ಪ್ರಾರ್ಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಶಾಲಾ ವಾಸ್ತವ್ಯ ಮಾಡಿ ರಾಜ್ಯದ ಗಮನ ಸೆಳೆದರು. ಇಂತಹ ವಾಸ್ತವ್ಯದಿಂದ ಯಾರಿಗೆ ಲಾಭವಾಯಿತೋ, ಇಲ್ಲವೋ ಭರ್ಜರಿ ಪ್ರಚಾರವಂತು ಸಿಕ್ಕಿತು. ಸಚಿವರು ಶಾಲೆಗಳು ಮತ್ತು ಅಲ್ಲಿ ಕಲಿಯುತ್ತಿರುವ ಮಕ್ಕಳ ಪರಿಸ್ಥಿತಿ ತಿಳಿದುಕೊಂಡರೆ? ಸ್ಪಷ್ಟವಾಗಿ ಇಲ್ಲವೆಂದೇ ಹೇಳಬೇಕು. ಹೇಗೆಂದು ನೋಡೋಣ ಬನ್ನಿ
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಕೆಲವು ದಿನಗಳು ಕಳೆದ ನಂತರ ದಿಢೀರ್ ತುಮಕೂರು ಜಿಲ್ಲೆಗೆ ಭೇಟಿ ಕೊಟ್ಟರು. ಅದರಲ್ಲಿ ಒಂದು ಪಾವಗಡ ತಾಲೂಕು ಅಚ್ಚಮ್ಮನಹಳ್ಳಿ ಶಾಲಾ ವಾಸ್ತವ್ಯ. ಈ ಸಂದರ್ಭದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಚಿವ ಸುರೇಶ್ ಕುಮಾರ್ ತಡಕಾಡಿದರು. ವಿಜ್ಞಾನ, ಗಣಿತ, ಇಂಗ್ಲೀಷ್ ಶಿಕ್ಷಕರೇ ಇಲ್ಲ, ಪಾಠಗಳು ಹಾಗೆ ಉಳಿಯುತ್ತಿವೆ. ಕಂಪ್ಯೂಟರ್ ಕಲಿಕೆ ಇದೆ. ಕಂಪ್ಯೂಟರ್ಗಳೇ ಇಲ್ಲ್ಲವೆಂದರು ಮಕ್ಕಳು. ಇದಕ್ಕೂ ಸಚಿವರಿಂದ ಉತ್ತರವಿಲ್ಲ. ಶಾಲೆಗೆ ಭೇಟಿ ನೀಡಿ ವಾರಗಳು ಕಳೆದರೂ ಅಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲಿಲ್ಲ. ಹಾಗಾದರೆ ಭೇಟಿ ನೀಡುವ ಅವಶ್ಯಕತೆ ಏನಿತ್ತು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
ಶಾಲಾ ವಾಸ್ತವ್ಯದಿಂದ ಏನೂ ಬದಲಾವಣೆ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲೇ ಕೈಗೊಳ್ಳಬೇಕಾದ ಕ್ರಮಗಳು ಸಾಕಷ್ಟು ಇವೆ. ಸಮಾನ ಶಿಕ್ಷಣದ ವ್ಯವಸ್ಥೆ ಜಾರಿಗೆ ತಂದರೆ ಶಿಕ್ಷಣದ ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಣೆ ಮಾಡಬಹುದು. ಇದು ಸಚಿವರಿಗೂ ಗೊತ್ತು. ಆದರೆ ಮಾಡಲು ಮನಸ್ಸಿಲ್ಲ ಅಷ್ಟೇ.
ಡಾ.ನಂಜುಂಡಪ್ಪ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕು ಪಾವಗಡ. ಇಲ್ಲಿಗೆ ಶಿಕ್ಷಕರು ಬರುವುದು ಕಷ್ಟ. ದೂರದ ತಾಲೂಕು. ಇದು ಗೊತ್ತಿಲ್ಲವೇ ಮಾನ್ಯ ಸುರೇಶ್ಕುಮಾರ್ ಅವರಿಗೆ? ಪಾವಗಡದ ಅಚ್ಚಮ್ಮನಹಳ್ಳಿ, ಗುಬ್ಬಿ ತಾಲೂಕಿನ ಎರಡು ಶಾಲೆಗಳಿಗೂ ಭೇಟಿ ಕೊಟ್ಟರು. ಆಯಾ ಜನರಿಗೆ ಬಂದ ಭಾಗ್ಯವಾದರೂ ಏನು? ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ನಾಗರಿಕ ಸಂಘಟನೆಗಳು ಗಮನ ಸೆಳೆಯುತ್ತಲೇ ಬಂದಿವೆ. ಸಾವಿರಾರು ಶಾಲೆಗಳು ಮುಚ್ಚಿರುವ ಬಗ್ಗೆ ವರದಿ ಇದೆ.. ಸರ್ಕಾರದ ಬಳಿಯೂ ಅಂಕಿ ಆಂಶಗಳಿವೆ. ಹೀಗಿದ್ದರೂ ಏನು ಕ್ರಮ ಕೈಗೊಂಡರು. ಹೋಗಲಿ, ಸಚಿವರು ಶಾಲೆಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿತರು ಎಂದು ಭಾವಿಸೋಣ. ಸರ್ಕಾರಕ್ಕೆ ವಾಸ್ತವಿಕ ವರದಿ ನೀಡಿದರೇ? ಉತ್ತರ ಶೂನ್ಯ!
ಇದೀಗ ಸಚಿವ ಸುರೇಶ್ಕುಮಾರ್ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದಲ್ಲಿ ಬದಲಾವಣೆ ಎಂದಿದ್ದಾರೆ. ಸುಧಾರಣೆ ಎಂದಿಲ್ಲ. ಅಂದರೆ ಈಗಿರುವ ವ್ಯವಸ್ಥೆಯನ್ನು ಬದಲಿಸಿ ಆರ್ಎಸ್ಎಸ್ನ ವಿಷಕಾರಿ ಅಜೆಂಡಾವನ್ನು ಮಕ್ಕಳಿಗೆ ಉಣಿಸುವುದು ಎಂದರ್ಥವೇ? ಇರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕಂಪ್ಯೂಟರ್ ಇಲ್ಲ. ಎಷ್ಟೋ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಮಕ್ಕಳ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಿದೆ. ಹೀಗಿದ್ದರೂ ಗುಣಮಟ್ಟ ಸಾಧಿಸಲು ಆಗಿಲ್ಲ! ಇಂತಹ ಸನ್ನಿವೇಶದಲ್ಲಿ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಏಳನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಮಾಡುವುದಾಗಿ ಪ್ರಕಟಿಸಿದ್ದಾರೆ. 1 ರಿಂದ 9ನೇ ತರಗತಿವರೆಗೆ ಪಾಸು ಮಾಡುವ ಪದ್ದತಿ ಇನ್ನು ಮುಂದೆ ಇರುವುದಿಲ್ಲ ಎಂದು ಹೇಳಿದ್ದಾರೆ. ಇದು ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರವಲ್ಲದೆ ಮತ್ತೇನು?
ಸಧ್ಯದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕೆಲ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪದವಿ ಹಂತಕ್ಕೆ ಬಂದರೂ ವ್ಯಾಕ್ಯ ಬರೆಯುವುದಿರಲಿ, ಸರಿಯಾಗಿ ಕಾಗುಣಿತ ಬರೆಯಲು ಬರುತ್ತಿಲ್ಲ. ಮಕ್ಕಳ ಉತ್ತರ ಪತ್ರಿಕೆಗಳನ್ನು ನೋಡಿದರೆ ಪಾಸು ಮಾಡುವ ಮನಸ್ಸೇ ಬರುವುದಿಲ್ಲ. ಕನಿಷ್ಟ ಅಂಕ ಗಳಿಸುವುದೂ ದುಃಸ್ಥರ. ಶಿಕ್ಷಕರು ತಮ್ಮ ಮರ್ಯಾದೆಯ ಪ್ರಶ್ನೆ ಎಂದು ಮಕ್ಕಳನ್ನು ಪಾಸು ಮಾಡುತ್ತಾರೆ. ಮುಂದಿನ ತರಗತಿಗೂ ಮಕ್ಕಳು ಬೇಕಲ್ಲವೇ?! ಇಲ್ಲಿ ಶಿಕ್ಷಕರನ್ನು ದೂರಬೇಕೋ? ಮಕ್ಕಳನ್ನು ದೂರಬೇಕೋ, ಪೋಷಕರನ್ನೋ ಅಥವಾ ಸರ್ಕಾರವನ್ನೋ! ಅಂತು ಮಕ್ಕಳು ಮಾತ್ರ ಶಿಕ್ಷಣ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಗೊಳಿಸಬೇಕಾದ ಶಿಕ್ಷಣ ಸಚಿವರಾದಿಯಾಗಿ ಸರ್ಕಾರ ಖಾಸಗಿ ಶಿಕ್ಷಣದ ಮಾಲಿಕತ್ವಕ್ಕೆ ಶರಣಾಗಿ ಸಾಮಾನ್ಯ ಬಡಮಕ್ಕಳನ್ನು ಹಾಳು ಮಾಡುತ್ತಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಲೋಚನೆಗೆ ಬಡಮಕ್ಕಳು ಬೇಕಾಗಿಲ್ಲ. ಗ್ರಾಮೀಣಕ್ಕೂ ಮತ್ತು ನಗರ ಲೋಕದ ಚಿತ್ರಣ ಅವರ ಕಣ್ಣು ಮುಂದೆ ಇಲ್ಲ. ಕೇವಲ ಲಕ್ಷಲಕ್ಷ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳೇ ಅವರ ಮುಂದಿವೆ. ಆ ಚಿತ್ರಣ ಗ್ರಾಮೀಣ ಪರಿಸರವನ್ನು ಮಸುಕುಗೊಳಿಸುತ್ತದೆ. ಖಾಸಗೀಕರಣ, ಶಾಲೆಗಳ ವಿಲೀನ, ವಿಶೇಷ ಶಿಕ್ಷಣ ವಲಯ, ಸಂಕೀರ್ಣ ಶಿಕ್ಷಣ ಪದ್ದತಿ, ಹೀಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಸರ್ಕಾರಿ ಶಾಲಾ ವ್ಯವಸ್ಥೆಯನ್ನೇ ಇಲ್ಲದಂತೆ ಮಾಡುವ ನೀತಿಗಳತ್ತಲೆ ಅವರ ಚಿತ್ತ..