ಪಕ್ಷದ ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನವನ್ನು ಬಿಟ್ಟುಕೊಡಲು ಸಿದ್ದ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬದ್ದರಾಗಿರಲೇಬೇಕು. ಅವರಿಗಾಗಿ ಸಚಿವ ಸ್ಥಾನ ಬಿಟ್ಟುಕೊಡಬೇಕೆಂದು ಹೈಕಮಾಂಡ್ ಹೇಳಿದರೆ ಅದನ್ನು ಪಾಲಿಸುತ್ತೇನೆ, ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ ತಾಲಿಬಾನಿಗಳಿಗೆ ಸಹಕಾರ ನೀಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಕಾಂಗ್ರೆಸಿಗರು, ಕಮ್ಯೂನಿಸ್ಟ ಸೇರಿ ಒಟ್ಟಾಗಿ ಪಿತೂರಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪಾಕಿಸ್ತಾನ, ಅಪಘಾನಿಸ್ಥಾನ, ಬಾಂಗ್ಲಾದೇಶದಿಂದ ಮತೀಯ ಕಾರಣಕ್ಕೆ ಕಿರುಕುಳಕ್ಕೆ ಒಳಗಾಗಿ ಇಲ್ಲಿಗೆ ವಲಸೆ ಬಂದ ನಿರಾಶ್ರಿತರಿಗೆ ಭಾರತ ಆಶ್ರಯ ಕೊಡದೇ ಬೇರೆ ಯಾರು ಕೊಡುತ್ತಾರೆ? ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಬೇಕು ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡರು.
ಹಿಂದೂ, ಸಿಖ್, ಭೌದ್ದರೂ ಪಾಕಿಸ್ತಾನ, ಬಾಂಗ್ಲದಲ್ಲಿ ಅಲ್ಪಸಂಖ್ಯಾತರು. ಆ ಕಾರಣಕ್ಕೆ ಅವರಿಗೆ ಪೌರತ್ವ ಕೊಡುವ ತಿರ್ಮಾನ ಮಾಡಲಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ತಾಲಿಬಾನಿಗಳ ಜೊತೆ ಸೇರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಹುನ್ನಾರವನ್ನು ಬಯಲಿಗೆಳೆಯುತ್ತೇವೆ ಎಂದು ತಿಳಿಸಿದ್ದಾರೆ.