ಬೆನ್ನಿಗೆ ಸಾಣೆ ಯಂತ್ರವನಾನಿಸಿ
ಉರಿಬಿಸಿಲಲೂ ಬದುಕಿನ ಕಥೆಯ ಹೆಣೆಯುತ್ತಾನೆ
ಕತ್ತರಿ ಸಾಣೆಯ ಮುದುಕ!
ಥೇಟ್ ವಿಕ್ರಮಾದಿತ್ಯ ಬೇತಾಳರಂತೆ
ಹಳ್ಳಿ, ಗಲ್ಲಿ, ಓಣಿ, ಗದ್ದೆ ಬದುವಿನಲ್ಲಿ
ಹೊಟ್ಟೆಯ ಬೆನ್ನಿಗಂಟಿಸಿಕೊಂಡು ಓಡಾಡುತ್ತಾನೆ
ದಿಬ್ಬವೇರುತ್ತಾನೆ ಮತ್ತೆ ಇಳಿಯುತ್ತಾನೆ
ಬೀಡಿ ಸೂಪು ಮಡಿಲೇರಿಸಿಕೊಂಡವರ
ಮನೆಯ ಮುಂದೆ
ಭಾರ ಇಳಿಸಿಕೊಳ್ಳುತ್ತಾನೆ
ದೂರದೂರಿಂದ ಬಂದವನಿಲ್ಲಿ
ಬದುಕಿಗೆ ಬಣ್ಣ ತುಂಬಿಕೊಳ್ಳುತ್ತಾನೆ
ಅವನಿಡುವ ಒಂದೊಂದು ಅಡಿಯೂ
ಬೆನ್ನಿಗಿಂತ ಭಾರ..ಘೋರ
ಬಣ್ಣ ಮಾಸಿದ ಪಂಚೆ, ಸವೆದ ಚಪ್ಪಲಿ
ಜಿನುಗುವ ಬೆವರನೊರೆಸಲು
ಅಲ್ಲೇ ಹೆಗಲ ಪಕ್ಕದಲ್ಲಿ
ಜಾಗ ಗಿಟ್ಟಿಸಿಕೊಂಡ
ಪುಟ್ಟದೊಂದು ಬೈರಾಸು
ಬೆವರ ಇಂಗಿಸಿಕೊಂಡು ಅರೆಜೀವವಾಗಿದೆ
ಕಾಲಲ್ಲಿ ತುಳಿಯುತ್ತಾನೆ
ಗಾಲಿ ಮೇಲೇರುತ್ತದೆ
ಮತ್ತೆ ಕೆಳಗಿಳಿಯುತ್ತದೆ
ಒಟ್ಟಿನಲ್ಲಿ ತಿರುಗುತ್ತದೆ
ಬಾಳ ಚಕ್ರದ ಚಿತ್ರವೊಂದು
ಮೂಡಿ ಮರೆಯಾಗುತ್ತದೆ..
ಸಾಣೆಗಲ್ಲಿಗೆ ಮೂತಿ ಒರೆಸಿಕೊಂಡ
ಕತ್ತರಿಯು ಕಿರ್ರನೆ ಕಿರುಚಿದಾಗ
ಚಿರ್ರನೆ ನೆಗೆಯುವ ಕಿಡಿಗೆ
ಕತ್ತರಿಯ ಬಾಯಿ ಹೊಳೆಯುತ್ತದೆ
ಬದುಕು ಹರಿತವಾಗುತ್ತದೆ
ಅರ್ಧ ಶತಮಾನವನ್ನು
ಇಲ್ಲಿ ಬಂದು ಮಿಂದು,ಬೆಂದು
ಕರಗಿಸಿಕೊಂಡಿದ್ದಾನೆ
ಗಳಿಸಿದ್ದೆಷ್ಟು ಗೊತ್ತಿಲ್ಲ
ಉಳಿಸಿದ್ದು?
ಅದೂ ಗೊತ್ತಿಲ್ಲ
ಕಂಡಕಂಡಲ್ಲಿ ಅವನ ಬದುಕಿನೊಳಗೆ
ಇಣುಕಿ ನೋಡುತ್ತೇನೆ
ಅವನಿಗೇನೂ ಲಾಭವಾಗುವುದಿಲ್ಲ..
ನಾಲ್ಕು ಪಂಕ್ತಿಯ ಪದ ತಂತಿಯಲಿ
ಕಟ್ಟಿ ಹಾಕುತ್ತೇನೆ; ಸೋಲುತ್ತೇನೆ
ಅವನುದುರಿಸಿದ ಬೆವರ ಪನಿಯ ಕ್ಷಾರಕೆ
ಹನಿಸಿದ ಶಾಯಿ ಪೇಲವವಾಗುತ್ತದೆ
ಇದನ್ನೂ ಓದಿ: ಓದಲಿಕ್ಕಿದೆ ಕಾರಣ ಇಪ್ಪತ್ತೊಂದು! 2021ರಲ್ಲಿನ ನಿರೀಕ್ಷಿತ ಪುಸ್ತಕಗಳು