ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನವದೆಹಲಿಯಲ್ಲಿ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ ಕೆಲವೇ ಗಂಟೆಗಳ ನಂತರ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಸಂಸದೀಯ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿರುವ, ಸ್ವಯಂ ವೈಭವೀಕರಣ ಮಾಡಿಕೊಳ್ಳುವ ಸರ್ವಾಧಿಕಾರಿ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ” ಎಂದು ಕುಟುಕಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಮೋದಿಯವರೇ ನೂತನ ಸಂಸತ್ ಭವನವನ್ನು ಉದ್ಘಾಟಿಸುವ ನಿರ್ಧಾರನ್ನು ಇಪ್ಪತ್ತು ಪ್ರತಿಪಕ್ಷಗಳು ವಿರೋಧಿಸಿವೆ. “ಇದು ಗಂಭೀರ ಮತ್ತು ಅವಮಾನ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ” ಎಂದು ಸಮಾರಂಭವನ್ನು ಬಹಿಷ್ಕರಿಸಿದ್ದವು. ಆದಿವಾಸಿ ಮಹಿಳೆ ಮುರ್ಮು ಅವರನ್ನು ಬಿಜೆಪಿ ಹೊರಗಿಟ್ಟಿದೆ ಎಂದು ಕಿಡಿಕಾರಿದ್ದವು.
ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರ ಜನ್ಮದಿನದಂದು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿರುವುದೂ ಟೀಕೆಗೆ ಗುರಿಯಾಗಿದೆ.
“ಮುರ್ಮು ಅವರ ಸಾಂವಿಧಾನಿಕ ಕರ್ತವ್ಯಗಳನ್ನು ಪೂರೈಸಲು ಅವಕಾಶವಿಲ್ಲ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ. “ಸಂಸತ್ತಿಗೆ ಅಪರೂಪಕ್ಕೆ ಹಾಜರಾಗುವ ಅಥವಾ ಅದರಲ್ಲಿ ತೊಡಗಿಸಿಕೊಳ್ಳುವ ಪ್ರಧಾನ ಮಂತ್ರಿಯವರು 2023ರಲ್ಲಿ ಹೊಸ ಸಂಸತ್ತಿನ ಕಟ್ಟಡ ಉದ್ಘಾಟಿಸಿದ್ದಾರೆ” ಎಂದು ಕುಟುಕಿದ್ದಾರೆ.
ಲೋಕಸಭೆಯ ಸಭಾಂಗಣದಲ್ಲಿ ಮೋದಿಯವರು ತಂದಿರಿಸಿರುವ ಸೆಂಗೋಲ್ ಅಥವಾ ರಾಜದಂಡದ ವಿವಾದವನ್ನು ಅವರು ಉಲ್ಲೇಖಿಸಿದ್ದಾರೆ.
“1947ರಲ್ಲಿ ಅಧಿಕಾರ ವರ್ಗಾವಣೆಯ ಸಂಕೇತವಾಗಿ ರಾಜದಂಡವನ್ನು ಬ್ರಿಟಿಷ್ ವೈಸರಾಯ್ ಲೂಯಿಸ್ ಮೌಂಟ್ಬ್ಯಾಟನ್ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ನೀಡಿದ್ದರು” ಎಂದು ಬಿಜೆಪಿ ಪ್ರತಿಪಾದಿಸಿದೆ. ಆದರೆ ಬಿಜೆಪಿ ಹೇಳುತ್ತಿರುವ ಇತಿಹಾಸ ಸಂಶಯಗಳಿಗೆ ಆಸ್ಪದ ನೀಡಿದೆ.
“ಹೊಸ ಕಟ್ಟಡದ ಉದ್ಘಾಟನೆಯನ್ನು ಪಟ್ಟಾಭಿಷೇಕದ ಸಮಾರಂಭ ಎಂದು ಮೋದಿ ಪರಿಗಣಿಸಿದ್ದಾರೆ” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಎಎನ್ಐಗೆ ಪ್ರತಿಕ್ರಿಯಿಸಿ, “ಕಾರ್ಯಕ್ರಮಕ್ಕೆ ಹಾಜರಾಗದಿರುವ ನಿರ್ಧಾರದಿಂದ ಸಂತೋಷವಾಗಿದೆ” ಎಂದಿದ್ದಾರೆ. “ನಾವು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ? ಈ ಕಾರ್ಯಕ್ರಮ ಸೀಮಿತ ಜನರಿಗೆ ಮಾತ್ರವೇ?” ಎಂದು ಪ್ರಶ್ನಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಸಂಸತ್ತನ್ನು ಅಪಹಾಸ್ಯ ಮಾಡಿದೆ, ಅವಮಾನಿಸಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರೇನ್ ಆರೋಪಿಸಿದ್ದಾರೆ.
“ಸಂಸತ್ತಿನ ಎಂಟು ಅಧಿವೇಶನಗಳನ್ನು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಮುಂದೂಡಲಾಗಿದೆ. ವಿರೋಧ ಪಕ್ಷದ ಸದಸ್ಯರಿಗಿರುವ ಮಸೂದೆಗಳ ಮೇಲಿನ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ನಾಲ್ಕು ವರ್ಷ ಕಳೆದರೂ ಲೋಕಸಭೆಯಲ್ಲಿ ಉಪಸಭಾಪತಿಯೇ ಇಲ್ಲ. ನಮ್ಮ ಶ್ರೇಷ್ಠ ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಿ” ಎಂದು ಆಗ್ರಹಿಸಿದ್ದಾರೆ.
ಎಡಪಕ್ಷಗಳ ಟೀಕೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿ, “ದೊಡ್ಡದಾದ ಪ್ರೊಪಗಾಂಡ ನಡುವೆ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು” ಎಂದು ಬರೆದುಕೊಂಡಿದ್ದಾರೆ.
“ಸೆಂಗೋಲ್ ಎಂಬುದು ಊಳಿಗಮಾನ್ಯ ರಾಜಪ್ರಭುತ್ವದ ಅವಧಿಗೆ ಸೇರಿದೆ. ಭಾರತೀಯ ಜನರು ಅಂತಹ ಬಂಧನಗಳನ್ನು ಕಿತ್ತೊಗೆದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ನಾಂದಿ ಹಾಡಿದ್ದಾರೆ. ಅಲ್ಲಿ ಪ್ರತಿಯೊಬ್ಬ ನಾಗರಿಕರು ಸಮಾನರು. ಜನರಿಂದ ಆಯ್ಕೆಯಾಗುವ ಸರ್ಕಾರ ಮತ್ತು ಪ್ರಜಾಪ್ರಭುತ್ವದಲ್ಲಿ ಸೆಂಗೋಲ್ನ ಪಾತ್ರವಿಲ್ಲ” ಎಂದು ತಿಳಿಸಿದ್ದಾರೆ.
ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಂಸದ ಬಿನೋಯ್ ವಿಶ್ವಂ ಪ್ರತಿಕ್ರಿಯಿಸಿ, “ಕುಸ್ತಿಪಟುಗಳಿಗೆ ಹೊಡೆಯುವ ಸಂದರ್ಭದಲ್ಲಿ ಬಂದಿರುವ ಸೆಂಗೋಲ್ಗೆ ನಮಸ್ಕಾರಗಳು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಭಾರತದ ಪ್ರಮುಖ ಕ್ರೀಡಾಪಟುಗಳನ್ನು ಇಂದು ನೂತನ ಸಂಸತ್ ಭವನದ ಕಡೆಗೆ ಮೆರೆವಣಿಗೆ ಹೊರಟಿದ್ದಾಗ ಬಂಧಿಸಲಾಗಿದೆ. ಪ್ರಖ್ಯಾತ ಕುಸ್ತಿಪಟುಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಮನಕಲಕುವಂತಿವೆ.
“ಈ ಆರಂಭವು ಹೊಸ ಸಂಸತ್ತಿನ ಹಾದಿಗೆ ಸಾಕ್ಷಿಯಾಗಿದೆ. ನಿರ್ದಯ ಫ್ಯಾಸಿಸ್ಟ್ ನಿರಂಕುಶಪ್ರಭುತ್ವ ಕಾಣುತ್ತಿದೆ. ಪ್ರಧಾನಿಯವರು ಸಾವರ್ಕರ್ ಅವರ ಮುಂದೆ ನಮಸ್ಕರಿಸಿದಾಗ, ದೇಶವು ಅವರ [ಸಾವರ್ಕರ್] ಕ್ಷಮಾದಾನ ಅರ್ಜಿಗಳನ್ನು ನೆನಪಿಸಿಕೊಂಡಿತು. ಅವರು ಹೊಸ ಸಂಸತ್ತನ್ನು [ಗೌತಮ್] ಅದಾನಿ ಮತ್ತು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮಾಡಲು ಬಳಸಲು ಪ್ರಯತ್ನಿಸುತ್ತಾರೆ. ನಾವು ಅದರ ವಿರುದ್ಧ ಹೋರಾಡುತ್ತೇವೆ” ಎಂದು ವಿಶ್ವಂ ಹೇಳಿದ್ದಾರೆ.
ಇದನ್ನೂ ಓದಿರಿ: ಜಂತರ್ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದ ಕುಸ್ತಿಪಟುಗಳ ಬಂಧನ; ಎತ್ತ ಸಾಗುತ್ತಿದೆ ಭಾರತ?
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್ ದೀಪಂಕರ್ ಭಟ್ಟಾಚಾರ್ಯ ಅವರು ಪ್ರತಿಕ್ರಿಯಿಸಿ, “ಹೊಸ ಸಂಸತ್ತಿನ ಕಟ್ಟಡ ಉದ್ಘಾಟನಾ ಸಮಾರಂಭ ರಾಜನ ಪಟ್ಟಾಭಿಷೇಕದಂತೆ ಕಂಡಿತು” ಎಂದು ಟೀಕಿಸಿದ್ದಾರೆ.
“ಮಹಿಳಾ ಮಹಾಪಂಚಾಯತ್ ನಡೆಸಲು ಮುಂದಾಗಿದ್ದ ಮಹಿಳಾ ಕುಸ್ತಿಪಟುಗಳು ಮತ್ತು ಇತರ ನಾಗರಿಕರ ಮೇಲೆ ದೆಹಲಿಯಲ್ಲಿ ಭಾರೀ ದಬ್ಬಾಳಿಕೆ ನಡೆದಿದೆ. ಪ್ರಜಾಪ್ರಭುತ್ವ, ಸಾಂವಿಧಾನಿಕ ಮನೋಭಾವ ಮತ್ತು ದೃಷ್ಟಿಕೋನದ ಮೇಲೆ ಕ್ರೂರ ಆಕ್ರಮಣ ಜರುಗಿದೆ” ಎಂದು ವಿಷಾದಿಸಿದ್ದಾರೆ.
ಆರ್ಜೆಡಿ ಟ್ವೀಟ್ ಗದ್ದಲ
ಇದರ ನಡುವೆ ಹೊಸ ಸಂಸತ್ ಕಟ್ಟಡದ ಆಕಾರವನ್ನು ಶವಪೆಟ್ಟಿಗೆಯ ಆಕಾರಕ್ಕೆ ಹೋಲಿಸಿ ರಾಷ್ಟ್ರೀಯ ಜನತಾ ದಳ ಟ್ವೀಟ್ ಮಾಡಿರುವುದು ವಿವಾದಕ್ಕೆ ಗುರಿಯಾಗಿದೆ.
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023
ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಪ್ರತಿಕ್ರಿಯಿಸಿ, “ದೇಶದ ಜನರು 2024ರಲ್ಲಿ ನಿಮ್ಮನ್ನು ಅದೇ ಶವಪೆಟ್ಟಿಗೆಯಲ್ಲಿ ಹೂಳುತ್ತಾರೆ. ಪ್ರಜಾಪ್ರಭುತ್ವದ ಹೊಸ ದೇವಾಲಯವನ್ನು ಪ್ರವೇಶಿಸಲು ನಿಮಗೆ ಅವಕಾಶ ನೀಡುವುದಿಲ್ಲ” ಎಂದಿದ್ದಾರೆ.
ರಾಷ್ಟ್ರೀಯ ಜನತಾ ದಳದ ನಾಯಕ ಶಕ್ತಿ ಸಿಂಗ್ ಯಾದವ್ ಪ್ರತಿಕ್ರಿಯಿಸಿ, “ಟ್ವೀಟ್ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಪ್ರತಿನಿಧಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.