ಞಾನದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ವೈಜ್ಞಾನಿಕ ಮನೋಧರ್ಮದೊಂದಿಗೆ ಸಮಾಜವನ್ನು ರಚಿಸುವ ಅವರ ಆಶಯದ ಬಗ್ಗೆ ನೆಹರು ಅವರು ನಿರಂತರವಾಗಿರುತ್ತಿದ್ದರು. ಆದರೆ ಇಂದು ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ನಡೆಯುತ್ತಿರುವುದು ನೆಹರು ಊಹಿಸಿದ್ದಕ್ಕೆ ನಿಖರವಾಗಿ ವಿರುದ್ಧವಾಗಿದೆ” ಎಂದು ಟೀಕಿಸಿದ್ದಾರೆ.
ಈ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ನೆರವೇರಿಸುತ್ತಾರೆ ಎನ್ನುವ ವಿಚಾರಕ್ಕೆ 20 ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು. ಅದರಲ್ಲಿ ಎನ್ಸಿಪಿ ಕೂಡ ಸೇರಿತ್ತು. ಈ ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕಿತ್ತು, ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿದ್ದವು.
ವಿಪಕ್ಷಗಳ ಪ್ರಕಾರ, ರಾಷ್ಟ್ರಪತಿಗಳು ದೇಶದ ಮೊದಲ ಪ್ರಜೆಯಾಗಿದ್ದು, ಈ ಗೌರವ ಅವರಿಗೆ ಸಲ್ಲಿಕೆಯಾಗಬೇಕು. ಅವರನ್ನು ಆಹ್ವಾನಿಸದ ಕಾರಣ, ನರೇಂದ್ರ ಮೋದಿ ಸರ್ಕಾರವು ಅಧ್ಯಕ್ಷರ ಸ್ಥಾನಕ್ಕೆ ಅಗೌರವ ತೋರುತ್ತಿದೆ ಎಂದು ಆರೋಪಿಸಿ ಪಕ್ಷಗಳು ಸಮಾರಂಭವನ್ನು ಭಹಿಷ್ಕರಿಸಲು ನಿರ್ಧರಿಸಿದವು.