ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಎನ್.ವಿ ರಮಣ ನೇತೃತ್ವದ ಪೀಠ ಇಂದಿನಿಂದ ಮಹತ್ವದ ಪೆಗಾಸಸ್ ಸ್ಪೈವೇರ್ ಪ್ರಕರಣದ ವಿಚಾರಣೆ ಆರಂಭಿಸಿದೆ. ಈ ಕುರಿತು ನೇಮಿಸಿದ್ದ ತನಿಖಾ ಪ್ಯಾನಲ್ ಮೂರು ಭಾಗಗಳಲ್ಲಿ ವರದಿ ಸಲ್ಲಿಸಿದ್ದು ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲವೆಂದು ಆರೋಪಿಸಿದೆ.
ತನಿಖೆಗೆ ಸರ್ಕಾರದ ಅಸಹಕಾರದ ಕುರಿತು ಜನರಲ್ ಸಾಲಿಸಿಟರ್ ತಮಗೆ ತಿಳಿದಿಲ್ಲ ಎಂದಾಗ “ನೀವು ಇಲ್ಲಿ ತೆಗೆದುಕೊಂಡ ಅದೇ ನಿಲುವನ್ನು ನೀವು ಅಲ್ಲಿ ತೆಗೆದುಕೊಂಡಿದ್ದೀರಿ” ಎಂದು ರಮಣ ಹೇಳಿದ್ದಾರೆ.
ಪೆಗಾಸಸ್ ಸಮಿತಿಯ ವರದಿಯ ಕೆಲವು ಭಾಗವು ಗೌಪ್ಯವಾಗಿದೆ ಮತ್ತು ಖಾಸಗಿ ಮಾಹಿತಿಯನ್ನು ಒಳಗೊಂಡಿರಬಹುದು. ತಾಂತ್ರಿಕ ಸಮಿತಿಯ ವರದಿಗಳನ್ನು ಸಾರ್ವಜನಿಕಗೊಳಿಸದಿರಬಹುದು ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ ಎಂದು ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
29 ಫೋನ್ಗಳನ್ನು ಸ್ಕ್ಯಾನ್ ಮಾಡಲಾಗಿದ್ದು 5 ರಲ್ಲಿ ಕೆಲವು ಮಾಲ್ವೇರ್ ವೈರಸ್ಗಳಿರುವುದು ಪತ್ತೆಯಾಗಿದೆ. ಆದರೆ ಪೆಗಾಸಸ್ ಇರುವುದರ ಕುರಿತು ನಿರ್ಣಾಯಕ ಪುರಾವೆಗಳು ಸಿಕ್ಕಿಲ್ಲ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ರಚಿಸಿರುವ ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಶೀಲಿಸುತ್ತಿದೆ. ಸಂಪೂರ್ಣ ವರದಿಯನ್ನು ಪರಿಶೀಲಿಸದೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ರಮಣ ಹೇಳಿದರು.
ವಕೀಲರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮನವಿ ಮಾಡಿದಾಗ, ನಾಳೆಯ ನಂತರ ತನ್ನ ಅಭಿಪ್ರಾಯ ಹೇಳುವುದಾಗಿ ತಿಳಿಸಿದ ರಮಣರವರು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದ್ದಾರೆ.
ಇದನ್ನು ಓದಿ: ಪೆಗಾಸಸ್ ಪಟ್ಟಿಯಲ್ಲಿದ್ದ ಜಾರ್ಖಂಡ್ ಪತ್ರಕರ್ತನ ಬಂಧನ; ದಿಟ್ಟ ವರದಿಗಾರಿಕೆಯೇ ಮುಳುವಾಯಿತೆ?