Homeಮುಖಪುಟಹೈದರಾಬಾದ್ ವಿವಿ ಚುನಾವಣೆ: ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿ ಆಯ್ಕೆ

ಹೈದರಾಬಾದ್ ವಿವಿ ಚುನಾವಣೆ: ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿ ಆಯ್ಕೆ

ಲಿಂಗ ಸಂವೇದನೆ ಸಮಿತಿಗೆ ಪ್ರತಿನಿಧಿಯಾಗಿ ಟ್ರಾನ್ಸ್ ಯುವತಿ ಆಯ್ಕೆಯಾಗಿದ್ದಾರೆ.

- Advertisement -
- Advertisement -

ಪರಿಶಿಷ್ಟ ಜಾತಿಯ ಮಹಾರ್ ಸಮುದಾಯಕ್ಕೆ ಸೇರಿದ 24 ವರ್ಷದ ಪ್ರಜ್ವಲ್ ಚಂದ್ರಕಾಂತ್ ಗಾಯಕವಾಡ ಅವರು ಫೆಬ್ರವರಿ 25, ಶನಿವಾರದಂದು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ  ಆಯ್ಕೆಯಾದರು.

ಪ್ರಜ್ವಲ್ ಅವರು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ಸಂಚಾಲಕರಾಗಿದ್ದಾರೆ. ಇವರು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್-ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ-ದಲಿತ್ ಸ್ಟೂಡೆಂಟ್ಸ್ ಯೂನಿಯನ್ (ASA-SFI-DSU) ಪ್ಯಾನೆಲ್‌ನಿಂದ ಸ್ಪರ್ಧಿಸಿ 608 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರ ಜೊತೆಗೆ, ಐದು ಇತರ ದಲಿತ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಸಾಮಾಜಿಕ ನ್ಯಾಯದ ಆಂದೋಲನ ಚಾಲ್ತಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಜ್ವಲ್ ಹೇಳಿದ್ದಾರೆ.

“ಯಾವುದೇ ಭಾರತೀಯ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ, ಒಂಬತ್ತು ಹುದ್ದೆಗಳಲ್ಲಿ ಆರು ದಲಿತ ವಿದ್ಯಾರ್ಥಿಗಳು ಸ್ಪರ್ಧಿಸಿ ಗೆಲವು ಕಂಡಿಲ್ಲ, ಜಾತಿ ವಿರೋಧಿ ಚಳವಳಿಯ ಇತಿಹಾಸದಲ್ಲಿ ಇದೊಂದು ವಿಜಯದ ಕ್ಷಣವಾಗಿದೆ” ಎಂದು ಪ್ರಜ್ವಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ಚಂದ್ರಕಾಂತ್ ಗಾಯಕವಾಡ

ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ವಿದ್ಯಾರ್ಥಿಗಳ ಲೈಂಗಿಕ ಕಿರುಕುಳದ ವಿರುದ್ಧ ಲಿಂಗ ಸಂವೇದನೆ ಸಮಿತಿ ಸೇರಿದಂತೆ ವಿದ್ಯಾರ್ಥಿ ಒಕ್ಕೂಟದ ಚುನಾವಣೆಗಳು ಒಂಬತ್ತು ಹುದ್ದೆಗಳಿಗೆ ನಡೆಯುತ್ತವೆ.

ಪ್ರಜ್ವಲ್‌ ಅವರು ಮಹಾರಾಷ್ಟ್ರದ ನಾಸಿಕ್‌ನಿಂದ ಬಂದಿದ್ದು, ಅವರು ಜೆಂಡರ್ ಸ್ಟಡೀಸ್ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅವರ ತಂದೆ ತಾಯಿ ಅಂಬೇಡ್ಕರ್‌ವಾದಿಗಳಾಗಿದ್ದು, ಪ್ರಜ್ವಲ್‌ ಕೂಡ ಯಾವಾಗಲೂ ಅಂಬೇಡ್ಕರ್ ಸಿದ್ಧಾಂತದ ಕಡೆಗೆ ಒಲವು ತೋರುತ್ತಿದ್ದರು. ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪದವಿ  ಓದುವ ಸಮಯದಲ್ಲಿ ತಮ್ಮ ವಿದ್ಯಾರ್ಥಿ ರಾಜಕೀಯವನ್ನು ಪ್ರಾರಂಭಿಸಿದರು. ಅಲ್ಲಿ ಅವರು ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆಯ ಸ್ಥಾಪಕ-ಸದಸ್ಯರಾಗಿದ್ದರು.

ಇದನ್ನೂ ಓದಿ: ಹೈದರಾಬಾದ್‌‌ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸಿದ ವಿದ್ಯಾರ್ಥಿಗಳು

2019ರಲ್ಲಿ ಪ್ರಜ್ವಲ್ ಅವರು ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಮಾಡಿದು, ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಈ ವೇಳೆ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನೊಂದಿಗೆ ಸಂಬಂಧ ಹೊಂದಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೇಲಿನ ತಾರತಮ್ಯದ ವಿರುದ್ಧ ಹಲವು ಹೋರಾಟಗಳನ್ನು ಮುನ್ನಡೆಸಿದ್ದಾರೆ.

”ಸಾಮಾಜಿಕ ನ್ಯಾಯದ ವಿಷಯದಲ್ಲಿ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯು ಇತರ ವಿಶ್ವವಿದ್ಯಾಲಯಗಳಿಗಿಂತ ಬಹಳ ಮುಂದಿದೆ. ಮೀಸಲಾತಿಗಳನ್ನು ರಕ್ಷಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಫೆಲೋಶಿಪ್‌ಗಾಗಿ ಹೋರಾಡುವಲ್ಲಿ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಜ್ವಲ್ ಹೇಳಿದ್ದಾರೆ.

ದಲಿತ ಸಮುದಾಯದ ಅಧ್ಯಕ್ಷರನ್ನು ಹೊಂದುವುದರ ಜೊತೆಗೆ, ವಿದ್ಯಾರ್ಥಿಗಳು ಮೊದಲ ಬಾರಿಗೆ 21 ವರ್ಷದ ಟ್ರಾನ್ಸ್ ಮಹಿಳೆ, ದಲಿತ ಸಮುದಾಯದ ಹೃತಿಕ್ ಲಕ್ಷ್ಮಣ್ ಲಾಲನ್ ಅವರನ್ನು ಲೈಂಗಿಕ ಕಿರುಕುಳದ ವಿರುದ್ಧದ ಲಿಂಗ ಸಂವೇದನೆ ಸಮಿತಿಗೆ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಹೃತಿಕ್ ಲಕ್ಷ್ಮಣ್ ಲಾಲನ್

ಗುಜರಾತ್‌ನ ಕಚ್‌ನಿಂದ ಬಂದಿರುವ ಹೃತಿಕ್ ಅವರು ಸಮಾಜಶಾಸ್ತ್ರದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಅವರು ಮೇಘವಾಲ್ ಜಾತಿಗೆ ಸೇರಿದವರು. ”ಇದೊಂದು ಐತಿಹಾಸಿಕ ಸಾಧನೆ ಎಂದು ಪುನರುಚ್ಚರಿಸಲಾಗುತ್ತಿದೆ. ವಿದ್ಯಾರ್ಥಿ ಸಮುದಾಯದಿಂದ ನನಗೆ ದೊರೆತಿರುವ ಬೆಂಬಲ ಮತ್ತು ಗೌರವದಿಂದ ನಾನು ತುಂಬಾ ವಿನಮ್ರನಾಗಿದ್ದೇನೆ” ಎಂದು ಅವರು ತಮ್ಮ ಕೃತಜ್ಞತೆ ತಿಳಿಸಿದ್ದಾರೆ.

“ಫಲಿತಾಂಶಗಳು ಪ್ರಕಟವಾದಾಗ ನಾನು 2019 ರಲ್ಲಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಅಂಗೀಕರಿಸಿದ ದಿನದ ಬಗ್ಗೆ ಯೋಚಿಸುತ್ತಿದ್ದೆ. ಟ್ರಾನ್ಸ್ ವ್ಯಕ್ತಿಯ ಮೌಖಿಕ ಮತ್ತು ಲೈಂಗಿಕ ನಿಂದನೆಯು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ಅದರ ಷರತ್ತು ಹೇಳುತ್ತದೆ. ಇದು ಮಹಿಳೆಯರ ವಿರುದ್ಧ ಮಾಡಿದ ಅದೇ ಅಪರಾಧಕ್ಕೆ ಹೋಲಿಸಿದರೆ ತೀರಾ ಕಡಿಮೆ. ಬಿಜೆಪಿ ಸರ್ಕಾರದ ಪ್ರತಿಗಾಮಿ ನೀತಿಗೆ ಉತ್ತರವಾಗಿ ನಾನು ಗೆಲುವು ಸಾರ್ಧಿಸಿದ್ದೇನೆ” ಎಂದು ಹೃತಿಕ್ ನೆನಪಿಸಿಕೊಳ್ಳುತ್ತಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರು, ”ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ಕಿರುಕುಳದ ವಿರುದ್ಧದ ಲಿಂಗ ಸಂವೇದನೆ ಸಮಿತಿಗೆ ಟ್ರಾನ್ಸ್ ಮಹಿಳೆಯನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದೇ ರೀತಿ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಟ್ರಾನ್ಸ್ ಮಹಿಳೆಯರನ್ನು ಗುರುತಿಸುವ ಕೆಲಸ ಆಗಬೇಕಿದೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...