ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
“ಈ ಯೋಜನೆಯು ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ನೀತಿ ನಿರ್ಧಾರವಾಗಿದೆ” ಎಂದು ಸೂಚಿಸಿದ ಹೈಕೋರ್ಟ್, “ಈ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ನ್ಯಾಯಾಲಯಕ್ಕೆ ಕಂಡುಬಂದಿಲ್ಲ. ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ” ಎಂದು ತಿಳಿಸಿದೆ.
2019ರ ನೇಮಕಾತಿ ಅಧಿಸೂಚನೆ/ಜಾಹೀರಾತುಗಳನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು, “ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಜಿಗಳನ್ನು ವಜಾಗೊಳಿಸಲಾಗಿದೆ” ಎಂದಿದೆ.
ಕಳೆದ ವರ್ಷ ಡಿಸೆಂಬರ್ 15ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಜೂನ್ 14, 2022 ರಂದು ಅನಾವರಣಗೊಂಡ ಅಗ್ನಿಪಥ್ ಯೋಜನೆಯು, ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ತಿಳಿಸಿದೆ.
ಹದಿನೇಳೂವರೆ ವರ್ಷದಿಂದ 21 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅವರನ್ನು ನಾಲ್ಕು ವರ್ಷಗಳ ಅಧಿಕಾರಾವಧಿಗೆ ಸೇನೆಗೆ ಸೇರಿಸಲಾಗುತ್ತದೆ. ನೇಮಕವಾದ 25 ಪ್ರತಿಶತದಷ್ಟು ಜನರಿಗೆ ಮಾತ್ರ ನಂತರದ ದಿನಗಳಲ್ಲಿ ನಿಯಮಿತ ಸೇವೆಯನ್ನು ನೀಡಲು ಅವಕಾಶವನ್ನು ಈ ಯೋಜನೆ ನೀಡಿತ್ತು.
ಯೋಜನೆ ಅನಾವರಣಗೊಂಡ ನಂತರ, ಯೋಜನೆಯ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ನಂತರ ಸರ್ಕಾರವು ತನ್ನ ನಿಲುವು ಬದಲಿಸಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತ್ತು.
ಇದನ್ನೂ ಓದಿರಿ: ’ಅಗ್ನಿಪಥ್’ ಯೋಜನೆ; ’ಎಕ್ಸೆಕ್ಯುಟಿವ್’ ಆಡಳಿತ ಎಂಬುದು ಸರ್ವಾಧಿಕಾರದ ’ಪ್ರಾಕ್ಸಿ’
ಅಗ್ನಿಪಥ್ ಘೋಷಣೆಯಾದಾಗ ಕಳೆದ ವರ್ಷ ಜೂನ್ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಆ ವೇಳೆ ಸುಮಾರು 35 ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ಬಿಹಾರದಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ರೈಲು, ರಸ್ತೆ ತಡೆಯನ್ನು ನಡೆಸಿದ್ದರು. ಪ್ರತಿಭಟನಾಕಾರರು ಸರನ್ ಜಿಲ್ಲೆಯ ಛಾಪ್ರಾದಲ್ಲಿ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದ್ದರು. ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದರು. ಆಶ್ರುವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಬಲಿಯಾದಲ್ಲಿ ‘ಭಾರತ್ ಮಾತಾ ಕಿ ಜೈ’ ಮತ್ತು ‘ಅಗ್ನಿಪಥ್ ವಾಪಾಸ್ ಲೋ’ (ಅಗ್ನಿಪಥ್ ಯೋಜನೆ ಹಿಂಪಡೆಯಿರಿ) ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಖಾಲಿ ರೈಲಿಗೆ ಬೆಂಕಿ ಹಚ್ಚಿದ್ದರು. ಇತರ ಕೆಲವು ರೈಲುಗಳನ್ನು ಧ್ವಂಸಗೊಳಿಸಿದ್ದರು.