Homeಅಂಕಣಗಳುನಾಗಸುಧೆ ಜಗಲಿಯಿಂದಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ.

- Advertisement -
- Advertisement -

ಉಂಡದ್ದು ಉಗುಳಿದ್ದು
ತಿಂದಿದ್ದು ತೇಗಿದ್ದು
ಎಲ್ಲವನೂ ರಸ್ತೆಗಳು
ಬಾಯಿಬಿಡದೇ ನುಂಗಿಕೊಂಡಿದೆ
ಅವು ಬಾಯಿಬಿಟ್ಟಾಗ
ಇದ್ದೇ ಇದೆಯಲ್ಲ
ತೇಪೆ ಹಚ್ಚಿ ತುಪ್ಪ ಸವರುವುದು
ಹಿಡಿ ಮಣ್ಣು ಹಾಕಿ ಮುಚ್ಚುವುದು

ತಮ್ಮ ‘ಇಳೆಯ ಅರ್ಥ’ ಕವನ ಸಂಕಲನದ ‘ಹೊಲ ಮಾರಿ ಉಳಿದ ಬೇರೀಜು’ ಕವನದಲ್ಲಿ ಡಾ. ಬಸು ಬೇವಿನಗಿಡದ ಜಗದ ಭ್ರಷ್ಟಾಚಾರ ಮತ್ತು ಮಾನವೀಯ ಸಂಬಂಧದ ಪಲ್ಲಟಗಳ ಕುರಿತು ಮನಮುಟ್ಟುವಂತೆ ಹೇಳಿರುವರು. ಇವರ ಬರಹಗಳೇ ಹೀಗೆ ; ಮೇಲ್ನೋಟಕ್ಕೆ ಸೀದಾ ಸಾದಾ ಕಂಡರೂ ಒಳಗೊಳಗೇ ಬಿಸಿಲಿನ ಕುದಿತದ ಛಾಯೆ ಇದೆ ; ಬರಹಗಳಂತೆ ಇವರೂ ಸಹ.

ಸವದತ್ತಿ ತಾಲೂಕಿನ ಮುನವಳ್ಳಿಯ ಡಾ. ಬೇವಿನಗಿಡದ ಬಡತನದ ಬೇಗೆಯಲೇ ಬೆಳೆದವರು. ಪುಟ್ಟದೊಂದು ಕೃಷಿ ಕುಟುಂಬಕ್ಕೆ ಏಳು ಜನ ಒಡಹುಟ್ಟಿದವರು. ನೀರೇ ಇಲ್ಲದ ನಾಲ್ಕು ಎಕರೆ ಒಣ ಭೂಮಿ. ಅಣ್ಣ ಕೂಲಿ ನಾಲಿ ಮಾಡಿದ ; ಸೋದರಮಾವ ಕೈ ಹಿಡಿದು ದಡ ಸೇರಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಬೇಂದ್ರೆ ಕಾವ್ಯದಲ್ಲಿ ನಿಸರ್ಗ’ದಲ್ಲಿ ಪಿಎಚ್‌ಡಿ ಪದವಿ ಪಡೆದರು. ಅವರಿಗೆ ಕನ್ನಡ ಮತ್ತು ಅಕ್ಷರ ಪ್ರೀತಿ ಹಾಗೂ ಬರಹ ಉಸಿರಿನಷ್ಟೇ ಸಲೀಸಾಗಿದೆ. ವಿಶಾಲವಾದ ಅನುಭವವನ್ನು ಕಂಡುಂಡದ್ದರಿಂದ ಇವರ ಬರಹದಲ್ಲಿ ಪ್ರೀತಿ, ಮಮತೆ, ಮಾನವೀಯತೆ ಮತ್ತು ಗ್ರಾಮೀಣ ಬದುಕಿನ ಒಳನೋಟಗಳು ಪುಟಿದೇಳುತ್ತದೆ. ಯಾರಿಗೂ ನೋವಾಗದ ಹಾಗೆ ಎಲ್ಲರೊಂದಿಗೂ ಬೆರೆತು ಅಕ್ಷರ ಲೋಕದ ಬೆಳಕಿನಲ್ಲಿ ನಡೆವ ಇವರಿಗೆ ಸಾಮಾನ್ಯ ಜನರ ಎಲ್ಲವನ್ನೂ ಹೇಳುವ-ಕೇಳುವ ಚಾಕಚಕ್ಯತೆ ಇದೆ. ಭಾಷೆಯ ಹಿಡಿತ, ಸೊಗಡು, ಅಧ್ಯಯನದಿಂದ ಇವರ ಬರಹಗಳು ಗಟ್ಟಿತನದಿಂದ ಕೂಡಿವೆ.

ಪ್ರಸ್ತುತ ಕನ್ನಡದ ಬಹುಮುಖ ಪ್ರತಿಭೆಯ ಪ್ರಮುಖ ಬರಹಗಾರರಾದ ಇವರು ತಮ್ಮ ಕಥೆ, ಕವನ, ವಿಮರ್ಶೆ, ಅನುವಾದ ಮತ್ತು ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮುಡಿಸಿರುವರು. ಯಾವ ಇಸಂಗೂ ಒಳಗಾಗದೇ ವಯಸ್ಸಿಗೂ ಮೀರಿದ ಗೆಳೆತನ ಇವರದು. ವೃತ್ತಿ-ಪ್ರವೃತ್ತಿ, ಬದುಕು-ಬರಹದಲ್ಲಿ ಸಾಧನೆಯ ಸಿದ್ದಿ ಇವರದಾಗಿದೆ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಆಕಾಶವಾಣಿಯಲ್ಲಿ ದುಡಿಯುತ್ತಿದ್ದ ಬಸು, ಪದೋನ್ನತಿ ಹೊಂದುತ್ತಾ ಈಗ ಆಕಾಶವಾಣಿ ಧಾರವಾಡಕ್ಕೇ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿರುತ್ತದೆ. ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಆಕಾಶವಾಣಿಯಲ್ಲಿ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ. ಅದಕ್ಕೇ ಸದಾ ನಗು ಮೊಗದ ಈ ಭಾವ ಜೀವಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ.

ಹಿಂದಿನ ದಿನಗಳಲ್ಲಿ ಈ ರೇಡಿಯೋ ಸ್ಟೇಷನ್ ಎಂದರೆ ಕೆಲವರದೇ ಸೊತ್ತಿನಂತಿತ್ತು. ಸಾಮಾನ್ಯ ಜನಕ್ಕೆ ಅವಕಾಶವೇ ಇಲ್ಲದಂತಿತ್ತು. ಕಳುಹಿಸಿದ ಕವಿತೆಗಳ ಲಕೋಟೆಗಳು ಆ ಅಧಿಕಾರಶಾಹಿಗಳ ಟೇಬಲ್ಲಿನ ಡ್ರಾವರ್‌ನಲ್ಲಿಯೇ ತೆಪ್ಪಗೆ ಬಿದ್ದಿರುತಿತ್ತು. ಇವರ ಅಧಿಕಾರಾವಧಿಯಲ್ಲಿ ಇದಕ್ಕೆ ಅವಕಾಶವಿಲ್ಲದೇ ತೆಪ್ಪಗಿದ್ದ ಲಕೋಟೆಗಳೆಲ್ಲಾ ಮರು ಜೀವ ಪಡೆಯಿತು. ತಮ್ಮ ಕಛೇರಿಗೆ ಬಂದ ಹೊಸ ಹೊಸ ಪ್ರತಿಭೆಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅವರನ್ನೂ ಪರಿಚಯಿಸಿದರು. ಕೆಲವೇ ವರ್ಷಗಳ ಕಾಲ ಕಾರವಾರದ ಕಾಡೊಡಲ-ಕಡಲೊಡಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಯ ಸಾಂಸ್ಕೃತಿಕ ಲೋಕದ ಜನ ಈ ಅಧಿಕಾರಿ, ಅಕ್ಷರ ಪ್ರೇಮಿ ಮತ್ತು ಮಾನವೀಯ ಮನೋಭಾವದ ಮನುಷ್ಯನನ್ನು ಎಂದಿಗೂ ಮರೆಯಲಾರರು. ಇವರು ಕಾರ್ಯ ನಿರ್ವಹಿಸಿದ ಆಕಾಶವಾಣಿ ಕೇಂದ್ರಕ್ಕೂ ಹೆಸರು ತಂದುಕೊಟ್ಟಿರುವರು. 2015, 16, 17 ಹಾಗೂ 2020 ರಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದರೆ, 2017 ಮತ್ತು 2018ರಲ್ಲಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಕೀರ್ತಿ ಪತಾಕೆಯನ್ನು ಹಾರಿಸಿರುವುದು. ಅದಕೇ ಇವರ ಇಲಾಖೆಯಲ್ಲೂ ಇವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕನ್ನಡ ಸಾಹಿತ್ಯಕ್ಕೆ ಇವರು ಈಗಾಗಲೇ ಹಲವು ಕೊಡುಗೆಗಳನ್ನು ನೀಡಿರುವರು. ‘ಕನಸು’ ‘ಇಳೆಯ ಅರ್ಥ’ ಇವರ ಕವನ ಸಂಕಲನಗಳಾದರೆ, ‘ತಾಯವ್ವ’ ‘ಬಾಳೆಯ ಕಂಬ’ ‘ಹೊಡಿ ಚಕ್ಕಡಿ’ ‘ಉಗುಳುಬುಟ್ಟಿ’ ಮತ್ತು ‘ನೆರಳಿಲ್ಲದ ಮರ’ ಇವು ಕಥಾಸಂಕಲನಗಳು. ಮಕ್ಕಳ ಸಾಹಿತ್ಯದಲ್ಲಿಯೂ ಇವರ ಪ್ರತಿಭೆ ಎದ್ದು ಕಾಣುತ್ತದೆ. ‘ನಾಳೆಯ ಸೂರ್ಯ’ ‘ಓಡಿ ಹೋದ ಹುಡುಗ’ ‘ಬೀಳದ ಗಡಿಯಾರ’ ಇವು ಇವರ ಬಾಲ ಸಾಹಿತ್ಯದ ಕೃತಿಗಳಾಗಿವೆ. ‘ಹಕ್ಕಿ ಗಮನದ ಹಾದಿ’ ‘ಕಲ್ಲು ಸಕ್ಕರೆ’ ‘ಕಾಲದ ಕನ್ನಡಿ’ ‘ಶತಮಾನದ ಕವಿ ಬೇಂದ್ರೆ’ ‘ಬೇಂದ್ರೆ ನಿಸರ್ಗ ಕಾವ್ಯ’ ‘ಕನಕದಾಸರು ಮತ್ತು ಮಧುರ ಚೆನ್ನರು’ ‘ಸನದಿ ವ್ಯಕ್ತಿತ್ವ’ ಇವು ಬಸು ಅವರ ವಿಮರ್ಶೆಯ ಸಂಕಲನಗಳು. ಅನುವಾದ ಕ್ಷೇತ್ರಕ್ಕೂ ಇವರು ಬೆಳಕನ್ನು ಚೆಲ್ಲಿರುವರು. ‘ಅಪರಾಜಿತೆ’ ‘ದಕ್ಕಿದ ಹಾಡು’ ‘ಕಮಲಾದೇವಿ ಚಟ್ಟೋಪಾಧ್ಯಾಯ’ ‘ಹಸಿರು ಕಾಡಿನ ಗೆಳೆಯರು’ ‘ನಮ್ಮ ಮಂದಿ’ ‘ಸ್ವಾತಂತ್ರ‍್ಯ ಚಳುವಳಿ ಹಾಗೂ ಭಾರತೀಯ ಮುಸ್ಲಿಮರು’ ‘ಸಮಕಾಲೀನ ಭಾರತೀಯ ಕಥೆಗಳು’ ‘ಸಾಮರಸೆಟ್ ಮಾಮ್ ಕಥೆಗಳು’ ಇವು ಬೇವಿನಗಿಡದರ ಅನುವಾದಿತ ಕೃತಿಗಳು. ಇದಲ್ಲದೇ ಕೆಲ ಸಂಪಾದಿತ ಕ್ರತಿಗಳನ್ನೂ ಡಾ. ಬಸೂ ಬೇವಿನಗಿಡದ ಕನ್ನಡಮ್ಮನ ಮಡಿಲಿಗೆ ಅರ್ಪಿಸಿರುವರು. ತಮ್ಮ 57 ನೇ ವಯಸ್ಸಿನಲ್ಲಿಯೇ ಮೂವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿದ ಬೇವಿನಗಿಡದ ನಿಜಕ್ಕೂ ಅಭಿನಂದನೀಯರು.

ತಮ್ಮ ಎಲ್ಲಾ ಬರಹಗಳೆಂದರೂ ಇವರಿಗೆ ಇಷ್ಟವೇ ; ಆದರೆ ಕಥೆಗಳೆಂದರೆ ಬಹು ಖುಷಿ. ತಮ್ಮ ‘ನೆರಳಿಲ್ಲದ ಮರ’ ಕಥಾ ಸಂಕಲನದ ತಮ್ಮ ಮಾತಿನಲ್ಲಿ ಕಥೆ ಹುಟ್ಟುವ ಪರಿಯನ್ನು ವಿವರಿಸುತ್ತಾ “ಅನೇಕ ಕೆಲಸಗಳ ಮಧ್ಯೆ ಕತೆಗಳು ನನ್ನನ್ನು ಕಾಡಿಸುವ ಹಾಗೂ ಅವು ತಮ್ಮಷ್ಟಕ್ಕೆ ತಾವು ಬೆಳೆದುಕೊಳ್ಳುವ ಪರಿ ನನ್ನಲ್ಲಿಯೂ ವಿಸ್ಮಯ ಹುಟ್ಟಿಸುವಂತಹದ್ದು. ಅವು ಹೇಳದೇ ಕೇಳದೇ ಬರುತ್ತದೆ. ತಮಗೆ ಇಷ್ಟವಾಗುವ ಹಾಗೆ ಬರೆಸಿಕೊಳ್ಳುತ್ತದೆ. ಆಮೇಲೆ ‘ನೀನ್ಯಾಕೋ, ನಿನ್ನ ಹಂಗ್ಯಾಕೋ’ ಎಂದು ಕತೆಗಾರನನ್ನು ಅತ್ತ ದೂಡಿ ತಮ್ಮೊಳಗೆ ಹುದುಗಿರುವ ಅರ್ಥ-ಆಯಾಮಗಳನ್ನು ಹೇಳಿರೆಂದು ಓದುಗರ ಮತ್ತು ವಿಮರ್ಶಕರ ಬೆನ್ನು ಹತ್ತುತ್ತವೆ. ಅವರು ಕೊಟ್ಟ ಅರ್ಥಗಳನ್ನು ನನಗೆ ತಿರುಗಿಸುತ್ತ, ಕತೆಗಾರನನ್ನು ಆಶ್ಚರ್ಯಕ್ಕೀಡು ಮಾಡುತ್ತಾ ಅವನ ಸಾರ್ಥಕತೆಯನ್ನು ಹೆಚ್ಚಿಸುತ್ತದೆ” ಎಂದಿರುವುದು.

ಇವರ ಕಥೆಗಳ ಕುರಿತು ಕನ್ನಡದ ನಾಮಾಂಕಿತರು ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ. ರಾಜೇಂದ್ರ ಚೆನ್ನಿ : ಬಸು ಬೇವಿನಗಿಡದ ಅವರಲ್ಲಿ ನನಗೆ ಇಷ್ಟವಾದದ್ದೆಂದರೆ ಅವರು ಅನುಭವ ಲೋಕಕ್ಕೆ ತಕ್ಕುದಾದ ಭಾಷೆಯ ರೂಪಕ ಗುಣ. ಘಟನೆಗಳನ್ನು ಮೀರಿಯೂ ಬಹಳ ಕಾಲದವರೆಗೆ ನಮ್ಮನ್ನು ಆವರಿಸಿಕೊಳ್ಳುವ ಶಕ್ತಿ ಅವರ ಕತೆಗಳಿಗೆ ಇದೆ. ಅವರ ಕತೆಗಳ ಇನ್ನೊಂದು ಗುಣವೆಂದರೆ ನಿರೂಪಣೆಯ ಲವಲವಿಕೆ.

ಡಾ.ಸಿ.ಎನ್. ರಾಮಚಂದ್ರನ್ : ಮೊದಲಿನಿಂದಲೂ ಬಸು ಅವರಿಗೆ ಕಥೆಗಳನ್ನು ಆಕರ್ಷಕವಾಗಿ ಕಟ್ಟುವ ಕಲೆ ಇದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡು ಜೀವಂತಿಕೆ ಇವರ ಪ್ರತಿ ಕಥೆಯಲ್ಲಿಯೂ ಕಂಡುಬರುತ್ತದೆ. ಕಾಲ ಪಲ್ಲಟವನ್ನು ಅದರೊಳಗೆ ಬರುವ ಮೌಲ್ಯ ಪಲ್ಲಟವನ್ನು ಅವರ ಕತೆಗಳು ಅದ್ಭುತವಾಗಿ ಹಿಡಿದಿಟ್ಟಿರುತ್ತದೆ.

ಟಿ.ಪಿ.ಅಶೋಕ : ಆಧುನಿಕತೆಯ ಪ್ರವೇಶದಿಂದಾಗಿ ಗ್ರಾಮೀಣ ಬದುಕು ಪಲ್ಲಟಗೊಳ್ಳುವ ಪರಿ ಮತ್ತು ಪರಿಣಾಮಗಳ ಶೋಧ ಬಸು ಬೇವಿನಗಿಡದ ಅವರ ಕಥೆಗಳ ಒಂದು ಪ್ರಧಾನ ಆಶಯ.

ಸುನಂದಾ ಕಡಮೆ : ಹದವಾದ ಭಾಷೆ, ಸಾಮಾಜಿಕತೆಗೆ ತುಡಿಯುವ ಸಂಯಮ, ಅತಿ ಸೂಕ್ಷ್ಮ ವಿವರ ಹಾಗೂ ತಿಳಿ ವಿನೋದ ಶೈಲಿಯ ಸಂದರ್ಭಗಳು ಬಸು ಬೇವಿನಗಿಡದ ಕತೆಗಳಲ್ಲಿ ಹುಬೇ ಹುಬಾಗಿ ಕಣ್ಣಿಗೆ ಕಟ್ಟುತ್ತದೆ.

ವಿವೇಕ ಶಾನಭಾಗ : ಅನುಭವವನ್ನು ಬಹು ವಿವರಗಳಲ್ಲಿ ಕಟ್ಟಿ ಕೊಡುವ ಕಲೆ ಬಸು ಅವರಲ್ಲಿರುವದರಿಂದ ಇಲ್ಲಿಯ ಕಥೆಗಳಿಗೆ ಹೆಚ್ಚಿನ ಸೌಷ್ಠವ ಒದಗಿ ಬಂದಿದೆ. ಅವು ಎಡಬಿಡದೇ ಓದಿಸಿಕೊಳ್ಳುತ್ತದೆ.

ವಿಷ್ಣು ನಾಯ್ಕ : ಕಥೆಯನ್ನು ಕವಿತೆಯಂತೆ ಬರೆಯಬಲ್ಲ ಕೌಶಲ್ಯ ಬಸು ಅವರಿಗೆ ಸಿದ್ಧಿಸಿದೆ. ಅವರು ಕತೆಗಳು ನೆಲಮುಖಿಯಾಗಿ ಚಲಿಸುತ್ತದೆ.

ಡಾ. ವಿನಯಾ : ಗ್ರಾಮ- ನಗರ ಎಂಬ ವರ್ಗೀಕೃತ ಜೀವನ ಇಲ್ಲವಾಗುತ್ತಿರುವ ಸಂಕೀರ್ಣ ಕಾಲದಲ್ಲಿ ವೈಭವೀಕರಿಸಲ್ಪಟ್ಟ ಗ್ರಾಮೀಣ ಪರಿಕಲ್ಪನೆಯ ಪೂರ್ವಕಲ್ಪಿತಗಳನ್ನು ನಾಜೂಕಾಗಿ ಮೀರುವುದು ಬಸು ಅವರ ಕತೆಗಳ ಮುಖ್ಯ ಕಾಳಜಿಗಳಲ್ಲೊಂದು. ಹಳ್ಳಿಯ ಬದುಕುಗಳ ಛಿದ್ರತೆಯ ಮೂಲಕವೇ ಗ್ಲೋಬಲ್ ಎಕಾನಮಿ ಉಂಟು ಮಾಡುತ್ತಿರುವ ಅವಾಂತರಗಳನ್ನು ಅವರ ಕತೆಗಳು ಕಾಣಿಸುತ್ತದೆ.

ಡಾ. ಬಸೂ ಬೇವಿನಗಿಡದರ ಈ ಎಲ್ಲಾ ಕನ್ನಡ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದೆ. ಎರಡು ಸಲ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ, ಸಾರಂಗಿ ವೆಂಕಟರಾಮಯ್ಯ ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ದತ್ತಿ ಪ್ರಶಸ್ತಿಗಳು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪುರಸ್ಕಾರ, ಬೆಳಗಾವಿಯ ಸಾಹಿತ್ಯ ಪ್ರತಿಷ್ಟಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಜಿ.ವಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಪ್ರಶಸ್ತಿ, ಸೇಡಂ ನ ಅಮ್ಮ ಪ್ರಶಸ್ತಿ, ತುಮಕೂರಿನ ವೀಚೀ ಸಾಹಿತ್ಯ ಪ್ರಶಸ್ತಿ, ಅಜೂರ ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಕಥಾ ಪ್ರಶಸ್ತಿ, ಬೆಂಗಳೂರಿನ ಗಾಂಧೀ ಕಥಾ ಪ್ರಶಸ್ತಿ ಮತ್ತು ಅಡ್ವೈಸರ್ ಪುಸ್ತಕ ಪ್ರಶಸ್ತಿ ಹೀಗೆ ಹತ್ತು ಹಲವು. ಕೆಲ ವಿಶ್ವವಿದ್ಯಾಲಯ ಹಾಗೂ ಶಾಲಾ ವಿಭಾಗದಲ್ಲಿ ಇವರ ಅನೇಕ ಕಥೆ ಮತ್ತು ಕವಿತೆಗಳು ಪಠ್ಯವಾದುದಲ್ಲದೇ ಕೆಲ ಕಥೆ, ಕವಿತೆಗಳು ಹಿಂದಿ, ಇಂಗ್ಲಿಷ್ ಮತ್ತು ಮರಾಠಿಗೆ ಅನುವಾದಗೊಂಡಿರುವುದಕ್ಕೆ ಬಸು ಅಭಿನಂದನೀಯರು.

ಇವರ ಈ ಎಲ್ಲಾ ಸಾಹಿತ್ಯ, ಬದುಕು-ಬರಹ, ವೃತ್ತಿ-ಪ್ರವೃತ್ತಿಗಳಿಗೆ ಸ್ಪೂರ್ತಿದಾಯಕರಾದ ಪತ್ನಿ ಉಮಾ, ಮಗ ರಾಕೇಶ, ಮಗಳು-ಅಳಿಯ ಚೈತ್ರಾ-ವಿನಯ್ ಇವರಿಂದ ಒಡ ಗೂಡಿದ ತುಂಬು ಸಂಸಾರಕ್ಕೆ ಶುಭ ಕೋರಿ ಅಭಿನಂದಿಸುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡಾ.ಬಸು ಬೇವಿನಗಿಡದ ಸರ್ ರವರ ಸೃಜನಾತ್ಮಕ ಮನೋಭಾವ ಹಾಗೂ ಪ್ರತಿಭೆಗೆ ಗೌರವಿಸುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಆಕಾಶವಾಣಿ ಕಾರವಾರದಲ್ಲಿ ಇದ್ದಾಗಿಂದ ಬಲ್ಲೆವು ತುಂಬಾನೆ ಖುಷಿಯಾಗುತ್ತೆ.ಸುಂದರ ಬರಹ…ಪ್ರಕಾಶ ಸರ್…

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...