ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟನ್ನು ತೋರಿಸಲು ದೆಹಲಿಯ ಇಂಡಿಯಾ ಗೇಟ್ ಬಳಿ ಎರಡು ಗಂಟೆಗಳ ಸಾಂಕೇತಿಕ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೊಸ ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾಚಾರ ನಡೆಸಿದ್ದರು. ಅದನ್ನು ಖಂಡಿಸಿ ಇಂದು ಬೆನಾರಸ್, ಕೋಲ್ಕತಾ, ಬೆಂಗಳೂರು, ಚನ್ನೈ ಮತ್ತು ಮುಂಬೈನ ಹಲವಾರು ನಗರಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಕೆಲವೇ ಕಾರ್ಯಕರ್ತರೊಡನೆ ಇಂಡಿಯಾ ಗೇಟ್ ಬಳಿ ಸಾಂಕೇತಿಕ ಧರಣಿ ಆರಂಭಿಸಿದ ಪ್ರಿಯಾಂಕ ಗಾಂಧಿ ತದನಂತರ ಅವರ ಬೆಂಬಲಕ್ಕೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಪ್ರತಿಭಟನೆ ಜನರಿಂದ ತುಂಬಿಹೋಗಿದೆ. ಪೊಲೀಸರು ಸ್ಮಾರಕವನ್ನು ಸುತ್ತುವರೆದಿದ್ದು, ವಿದ್ಯಾರ್ಥಿಗಳು ಈ ಪ್ರದೇಶವನ್ನು ಸಮೀಪಿಸದಂತೆ ಹತ್ತಿರದ ಮೆಟ್ರೋ ನಿಲ್ದಾಣಗಳನ್ನು ಮುಚ್ಚುವಂತೆ ಕೇಳಿಕೊಂಡಿದ್ದಾರೆ.
ಸರ್ಕಾರ ಸಂವಿಧಾನ ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ, ಅವರು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ ನಂತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ನಾವು ಸಂವಿಧಾನಕ್ಕಾಗಿ ಹೋರಾಡುತ್ತೇವೆ, ಈ ಸರ್ಕಾರದ ವಿರುದ್ಧ ಹೋರಾಡುತ್ತೇವೆ, ಎಂದು ಪ್ರತಿಭಟನೆ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಸಂಜೆ 4 ಗಂಟೆಗೆ ಪ್ರಾರಂಭವಾದ ಈ ಎರಡು ಗಂಟೆಗಳ ಪ್ರತಿಭಟನೆಯು ಜಾಮಿಯಾ ವಿಶ್ವವಿದ್ಯಾಲಯ ಮತ್ತು ಇತರ ಸ್ಥಳಗಳ ವಿದ್ಯಾರ್ಥಿಗಳಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವುದಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ. ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರು ಜೊತೆಗಿದ್ದಾರೆ.
ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಬಿಜೆಪಿಯಿಂದ ಆದೇಶಗಳಿಂದ ಹಿಂಸೆಗಿಳಿದಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್, ಹಿಂಸಾಚಾರದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ಕರೆ ನೀಡಿದೆ. ನಾಳೆ ಮಧ್ಯಾಹ್ನ ಇತರ ವಿರೋಧ ಪಕ್ಷಗಳೊಂದಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವುದಾಗಿಯೂ ಕಾಂಗ್ರೆಸ್ ತಿಳಿಸಿದೆ. ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಡಿಸೆಂಬರ್ 19ರಂದು ದೇಶಾದ್ಯಂತ ಪ್ರಗತಿಪರು ಮತ್ತು ಎಡ ಪಕ್ಷಗಳು ಭಾರೀ ಪ್ರತಿಭಟನೆ ನಡೆಸಲು ಯೋಜಿಸುತ್ತಿವೆ.