Homeಅಂಕಣಗಳುಜನತಾ ಮನೆಗಳ ನಿರ್ಮಾಣಕ್ಕೆ ದಿನವೊಂದಕ್ಕೆ 70 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳು - ಪ್ರಸಾದ್ ರಕ್ಷಿದಿ

ಜನತಾ ಮನೆಗಳ ನಿರ್ಮಾಣಕ್ಕೆ ದಿನವೊಂದಕ್ಕೆ 70 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳು – ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದುಹೋದ ದಿನಗಳು -21

ವಸತಿ ಇಲ್ಲದವರಿಗಾಗಿ ಮನೆಗಳ ಕೆಲಸ ಪ್ರಾರಂಭವಾಗಿತ್ತು. ನನ್ನ ಓಡಾಡ ಮತ್ತಷ್ಟು ಹೆಚ್ಚಿತು. ಮೊದಲು ಮನೆಕಟ್ಟಲು ಸ್ಥಳ ಗುರುತಿಸುವ ಕೆಲಸ ಮಾಡಬೇಕಿತ್ತು. ಆಗ ಹಲವಾರು ಕಡೆಗಳಲ್ಲಿ ಸ್ಥಳೀಯ ಭೂಮಾಲಿಕರಿಂದ ವಿರೋಧ ಪ್ರಾರಂಭವಾಯಿತು. ಅಲ್ಲಿ ಬೇಡ, ಇಲ್ಲಿ ಬೇಡ ಎನ್ನುವವರು. ಹಾಗಾದರೆ ಸ್ಥಳ ನೀವೇ ತೋರಿಸಿ ಎಂದರೆ, ಯಾವುದೂ ಗುಡ್ಡದ ತುದಿಯ ಜಾಗ ತೋರಿಸುವರು. ಇಲ್ಲವೇ ಇಂದು ನಾಳೆ ಎಂದು ಕಾಲಹರಣ ಮಾಡುವರು.

ಕೆಲವರು ಆಗಲೇ ಖಾಲಿ ಇದ್ದ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತತೊಡಗಿದರು. ಗಣಪಯ್ಯನವರಿಂದ ಉಪಕಾರ ಪಡೆದವರೇ ಕೆಲವರು ಈಗ “ಗಣಪಯ್ಯ ದಲಿತರನ್ನು ಎತ್ತಿಕಟ್ಟುತ್ತಿದ್ದಾರೆ. ಅವರ ತೋಟದಲ್ಲಿ ಮನೆ ಕಟ್ಸಿ ಕೊಡ್ಲಿ” ಎಂದು ಹಿಂದಿನಿಂದ ದೂರತೊಡಗಿದರು.

ಗಣಪಯ್ಯನವರು ರಾಜಕೀಯವಾಗಿಯೂ ಶಕ್ತರಾಗಿದ್ದುದರಿಂದ ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಯಿತು. ಅವರು ಅಧಿಕಾರಿಗಳನ್ನು ಸ್ಥಳಕ್ಕೇ ಕರಸಿಕೊಂಡು ಅವರ ಸಮ್ಮುಖದಲ್ಲೇ ಮನೆ ಕಟ್ಟಲು ಸ್ಥಳ ನಿಗದಿ ಮಾಡುತ್ತ ಹೋದರು. ಹತ್ತು ಇಪ್ಪತ್ತು ಮನೆಗಳ ಗುಂಪುಗಳು ಅಲ್ಲಲ್ಲಿ ರಚನೆಯಾದವು.

ಗಣಪಯ್ಯ ತಮ್ಮ ಕಾರ್ಯಕ್ಷೇತ್ರದಲ್ಲಿ, ಮೊಮ್ಮಕ್ಕಳೊಂದಿಗೆ

ಅಂತೂ ಹೇಗೋ ಮನೆಗಳ ಕೆಲಸ ಪ್ರಾರಂಭವಾಯಿತು. ಹೆಂಚು, ಮತ್ತು ಮರಗಳಿಗೆಂದು ಒಂದು ಸಾವಿರ ಕಳೆದು ಉಳಿದ ಒಂದು ಸಾವಿರ ಹಣವನ್ನು ಕಂತು ಕಂತಾಗಿ ಕೊಡುತ್ತಿದ್ದರು. ಗಣಪಯ್ಯ ಮತ್ತು ರವೀಂದ್ರನಾಥರು ಇರುವುದರಿಂದ ಬಿಲ್ ಆಗುವಾಗ ಅಷ್ಟೂ ಹಣ ಯಾವುದೇ ಕಡಿತಗಳಿಲ್ಲದೆ ಬರುತ್ತಿತ್ತು.

ಬ್ಯಾಂಕಿನಲ್ಲಿ ಮಂಜೂರಾಗಿದ್ದ ಸಾಲದ ಮೊತ್ತವನ್ನು ಮೊದಲು ಪಡೆದು ಕೆಲಸ ಪ್ರಾರಂಭಿಸಿದೆವು.

ಕಲ್ಲು, ಸಿಮೆಂಟು, ಮುಂತಾದವುಗಳಿಗೆ ಮಾತ್ರ ಹಣ ಪಾವತಿ ಮತ್ತೆ ಉಳಿದ ಕೆಲಸಗಳಲ್ಲಿ ಮರಗೆಲಸವೊಂದನ್ನು ಬಿಟ್ಟು ಉಳಿದ ಎಲ್ಲ ಕೆಲಸಗಳನ್ನು ಆಯಾ ಗುಂಪಿನವರು ಸೇರಿ ಮಾಡಬೇಕು. ಆ ಕೆಲಸಗಳಿಗೆ ಆಯಾ ದಿನದ ಮಜೂರಿಯನ್ನು ಅವರು ಅದೇ ಹಣದಲ್ಲಿ ಪಡೆದುಕೊಳ್ಳಬೇಕು. ಇದರಿಂದ ಅವರ ಹಣ ಅವರಿಗೇ ಹಿಂದಿರುಗುತ್ತಿತ್ತು ಅಲ್ಲದೆ ಉಳಿತಾಯವಾದರೆ ಅವರಿಗೇ ಸಲ್ಲುತ್ತಿತ್ತು ಇದು ಯೋಜನೆ.

ಪ್ರಾರಂಭದಲ್ಲಿ ಎಲ್ಲರೂ ಉತ್ಸಾಹದಿಂದ ಬಂದರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಈ ರೀತಿ ಕೆಲಸ ಮಾಡಿದ ಅನುಭವವಾಗಲೀ ಸಹಕಾರಿ ತತ್ವದ ದುಡಿಮೆಯ ಬಗ್ಗೆ ತಿಳುವಳಿಕೆಯಾಗಲೀ ಇಲ್ಲದ್ದರಿಂದ ತನ್ನ ಮನೆ ಕೆಲಸ ಇರುವಾಗ ಬರುವುದು, ಬೇರೆಯವನ ಮನೆಕೆಲಸ ಇದ್ದಾಗ ತಪ್ಪಿಸಿಕೊಳ್ಳುವುದು ಹೀಗೆಲ್ಲ ಮಾಡುತ್ತಿದ್ದರು. ಅದಲ್ಲದೆ ಇವರೆಲ್ಲರೂ ಯಾವಾಗಲೂ ಬೇರೆಯವರ ತೋಟಗಳಿಗೆ ಕೆಲಸಕ್ಕೆ ಹೋಗುವವರು. ಹೆಚ್ಚಿನವರು ಅಲ್ಲಿ ಸಾಲ ಪಡೆದವರೇ ಆಗಿದ್ದುರಿಂದ ಅವರಿಂದಲೂ ಒತ್ತಡವಿರುತ್ತಿತ್ತು. ಈ ಎಲ್ಲ ಕಾರಣಗಳಿಂದ ನಾವು ಯೋಚಿಸಿದಷ್ಟು ಬೇಗನೆ ಕೆಲಸ ಮುಗಿಯುತ್ತಿರಲಿಲ್ಲ.

ಬ್ಯಾಂಕಿಗೆ ಹೋಗುವುದು, ಬಿಲ್ ಮಾಡಿಸುವುದು, ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಕಛೇರಿಯಿಂದ ಹೆಂಚುಗಳನ್ನು ಪಡೆದುಕೊಳ್ಳುವುದು, ಮಿಲ್ಲಿನಿಂದ ಮರ ಮುಟ್ಟುಗಳನ್ನು ಸಾಗಿಸುವುದು, ಜೊತೆಗೆ ಇವರೆಲ್ಲರ ಕೆಲಸದ ಲೆಕ್ಕವಿಟ್ಟು ಬಟವಾಡೆ ಮಾಡುವುದೂ ನನ್ನ ಕೆಲಸವಾಗಿತ್ತು. ಹಾಗಾಗಿ ನಾನು ಇವರ ಮೇಲೆಲ್ಲಾ ಕೂಗಾಡುವುದೂ ಬೈಯುವುದೂ ಸಮಾಧಾನ ಮಾಡುವುದೂ ಜೊತೆಗೆ ತತ್ವ ಸಿದ್ಧಾಂತಗಳ ಬಗ್ಗೆ ಭಾಷಣ ಮಾಡುವುದೂ ಎಲ್ಲ ಇತ್ತು.

ಅವರಿಗೆಲ್ಲ ತಿಳುವಳಿಕೆಯೇ ಇರಲಿಲ್ಲವೆಂದಲ್ಲ ಅವರೆಲ್ಲ ಈ ರೀತಿ ನಡೆದುಕೊಳ್ಳಲು ಅದಕ್ಕೆ ಹಲವಾರು ಕಾರಣಗಳಿದ್ದವು. ಅದು ನನಗೆ ಮುಂದೆ ತಿಳಿಯಿತು.

ಈ ಮನೆಗಳಲ್ಲಿ ನೂರಾರು ಮನೆಗಳ ಮರಗೆಲಸವನ್ನು ನನ್ನ ರಂಗ ಸಂಗಾತಿ ಉಗ್ಗಪ್ಪ ಮನೆಯೊಂದಕ್ಕೆ ನೂರ ನಲುವತ್ತು ರೂಪಾಯಿಗಳಿಗೆ ಗುತ್ತಿಗೆ ಪಡೆದಿದ್ದ. ಹಾಗಾಗಿ ಆತನೂ ಹಲವು ಸಲ ನನ್ನ ಜೊತೆ ಇರುತ್ತಿದ್ದ. ಆಗ ಇಬ್ಬರೂ ಸೈಕಲ್ಲಿನಲ್ಲಿ ಡಬ್ಬಲ್ ರೈಡ್‌ನಲ್ಲಿ ಬರುತ್ತಿದ್ದೆವು.

ಈ ಕೆಲಸಗಳಿಗಾಗಿ ಬೆಳಗ್ಗಿನ ಡೈರಿ ಸುತ್ತು ಕೆಲಸ ಮತ್ತು ಹಾಲು ಕರೆಯುವುದು ಮುಗಿಸಿ ನಂತರ ಸೈಕಲ್ ತೆಗೆದುಕೊಂಡು ಹೊರಟೆನೆಂದರೆ, ಈ ಮನೆಗಳ ಕೆಲಸ ನಡೆಯುತ್ತಿದ್ದ ಅಗಲಟ್ಟಿ, ಮಾವಿನ ಹಳ್ಳಿ, ಹಾರ್ಲೆ ಕೂಡಿಗೆ, ಗಾಣದಹೊಳೆ, ಕೃಷ್ಣಾಪುರ ಅಲ್ಲಿಂದ ಹೆನ್ನಲಿ, ಹೆಬ್ಬಸಾಲೆ ಮಾರ್ಗವಾಗಿ ಹೇಮಾವತಿ ಹೊಳೆಬದಿಯಲ್ಲೇ ಸಕಲೇಶಪುರದ ರೈಲ್ವೇ ಸ್ಟೇಷನ್‌ಗಾಗಿ ನಗರ ಸೇರುತ್ತಿದ್ದೆ. ಅಲ್ಲಿಂದ ಮುಂದೆ ಹಲವು ಕಛೇರಿಗಳನ್ನು ಮುಖ್ಯರಸ್ತೆಯಲ್ಲೇ ಬಂದು ಕೆಲವು ಸಲ ಹಾರ್ಲೆಗೂ ಹೋಗುತ್ತಿದ್ದೆ. ನಂತರ ಕೆಲವೊಮ್ಮೆ ಪಶು ಚಿಕಿತ್ಸೆಯ ಓಡಾಟಗಳು, ನಮ್ಮ ತಂಡದ ರಂಗ ಚಟುವಟಿಕೆಗಳ ಕೆಲಸಗಳು ಎಲ್ಲ ಸೇರಿ ದಿನವೊಂದಕ್ಕೆ ಎಪ್ಪತ್ತು ಕಿ.ಮೀ ನಷ್ಟು ಸೈಕಲ್ ಸವಾರಿ ಮಾಡಿದ್ದೂ ಇದೆ.

ಈ ಮನೆಗಳನ್ನು ಕಟ್ಟುವ ಕೆಲಸದ ಉಸ್ತುವಾರಿಯಲ್ಲಿ ಕೆಲವು ತಮಾಷೆಯ ಪ್ರಸಂಗಗಳು ನಡೆದವು. ಒಬ್ಬಾತ ದ್ಯಾವಯ್ಯ ಅಂತ, ಸ್ವಲ್ಪ ಉಡಾಫೆಯ ಮನುಷ್ಯ ನಮ್ಮೂರ ಪಕ್ಕದಲ್ಲೇ ಒಬ್ಬರ ತೋಟದಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಬೇರೆಯವರದ್ದಿರಲಿ ಆತನದೇ ಮನೆಯ ಯಾವ ಕೆಲಸಕ್ಕೂ ಸರಿಯಾಗಿ ಬರಲೇ ಇಲ್ಲ. ಅಂತೂ ನಾವು ಯಾರು ಯಾರನ್ನೋ ಕರೆದು ಕೆಲಸ ಮುಗಿಸುತ್ತ ಬಂದೆವು. ಕೊನೆಗೆ ನಾನೂ ಉಗ್ಗಪ್ಪನೂ ಮಾತಾಡಿ ಇವನಿಗೆ ಬುದ್ಧಿಕಲಿಸಬೇಕೆಂದು ತೀರ್ಮಾನಿಸಿ, ಏನಾದರೂ ಸರಿ ಇವನ ಮನೆಗೆ ಹೆಂಚು ಹಾಕಬಾರದೆಂದು ಹೆಂಚುಗಳನ್ನು ಹಾಗೇ ಇಟ್ಟೆವು. ರಸ್ತೆ ಬದಿಯಿಂದ ನೂರಡಿ ದೂರ ಹೆಂಚುಗಳನ್ನು ಹೊರಬೇಕಿತ್ತು. ಎಲ್ಲರ ಮನೆಯೂ ಪೂರ್ತಿಯಾಯಿತು. ನಾವು ಕೆಲವು ದಿನ ಕಾದೆವು. ಹೆಂಚುಗಳು ಅಲ್ಲೇ ಇದ್ದವು ಹೊರತು ಆತ ಅದರ ಕಡೆ ತಿರುಗಿ ನೋಡಲೂ ಇಲ್ಲ. ತಮ್ಮ ಮನೆ ಕೆಲಸಕ್ಕೆ ಆತ ಬರದಿದ್ದುದರಿಂದ ಬೇರೆಯವರೂ ಅವನೆ ಮನೆ ಕೆಲಸಕ್ಕೆ ಬರುವುದಿಲ್ಲವೆಂದು ಕುಳಿತರು. ಬಿಲ್ ಮಾಡಿಸಬೇಕಲ್ಲ? ಮನೆ ಪೂರ್ತಿಯಾಗದೆ ಬಿಲ್‌ನ ಹಣ ದೊರೆಯದು. ಕೊನೆಗೆ ನಾನೂ ಉಗ್ಗಪ್ಪನೂ ಸೇರಿ ಆರುನೂರು ಹೆಂಚುಗಳನ್ನು ಹೊತ್ತು ಮಾಡಿಗೇರಿಸಿ ಬಿಲ್ ಮಾಡಿಸಬೇಕಾಯಿತು!

ಮತ್ತೊಮ್ಮೆ ದ್ಯಾವಯ್ಯ ಸಿಕ್ಕಿದಾಗ ನಾನೂ ಉಗ್ಗಪ್ಪನೂ ಸೇರಿ ಬಾಯಿಗೆ ಬಂದಂತೆ ಬೈದೆವು. ಅದಕ್ಕೂ ಅತನೇನು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಇದಕ್ಕೆ ಕಾರಣವೂ ಇತ್ತು. ಸಾಮಾನ್ಯವಾಗಿ ಇಂಥ ಮನೆಗಳನ್ನು ಕಟ್ಟುವಾಗ ಯಾರಾದರೂ ರಾಜಕೀಯ ವ್ಯಕ್ತಿಗಳು ತಮ್ಮ ಕಡೆಯವರಿಗೆ ಕಂಟ್ರಾಕ್ಟ್ ಕೊಡಿಸಿ ಅವರು ಒಂದು ಮನೆಯ ಆಕಾರದ ಕಟ್ಟಡವನ್ನು ಕಟ್ಟಿ ಇವರಿಂದ ರುಜುಪಡೆದು ಮನೆಯನ್ನು ಇವರಿಗೆ ಒಪ್ಪಿಸಿ ತಾವೊಂದಷ್ಟು ಕಮಾಯಿ ಮಾಡುವ ಕ್ರಮ ಅಗಲೇ ಪ್ರಾರಂಭವಾಗಿತ್ತು. ಆದ್ದರಿಂದ ಗಣಪಯ್ಯನವರ ಸ್ವಾವಲಂಬಿ ನಿರ್ಮಾಣ ಕ್ರಮ ಅರ್ಥವಾಗದೆ ಇದರಲ್ಲಿ ಇವರಿಗೇನೋ ಲಾಭವಿದೆ ಆದ್ದರಿಂದ ಇವರೇ ಮಾಡಿಸಲಿ ಎಂದು ತಿಳಿಯುತ್ತಿದ್ದರು.

ಮತ್ತೊಂದು ಕಡೆ ಇದೇ ರೀತಿ ಮನೆಗಳನ್ನು ಕಟ್ಟುವಾಗ ಕೆಲವು ಮನೆಗಳಿಗೆ ಬರಬೇಕಾದ ಹೆಂಚುಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಸರ್ಕಾರದ ಟೆಂಡರಿಗೆ ಹೆಂಚಿನ ಕಾರ್ಖಾನೆಗಳು ಸ್ಪರ್ಧೆಯಿಂದ ಕಡಿಮೆಗೆ ಬಿಡ್ ಮಾಡಿ ಕಳಪೆ ಹೆಂಚುಗಳನ್ನು ಕೊಡುತ್ತಿದ್ದರು ಇದಕ್ಕಾಗಿ ನಾವು ದೂರು ಸಲ್ಲಿಸಿದ್ದರಿಂದ ಅದನ್ನೂ ಸಮಯಕ್ಕೆ ಕೊಡದೆ ಸತಾಯಿಸಿದರು. ಮಳೆಗಾಲ ಪ್ರಾರಂಭವಾದರೂ ಹೆಂಚುಗಳು ಬರುವ ಲಕ್ಷಣಗಳು ಕಾಣಿಸಲಿಲ್ಲ. ಕೊನೆಗೆ ಹಾರ್ಲೆಯಲ್ಲಿ ಒಂದು ಕಟ್ಟಡ ರಿಪೇರಿಗೆಂದು ಬಿಚ್ಚಿದ ಸುಮಾರು ನಾಲ್ಕು ಸಾವಿರ ಹೆಂಚುಗಳಿದ್ದವು. ಅವು ಹಳೆಯದಾದರೂ ಉತ್ತಮ ಗುಣ ಮಟ್ಟದ ಬಾಸೆಲ್ ಮಿಷನ್ ಹೆಂಚುಗಳು. ಅದನ್ನೇ ತೆಗೆದುಕೊಂಡು ಹೋಗುವಂತೆ ಗಣಪಯ್ಯ ಹೇಳಿದರು.

ನಾವು ಆ ಹೆಂಚುಗಳನ್ನು ಒಯ್ದು ಬಾಕಿ ಉಳಿದಿದ್ದ ಮನೆಗಳಿಗೆ ಹೊದೆಸಿ ಗೋಡೆಗಳು ಬೀಳದಂತೆ ರಕ್ಷಿಸಿದೆವು. ಅದನ್ನು ನೋಡಿ ಕೆಲವರು “ಗಣಪಯ್ಯ ಹೊಸ ಹೆಂಚು ತೋಟಕ್ಕೆ ಸಾಗಿಸಿ ಹಳೆ ಹೆಂಚು ಇವರ ತಲೆಗೆ ಕಟ್ಟಿದ್ದಾರೆ” ಎಂದು ಪ್ರಚಾರ ಮಾಡಿದರು.

ಈ ನೆಲ-ಮನೆಗಳ ಯೋಜನೆ ಕೆಲಸಗಳಿಗಾಗಿ ಗಣಪಯ್ಯ ತಮ್ಮ ಸ್ವಂತ ಹಣ ಖರ್ಚು ಮಾಡಿದ್ದು ಅಂದಿನ ಕಾಲದಲ್ಲೇ ಲಕ್ಷಗಳಲ್ಲಿತ್ತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...