CAA, NRC, NPR ಯಾವುದೇ ಕಾರಣಕ್ಕಾಗಿ ಜಾರಿಯಾಗಬಾರದು ಎಂದು ಒತ್ತಾಯಿಸಿ 500ಕ್ಕೂ ಹೆಚ್ಚು ಪೌರಕಾರ್ಮಿಕರು ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಧ್ಯಾಹ್ನ 1:30ರ ಸಮಯಕ್ಕೆ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಜಮಾಯಿಸಿದ ಧಾರವಾಡ ಜಿಲ್ಲೆಯ ಪೌರಕಾರ್ಮಿಕರು, ತಹಶಿಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿ CAA, NRC, NPR ಹಿಂಪಡೆಯುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ವಿಡಿಯೋ ನೋಡಿ
ನಾವು ಬಡತನದ ಕಾರಣಕ್ಕೆ ಮಹಾರಾಷ್ಟ್ರ, ಆಂಧ್ರ ಪ್ರದೇಶ ರಾಜ್ಯಗಳಿಂದ ಬಹಳ ವರ್ಷಗಳ ಹಿಂದೆಯೇ ವಲಸೆ ಬಂದಿದ್ದೇವೆ. ನಾವೆಲ್ಲರೂ ಓದಿರದ ಕಾರಣ ಇಲ್ಲಿ ಪೌರಕಾರ್ಮಿಕರಾಗಿ ದುಡಿದು ಬದುಕು ಕಟ್ಟಿಕೊಂಡಿದ್ದೇವೆ. ಈಗ ಸರ್ಕಾರ ನಮ್ಮ ದಾಖಲೆಗಳನ್ನು ತೋರಿಸಿ ಎಂದರೆ ಎಲ್ಲಿಂದ ತರುವುದು ಎಂದು ಅವರು ತಮ್ಮ ಗೋಳು ತೋಡಿಕೊಂಡಿದ್ದಾರೆ.
ಸಂವಿಧಾನ ವಿರೋಧಿ ಸಿಎಎ, ಎನ್ಆರ್ಸಿ ನಮಗೆ ಬೇಡವೇ ಬೇಡ, ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಕಳೆದ 22 ದಿನಗಳಿಂದಲೂ ಪ್ರತಿದಿನವೂ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇಂದಿನ ಪೌರಕಾರ್ಮಿಕರ ಪ್ರತಿಭಟನೆಗೆ ಸಂವಿಧಾನ ಸಂರಕ್ಷಣಾ ಸಮಿತಿ ಬೆಂಬಲ ನೀಡಿ ಭಾಗವಹಿಸಿತ್ತು.