ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ನ ಮತ್ತೊಬ್ಬ ಠೇವಣಿದಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಪಿಎಂಸಿ ಬ್ಯಾಂಕ್ ನಲ್ಲಿ ಉಂಟಾದ ಬಿಕ್ಕಟ್ಟಿನಿಂದ ಬೇಸತ್ತು, ಹಣವಿಲ್ಲದೇ ತತ್ತರಿಸಿದ್ದ ಕೆಲ ಠೇವಣಿದಾರರು ಸಾವನ್ನಪ್ಪಿದ್ದರು. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಆಘಾತದಿಂದ ಮೃತಪಟ್ಟಿದ್ದರು. ಈಗ ಮತ್ತೊಬ್ಬ ಠೇವಣಿದಾರ ಮುರಳೀಧರ್ ಧರ ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದೇ ಮೃತಪಟ್ಟಿದ್ದಾರೆ.
ಪಿಎಂಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಮೃತ ಮುರಳೀಧರ್ ಧರ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು. ಚಿಕಿತ್ಸೆಗೆ ಹಣ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹೃದಯಾಘಾತದಿಂದ ಮುಂಬೈನ ಮುಳಂದಾದಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 83 ವರ್ಷದ ಮುರುಳೀಧರ್ ಧರ ಅವರು ಪಿಎಂಸಿ ಬ್ಯಾಂಕ್ ನಲ್ಲಿ 80 ಲಕ್ಷ ರೂ. ಠೇವಣಿ ಇಟ್ಟಿದ್ದರು. ಆದರೆ ಚಿಕಿತ್ಸೆಗೆ ಬೇಕಾದಷ್ಟು ಹಣ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು.
ಪಿಎಂಸಿಯಲ್ಲಿ ನಡೆದ ಹಗರಣದಿಂದಾಗಿ ಆರ್.ಬಿ.ಐ ಹಣ ಪಡೆದುಕೊಳ್ಳುವುದನ್ನು ಸೀಮಿತಗೊಳಿಸಿದೆ. ಹೀಗಾಗಿ ಬೇಕಿದ್ದಷ್ಟು ಹಣವನ್ನು ಠೇವಣಿದಾರರು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮುರಳೀಧರ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆಗೆ ಹೆಚ್ಚು ಹಣ ಬೇಕೆಂದು ಬ್ಯಾಂಕ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಬ್ಯಾಂಕ್ ಅಧಿಕಾರಿಗಳು ಅರ್ಜಿ ತಿರಸ್ಕರಿಸಿ, ಹೆಚ್ಚು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಪಿಎಂಸಿ ಠೇವಣಿದಾರರಿಗೆ ಆರ್.ಬಿ.ಐ ಹೊಸ ನಿಯಮಾವಳಿ ರೂಪಿಸಿದೆ. ಹೀಗಾಗಿ ಆರೋಗ್ಯ ತುರ್ತುಸ್ಥಿತಿಯಲ್ಲಿ ಮತ್ತು ನಿತ್ಯದ ಟ್ರಾನ್ಸ್ಯಾಕ್ಷನ್ ಮೇಲೆ ನಿರ್ಬಂಧ ಹೇರಿದೆ. ಮೊದಲು 1000 ರೂ. ವಿಥ್ ಡ್ರಾ ಮಾಡಲು ಅನುಮತಿ ನೀಡಿದ್ದ ಆರ್.ಬಿ.ಐ, ಸಾಕಷ್ಟು ವಿರೋಧದ ನಂತರ ಕನಿಷ್ಠ 40,000 ರೂಪಾಯಿಗಳನ್ನು ತೆಗೆಯಲು ಅನುಮತಿ ನೀಡಿತು.