ಕರ್ನಾಟಕ ದಲಿತ ಸಮಘರ್ಷ ಸಮಿತಿ (ಅಂಬೇಡ್ಕರ್ವಾದ) ವತಿಯಿಂದ, ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಏರ್ಪಟ್ಟಿದ್ದ 1932 ಸೆ.24 ರ ಒಪ್ಪಂದವನ್ನು “ಪೂನಾ ಒಪ್ಪಂದ ದಿನ” ಎಂದು ಸ್ಮರಿಸುವ ಕಾರ್ಯಕ್ರಮವನ್ನು ಇದೇ ಸೆ. 27ರಂದು ಉಡುಪಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೂನಾ ಒಪ್ಪಂದದ ಚಾರಿತ್ರಿಕ ಮಹತ್ವದ ಕುರಿತು ವಕೀಲರಾದ ಮಂಜುನಾಥ್.ವಿ ಮುಖ್ಯ ಭಾಷಣ ಮಾತನಾಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಸುಂದರ್ ಮಾಸ್ತರ್ ನಾನುಗೌರಿ.ಕಾಂಗೆ ತಿಳಿಸಿದರು.
“ಸೆ.24 ಪೂನಾ ಒಪ್ಪಂದ ನಡೆದ ದಿನ. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಒಪ್ಪಂದ ಏರ್ಪಟ್ಟು, ದಲಿತರ ಪಾಲಿಗೆ ಐತಿಹಾಸಿಕ ಪ್ರಮಾದವಾದ ದಿನ. 1932 ರಲ್ಲಿ ಲಂಡನ್ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ದಲಿತರಿಗೆ ಎರಡು ಮತಗಳ ಹಕ್ಕನ್ನು ತಂದುಕೊಟ್ಟಿದ್ದರು. ಆದರೆ ಇದರಿಂದ ಹಿಂದೂ ಸಮಾಜ ವಿಭಜನೆಯಾಗುತ್ತದೆ ಎಂಬ ನೆಪವೊಡ್ಡಿ, ಇದನ್ನು ವಿರೋಧಿಸಿ ಗಾಂಧೀಜಿಯವರು ಎರವಾಡ ಜೈಲಿನಲ್ಲಿ 21 ದಿನಗಳ ಅಮರಣಾಂತ ಉಪವಾಸ ಕುಳಿತಿದ್ದರು” ಎಂದು ದಸಂಸದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ್ ಮಾಸ್ತರ್ ಹೇಳಿದರು.
ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ
“ಎರಡು ಮತಗಳ ಹಕ್ಕಿನ ಪ್ರಸ್ತಾವವನ್ನು ಕೈಬಿಡುವಂತೆ ಅಂಬೇಡ್ಕರ್ಗೆ ಬೆದರಿಕೆಗಳು ಬಂದರೂ ಜಗ್ಗಲಿಲ್ಲ. ರಾಷ್ಟ್ರದ್ರೋಹವನ್ನು ಮಾಡುತ್ತಿದ್ದೀರಿ, ಗಾಂಧಿಯವರ ಸಾವಿಗೆ ನೀವೇ ಕಾರಣರಾಗುತ್ತೀರಿ ಎಂದೆಲ್ಲಾ ಹೇಳಿ, ಕೊನೆಗೆ ಕಸ್ತೂರ್ ಬಾ ಗಾಂಧಿಯವರ ಬೇಡಿಕೆಯನ್ನು ಮನ್ನಿಸಿ ಅಂಬೇಡ್ಕರ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಅಂದೇನಾದರೂ ಇದು ನಡೆಯದಿದ್ದರೆ, ಇಂದು ದಲಿತರು ರಾಜಕೀಯವಾಗಿ ಇಂತಹ ಸ್ಥಿತಿಯಲ್ಲಿರುತ್ತಿರಲಿಲ್ಲ. ಹಾಗಾಗಿಯೇ ಈ ದಿನವನ್ನು ಸ್ಮರಿಸುವ ಸಲುವಾಗಿ ಮತ್ತು ದಲಿತರಿಗಾದ ಅನ್ಯಾಯವನ್ನು ತಿಳಿಸುವ ಸಲುವಾಗಿ ಸೆ. 27ರಂದು ಬ್ರಹ್ಮಾವರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ನಾವು ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಎರಡು ಮತಗಳ ಹಕ್ಕನ್ನು ನಿರಾಕರಿಸಿ, ದಲಿತರಿಗೆಂದೇ ದೇಶದಾದ್ಯಂತ ಸುಮಾರು 148 ಮೀಸಲು ಕ್ಷೇತ್ರಗಳನ್ನು ಬಿಟ್ಟುಕೊಡಲಾಯಿತು. ಆದರೆ ಅಂಬೇಡ್ಕರ್ ಅವರಿಗೆ ಸಮಾಧಾನವಾಗಿರಲಿಲ್ಲ. ಈ ಸಂಸರ್ಭದಲ್ಲಿ ಪತ್ರಿಕೆಗಳೊಂದಿಗೆ ಮಾತನಾಡಿದ ಅಂಬೇಡ್ಕರ್, “ಅಮೂಲ್ಯವಾದ ಹಣ್ಣೊಂದನ್ನು ನನ್ನ ಜನಗಳಿಗೆಂದು ತಂದಿದ್ದೆ. ಆದರೆ ಅದನ್ನು ಅದನ್ನು ಮಣ್ಣುಪಾಲು ಮಾಡಿ, ಬರೀ ಸಿಪ್ಪೆಯನ್ನು ನನ್ನ ಮುಖಕ್ಕೆ ಎಸೆದಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಯುವಜನತೆಗೆ ಕೇಳಿಸಿದ ಗಾಂಧಿ, ಓದಿಸಿದ ಗಾಂಧಿ ಮತ್ತು ನಂಬಿಸಿದ ಗಾಂಧಿಯ ಕುರಿತು…