11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎನ್ನುವ ಕೂಗು ರಾಜ್ಯದೆಲ್ಲೆಡೆ ಜೋರಾಗಿದೆ. ಈ ಪ್ರಕರಣ ನಡೆದು ದಶಕಗಳೇ ಉರುಳಿದರೂ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಕುಟುಂಬಸ್ಥರು ಸತತ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಹೋರಾಟಗಳು ಆರಂಭವಾಗಿವೆ. ಕನ್ನಡ ಚಿತ್ರರಂಗದ ನಾಯಕ ನಟರು ಕೂಡ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಾರೆ.
ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮತ್ತೆ ಹೋರಾಟಗಳು ಆರಂಭವಾಗಿವೆ. ಈ ಪ್ರಕರಣ ಸಂಬಂಧ 11 ವರ್ಷಗಳ ಹಿಂದೆ ಬಂಧಿತನಾಗಿದ್ದ ಸಂತೋಷ್ ರಾವ್, ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಮತ್ತೆ ಸೌಜನ್ಯ ಪ್ರಕರಣ ಮುನ್ನೆಲೆಗೆ ಬಂದಿದೆ.
ಕನ್ನಡ ಖ್ಯಾತ ನಟ ದಿವಂಗತ ಟೈಗರ್ ಪ್ರಭಾಕಾರ್ ಅವರ ಮಗ ನಟ ವಿನೋದ್ ಟೈಗರ್ ಪ್ರಭಾಕರ್ ಅವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ”ಮಹೇಶ್ ಶೆಟ್ಟಿ ಸರ್ ನಿಮ್ಮ ಕೆಲಸದ ಮೇಲೆ ನನಗೆ ಅಪಾರ ಗೌರವವಿದೆ. ನಾನು ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪನಲ್ಲಿ ಪ್ರಾರ್ಥಿಸುತ್ತೇನೆ. ಸೌಜನ್ಯ ನ್ಯಾಯ ಕೊಡಲಿ. ಸೌಜನ್ಯ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳಕ್ಕೆ ಹೋಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
View this post on Instagram
ಇತ್ತೀಚಿಗಷ್ಟೇ ನಟ ದುನಿಯಾ ವಿಜಯ್ ಕೂಡ ಸೌಜನ್ಯ ಕೇಸ್ಗೆ ಸಂಬಂಧಿಸಿದಂತೆ ಪೋಸ್ಟ್ ಹಾಕಿಕೊಂಡಿದ್ದರು. ”ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾವುದನ್ನೂ ಹೆಚ್ಚು ಸಮಯ ಮರೆಮಾಚಲಾಗದು” ಎಂದು ದುನಿಯಾ ವಿಜಯ್ ಬರೆದುಕೊಂಡಿದ್ದಾರೆ.
”ಸೌಜನ್ಯ ಪ್ರಕರಣದಲ್ಲೂ ತುಂಬಾ ಅನ್ಯಾಯವಾಗಿದೆ. ಏನು ಮಾತಾಡಬೇಕು ಗೊತ್ತಾಗಲ್ಲ. ನನ್ನ ಪ್ರಕಾರ ಇದಕ್ಕೆಲ್ಲ ಪರಿಹಾರ ಅಂದ್ರೆ ವಿದ್ಯೆ ಅನ್ಸುತ್ತೆ. ನಾವು ಪ್ರೀತಿಯ ಬೀಜ ಬಿತ್ತಬೇಕು ವಿಷದ ಬೀಜ ಬಿತ್ತಬಾರದು. ದೊಡ್ಡ ಸಾಧನೆ ಮಾಡ್ತೀವಿ ದೊಡ್ಡ ಎಕಾನಮಿ ಅಗುತ್ತೆ ವಿಶ್ವಗುರು ಆಗ್ತೀವಿ ಅನ್ನೋದು ಸುಳ್ಳು. ಜಗತ್ತಿನಲ್ಲಿ ಎಲ್ಲರೂ ಖುಷಿಯಾಗಿದ್ರೆ ಮಾತ್ರ ನಾವು ಖುಷಿಯಾಗಿರೋದು ಎಂದು ಕಿಶೋರ್ ಹೇಳಿದ್ದರು.