ಕಳೆದೆಂಟು ವರ್ಷಗಳಿಂದ ಕಾಯುತ್ತಿದ್ದೇವೆ
‘ಯೋಗ ದಿನ’ ಬರಲೇ ಇಲ್ಲ.
ನೋಟುಬಂಧಿಯ ನಿತ್ರಾಣ
ಬ್ಯಾಂಕ್ ಒಳಗಿನ ಜನರ ಹಣ
ಜೇಬು ಸೇರಲು ಶಿರಸಾಸನ ಹಾಕಿದರು-
‘ಯೋಗ ದಿನ’ ಬರಲೇ ಇಲ್ಲ.
ಮಳೆ ಚಳಿ ಬಿಸಿಲೆನ್ನದೆ
ದಿಕ್ಕೆಟ್ಟು ನಡು ರಸ್ತೆಯಲಿ ಕೂತ
ರೈತನಿಗದೇ ಪದ್ಮಾಸನ!
ಇಲ್ಲೇ ಹುಟ್ಟಿ ಬೆಳೆದವನಿಗೆ
ಸಿಎಎ ಉರುಳು, ಬೀಸಿದವು ಲಾಠಿ,
ಅಶ್ರುವಾಯು,
ಬೀದಿಯಲಿ ಬಂದೂಕು
ಬೀದಿಯಲಿ ಬಂದೂಕು
ಝಳುಪಿಸಿದಾತನ ಹಿಂದೆ ಪೊಲೀಸರ
ಮುಗುಳುನಗೆ-
‘ಯೋಗ ದಿನ’ ಬರಲೇ ಇಲ್ಲ.
ಎಂಟು ವರ್ಷಗಳ ‘ಅಗ್ನಿ ಪಥ’
ಸಾಗುತ್ತಲೇ ಇದೆ-
ತಣ್ಣನೆಯ ಅರಳಿಮರ ಸಿಗಲೇ ಇಲ್ಲ!
ನವಿಲುಗಳು ಚೀರುತ್ತಿವೆ
ಈ ಕೋಮಾಗ್ನಿಯ ದುಳ್ಳುರಿಗೆ.
‘ಯೋಗ ದಿನ’ ಬರಲೇ ಇಲ್ಲ.
ನಾಯಿ ಸತ್ತರೆ ಅಳುವ ರಾಜ;
ಬೀದಿಯಲಿ ರಕ್ತಸಿಕ್ತವಾಗಿ ಬಿದ್ದ
ಬಡಪಾಯಿ ಹೆಣಕಂಡು ಕರಗಲಿಲ್ಲ!
ದುಪ್ಪಟದ ಮೇಲೆಯೇ ಮೂರು ತಿಂಗಳ ಚರ್ಚೆ
ಪರ್ಸೆಂಟೇಜಿನ ಲೆಕ್ಕದಲ್ಲಿ ಅಭಿವೃದ್ಧಿ ಮೂರ್ಛೆ
ಮಸೀದಿ, ಚರ್ಚುಗಳ ಉತ್ಖನನ
ಮತಾಂತರದ ಹುಸಿವಾದ
ಕಾಯುತ್ತಲೇ ಇದ್ದೇವೆ
‘ಯೋಗ ದಿನ’ ಬರಲೇ ಇಲ್ಲ.
ಹತ್ರಾಸಿನ ಸಹೋದರಿ
ರಾತ್ರೋರಾತ್ರಿ ಬೂದಿಯಾದಳು
ಗಂಗೆಯಲಿ ಹೆಣರಾಶಿ ತೇಲಿಹೋದವು
ಕಲಿಕೆ ಕುಂಠಿತವಾದ ಮಕ್ಕಳ ತಲೆಗೆ
ಕೇಸರಿ ರುಮಾಲು ಸುತ್ತುವ ತವಕ
ಶಾಲಾಂಗಳದಲ್ಲೇ ಬಂದೂಕು ತರಬೇತಿ!
ಯಾವ ಆಸನ ಹಾಕಿದರೆ ‘ಅಚ್ಚೇ ದಿನ’ ಬರುತ್ತದೆ?
ಕೋಮಾಸನ? ಜಾತ್ಯಾಸನ?
ಮತಾಸನ? ಮಾತಾಸನ?
ಮರೆವಾಸನ? ಇರಿವಾಸನ?
– ಬಂತೋ?
‘ಯೋಗ ದಿನ’
– ಯತಿರಾಜ್ ಬ್ಯಾಲಹಳ್ಳಿ
Fantastic
ವಾಸ್ತವತೆಗೆ ಕನ್ನಡಿ ಹಿಡಿದಂತಿದೆ ಕವನ.. ನಿಮ್ಮಿಂದ ಇನ್ನೂ ಹೆಚ್ಚು ಬರಲಿ.. ಧನ್ಯವಾದಗಳು..