Homeಕರ್ನಾಟಕನಮ್ಮ ಸಚಿವರಿವರು; ಅಂಬೇಡ್ಕರ್‌ವಾದಿ, ಯುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆಯವರ ರಾಜಕೀಯ ಹಾದಿ

ನಮ್ಮ ಸಚಿವರಿವರು; ಅಂಬೇಡ್ಕರ್‌ವಾದಿ, ಯುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆಯವರ ರಾಜಕೀಯ ಹಾದಿ

- Advertisement -
- Advertisement -

ಬಿಜೆಪಿ ಸರ್ಕಾರದ ಭ್ರಷ್ಟಾಚಾರ-ಹಗರಣಗಳ ವಿರುದ್ಧ ಸತತ ನಾಲ್ಕು ವರ್ಷಗಳ ಕಾಲ ದನಿಯೆತ್ತಿದ್ದ, ಆರ್‌ಎಸ್‌ಎಸ್-ಹಿಂದುತ್ವ ಸಂಘಟನೆಗಳ ಅನಾಚಾರದ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ, ಕೊಲೆ ಬೆದರಿಕೆಯಂತಹ ಷಡ್ಯಂತ್ರಗಳನ್ನು ದಿಟ್ಟವಾಗಿ ಎದುರಿಸಿದ ಅಂಬೇಡ್ಕರ್‌ವಾದಿ, ಯುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಡ ಅಸ್ಪೃಶ್ಯ ಕುಟುಂಬದಲ್ಲಿ ಹುಟ್ಟಿ, ಗಲಭೆಯಲ್ಲಿ ತಾಯಿ ಮತ್ತು ಸಹೋದರಿಯರನ್ನು ಕಳೆದುಕೊಂಡು, ಕೂಲಿ ಮಾಡಿ ಕಾಲೇಜು ಶಿಕ್ಷಣ ಪಡೆದು, ಮಿಲ್ ಕಾರ್ಮಿಕರ ಸಂಘಟನೆ ಕಟ್ಟಿ, ಆರ್‌ಪಿಐ ಪಕ್ಷದಿಂದ ಸ್ಥಳೀಯ ಚುನಾವಣೆಗಳಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ, ಕಾಂಗ್ರೆಸ್ ಸೇರಿ ಸತತ 9 ಸಲ ಶಾಸಕರಾಗಿ, ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ, ರಾಜ್ಯಸಭೆಯ ಸದಸ್ಯರಾಗಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಮತ್ತು ಈಗ ಎಐಸಿಸಿ ಅಧ್ಯಕ್ಷರಾಗಿರುವ ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಧಾಬಾಯಿ ಖರ್ಗೆಯವರ ಪುತ್ರನಾಗಿ ಪ್ರಿಯಾಂಕ ಖರ್ಗೆ ನವೆಂಬರ್ 22, 1978ರಂದು ಜನಿಸಿದರು. ಡಿಪ್ಲೊಮಾ ಇನ್ ಗ್ರಾಫಿಕ್ಸ್ ಅಂಡ್ ಎನಿಮೇಷನ್ ಪದವಿ ಪಡೆದಿರುವ ಅವರು ದೇಶ ಹಾಗೂ ವಿದೇಶಗಳ ಕಾರ್ಪೊರೆಟ್ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಸ್ಟಾರ್ಟ್‌ಅಪ್ ಕಂಪನಿಗಳನ್ನು ಸಹ ಆರಂಭಿಸಿ ಮುನ್ನಡೆಸಿರುವ ಹೆಗ್ಗಳಿಕೆ ಅವರದ್ದು.

ತಮ್ಮ 20ನೇ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸದಸ್ಯತ್ವ ಪಡೆದ ಪ್ರಿಯಾಂಕ್, 2001ರ ವೇಳೆಗೆ ಕಾಲೇಜು ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 2005ರಲ್ಲಿ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಆನಂತರ 2007ರಲ್ಲಿ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. 2011ರಲ್ಲಿ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

2009ರಲ್ಲಿ ಚಿತ್ತಾಪುರದ ಶಾಸಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾರಣ ತೆರವಾದ ಸ್ಥಾನಕ್ಕೆ ಪ್ರಿಯಾಂಕ ಖರ್ಗೆ ಮೊದಲ ಬಾರಿಗೆ ಸ್ಪರ್ಧಿಸಿದರು. ಆದರೆ ಬಿಜೆಪಿಯ ವಾಲ್ಮೀಕಿ ನಾಯಕ್ ಎದುರು ಸೋಲು ಕಂಡರು. ಧೃತಿಗೆಡದೆ ಕಾಂಗ್ರೆಸ್ ಪಕ್ಷ ಕಟ್ಟುವುದರಲ್ಲಿ ತೊಡಗಿಸಿಕೊಂಡ ಪ್ರಿಯಾಂಕ್, 2013ರಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಅದೇ ವಾಲ್ಮೀಕಿ ನಾಯಕ್‌ರವರನ್ನು 31,191 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

2016ರಲ್ಲಿ ಅಂದಿನ ಸಿ.ಎಂ ಸಿದ್ದರಾಮಯ್ಯನವರ ಸಂಪುಟದಲ್ಲಿ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾಗುವ ಮೂಲಕ ಅತ್ಯಂತ ಕಿರಿಯ ಸಚಿವ ಎಂಬ ಖ್ಯಾತಿಗೆ ಪಾತ್ರರಾದರು. ಆಗ ಅವರಿಗೆ 38 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಪ್ರಿಯಾಂಕ ಖರ್ಗೆ ಬಿಜೆಪಿಯ ವಾಲ್ಮೀಕಿ ನಾಯಕ್ ಎದುರು 4,393 ಮತಗಳ ಅಂತರದಿಂದ ಗೆದ್ದು ಬಂದರು. ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಅವರು ಐರಾವತ, ಪ್ರಬುದ್ಧ, ಪ್ರಗತಿ, ಸಮೃದ್ಧಿ ಹಾಗೂ ಉನ್ನತಿ ಎಂಬ ದಲಿತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.

ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ ಖರ್ಗೆಯವರು ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಿಎಸ್‌ಐ ಹಗರಣ, ಬಿಟ್‌ಕಾಯಿನ್ ಹಗರಣದ ವಿರುದ್ಧ ಸಾಕ್ಷಿ ಸಮೇತ ದನಿಯೆತ್ತಿದರು. ಆರ್‌ಎಸ್‌ಎಸ್ ಅವಾಂತರಗಳನ್ನು ಎಳೆಎಳೆಯಾಗಿ ಜನರೆದುರು ಬಿಚ್ಚಿಟ್ಟರು. ಅದಕ್ಕಾಗಿ ಮಣಿಕಂಠ ರಾಥೋಡ್ ಎಂಬ ರೌಡಿ ಶೀಟರ್ ಪ್ರಿಯಾಂಕ ಖರ್ಗೆಯನ್ನು ಶೂಟ್ ಮಾಡುತ್ತೇನೆಂಬ ಕೊಲೆ ಬೆದರಿಕೆ ಕೂಡ ಹಾಕಿದ್ದರು. ಆನಂತರ ಅದೇ ವ್ಯಕ್ತಿ ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕ್ ವಿರುದ್ಧ ಸ್ಪರ್ಧಿಸಿದ್ದರು. ಆ ಸಮಯದಲ್ಲಿಯೂ ಕೂಡ ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ ಎಂದು ಹೇಳಿದ್ದ ಆಡಿಯೋ ವೈರಲ್ ಆಗಿತ್ತು. ಚುನಾವಣಾ ಸಮಯದಲ್ಲಿಯೇ ಪ್ರಿಯಾಂಕ ಖರ್ಗೆ ಪತ್ನಿ ಶ್ರುತಿ ಖರ್ಗೆಯವರ ಆರೋಗ್ಯ ಹದಗೆಟ್ಟಿತ್ತು. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿದ ಪ್ರಿಯಾಂಕ ಖರ್ಗೆ ಕೊನೆಗೂ 13,640 ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಿದರು.

10 ವರ್ಷಗಳ ಕಾಲ ಶಾಸಕರಾಗಿರುವ ಮತ್ತು ಈಗಾಗಲೇ ಎರಡು ಬಾರಿ ಸಚಿವರಾಗಿರುವ ಪ್ರಿಯಾಂಕ ಖರ್ಗೆ ವಾಡಿ ಹಾಗೂ ಚಿತ್ತಾಪುರಗಳನ್ನು ಉತ್ತಮ ಶೈಕ್ಷಣಿಕ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ನೆರವಾಗಿದ್ದಾರೆ. ಬೆಂಗಳೂರಿನಲ್ಲಿ ’ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ’ (ಬಿಎಎಸ್‌ಇ) ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎರಡು ವರ್ಷಗಳ ಕಾಲ ಅದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಚಿತ್ತಾಪುರ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹಾಗೂ ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಳೆಯಾಧಾರಿತ ಜಮೀನುಗಳಿಗೆ ನೀರಾವರಿ ಒದಗಿಸಲು ಯತ್ನಿಸಿದ್ದಾರೆ.

ಪ್ರಿಯಾಂಕ ಖರ್ಗೆಯವರದು ಯಾವಾಗಲೂ ಜನಪರ, ಜಾತ್ಯತೀತ ಮತ್ತು ಜೀವಪರ ನಿಲುವು. ಬುದ್ಧಾನುಯಾಯಿಯಾದ ಅವರು ಸಂವಿಧಾನ ವಿರೋಧಿ ಶಕ್ತಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಹಾಗಾಗಿ ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಖಾತೆ ದೊರೆಯಬಹುದು ಎಂಬ ಚರ್ಚೆಗಳು ಕೂಡ ಚಾಲ್ತಿಯಲ್ಲಿವೆ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...