ಪಿಎಂಸಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಗ್ರಾಹಕರು ಹಣ ಹಿಂಪಡೆಯಲು ನಿರ್ಬಂಧ ವಿಧಿಸಿರುವುದರಿಂದ ಠೇವಣಿದಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜೀನವ ನಡೆಸುವುದು ತುಂಬ ಕಷ್ಟವಾಗಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.
ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲು ಆಗುತ್ತಿಲ್ಲ. ಆರೋಗ್ಯ ತಪಾಸಣೆ ಮತ್ತು ಔಷಧಿ ಖರೀದಿಗೂ ಹಣದ ಕೊರತೆ ಎದುರಾಗಿದೆ. ಜೀವನ ನಡೆಸುವುದು ಕಷ್ಟವಾಗಿದೆ. ಜೀವನ ಪರ್ಯಂತ ದುಡಿದು ಉಳಿಸಿ ಪಿಎಂಸಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದೆವು. ಈಗ ಹಣ ಬರುವುದೋ ಇಲ್ಲವೋ ಎಂಬ ಭೀತಿ ಎದುರಾಗಿದೆ ಎಂದು ಹೇಳಿಕೊಂಡಿದ್ದಾರೆ.
ವ್ಯಾಪಾರಿಗಳು ಮಾತನಾಡಿ ತಮ್ಮ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಸಂಬಳ ನೀಡಲು ಆಗುತ್ತಿಲ್ಲ. ತೆರಿಗೆ ಪಾವತಿಗೂ ಕಷ್ಟವಾಗಿದೆ. ವಿದ್ಯುತ್ ಶುಲ್ಕ ಕಟ್ಟಲು ಹಣ ಇಲ್ಲ. ಪಿಎಂಸಿ ಬ್ಯಾಂಕ್ ನೀಡಿದ ಚೆಕ್ ಗಳು ಬೌನ್ಸ್ ಆಗಿವೆ ಎಂದು ನೋವು ತೋಡಿಕೊಂಡಿದ್ದಾರೆ.
ಪಶ್ಚಿಮ ದೆಹಲಿಯ ನಿವಾಸಿ ನಿವೃತ್ತ ನೌಕರ ತೋಕ್ ಚಂದ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ತಿಲಕ್ ನಗರ ಶಾಖೆಯಲ್ಲಿ 18 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದೇನೆ. ಅದರ ಬಡ್ಡಿಯಿಂದ ಬರುವ ಹಣದಿಂದಲೇ ಜೀವನ ನಡೆಸಬೇಕಾಗಿದೆ. ನನ್ನ ಪತ್ನಿಗೆ ಡಯಾಲಿಸಿಸ್ ಮಾಡಿಸಬೇಕು. ತಿಂಗಳಿಗೆ 10 ಸಾವಿರ ರೂಪಾಯಿ ಬೇಕು. ಬ್ಯಾಂಕ್ ಬಿಕ್ಕಟ್ಟು ಉದ್ಭವಿಸಿರುವುದರಿಂದ ತೊಂದರೆಯಾಗಿದೆ.
ದಕ್ಷಿಣ ದೆಹಲಿಯ ಮಾಲವಿಯ ನಗರ ವಾಸಿ ಅನುರಾಧ ಸೇನ್ ಹೇಳುವಂತೆ ನಾನು 15 ಲಕ್ಷ ಠೇವಣಿ ಇಟ್ಟಿದ್ದೇನೆ. ಅದರ ಬಡ್ಡಿಯಿಂದ ನನ್ನ ಜೀವನ ನಡೆಯಬೇಕು ಎಂದರೆ ರವೀಮದ್ರ ಕುಮಾರ್ ಎಂಬುವರು ನಾನು 32 ಲಕ್ಷ ಠೇವಣಿ ಇಟ್ಟಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದು ಶಾಲಾ ಶುಲ್ಕ ಕಟ್ಟುವುದು ಕಷ್ಟವಾಗಿದೆ. ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಸು ಬರುತ್ತದೆ. ರಕ್ತದ ಒತ್ತಡದಲ್ಲಿ ಏರುಪೇರಾಗಿದೆ ಎಂದು ಹೇಳಿಕೊಂಡಿರುವುದನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.