ಯಡಿಯೂರಪ್ಪನವರು ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರಿಂದಲೇ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ದೇವೇಗೌಡರು ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲಿಸುತ್ತಿದ್ದರು ಎಂದೂ ಸಹ ಆರೋಪಿಸಿದ್ದಾರೆ. ಅದಕ್ಕಾಗಿ ಬಿಜೆಪಿಯಿಂದ ನಿಂತಿದ್ದೀನಿ ಎನ್ನುತ್ತಿದ್ದಾರೆ. ಇವರು ಗ್ರಾ.ಪಂ ಸದಸ್ಯರಿಂದ ಹಿಡಿದು ಸಣ್ಣ ಪುಟ್ಟ ಮುಖಂಡರನ್ನು ಕೊಳ್ಳಲು ಸಾಕಷ್ಟು ಹಣದ ಹೊಳೆ ಹರಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಕೆ.ಆರ್.ಪೇಟೆ ನನ್ನ ಜನ್ಮಭೂಮಿ. ನಾನು ಹುಟ್ಟಿದ ಜಿಲ್ಲೆಯಲ್ಲಿ ಬಿಜೆಪಿ ಒಂದು ಸೀಟೂ ಗೆಲ್ಲದೇ ಇರುವುದಕ್ಕೆ ನಾಚಿಕೆಯಾಗುತ್ತಿದೆ. ಈ ಬಾರಿ ದಯವಿಟ್ಟು ಗೆಲ್ಲಿಸಿ ಎಂದು ಅವಲತ್ತುಕೊಂಡಿದ್ದಾರೆ. ಅವರ ಮಗ ಬಿ.ವೈ.ವಿಜಯೇಂದ್ರನನ್ನು ಅಲ್ಲಿಯೇ ಠಿಕಾಣಿ ಹೂಡಿಸಿ, ಮತಬೇಟೆಗೆ ಇಳಿಸಿದ್ದಾರೆ. ಮಂಡ್ಯ ಸಂಸದೆ ಸುಮಲತಾರವರು ಇದಕ್ಕೆ ಸಾಥ್ ನೀಡಿದ್ದಾರೆ. ಆರ್.ಎಸ್.ಎಸ್ ಅಂಗಸಂಸ್ಥೆಗಳು ಈ ಬಾರಿ ತುಸು ಬಿರುಸಿನಿಂದಲೇ ಪ್ರಚಾರಕ್ಕಿಳಿದಿವೆ.
ಇನ್ನು ತನ್ನ ಭದ್ರಕೋಟೆಯಲ್ಲಿ ಜೆ.ಡಿ.ಎಸ್ ಜಾತಿಬಲವನ್ನು ನೆಚ್ಚಿಕೊಂಡಿದೆ. ಮೊನ್ನೆ ಯಡಿಯೂರಪ್ಪನವರು ವೀರಶೈವ ಲಿಂಗಾಯಿತರ ಒಂದೂ ಓಟು ಕೂಡ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಬಾರದು ಎಂದು ಹೇಳಿದ್ದನ್ನು ಜೆಡಿಎಸ್ ಎನ್ಕ್ಯಾಶ್ ಮಾಡಿಕೊಳ್ಳಲು ಹೊರಟಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರು ಜೆಡಿಎಸ್ನತ್ತ ಧ್ರುವೀಕರಣಗೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಯಾರೇ ನಿಂತರೂ ಗೆಲುವು ಖಚಿತ ಎಂಬಂತಿರುವಾಗ, ಅಧಿಕೃತ ಅಭ್ಯರ್ಥಿ ದೇವರಾಜು ಗೆಲುವು ನಿಶ್ಚಿತ ಎನ್ನುವುದು ಜೆಡಿಎಸ್ ಕಾರ್ಯಕರ್ತರ ವಿಶ್ವಾಸ.
ಕಾಂಗ್ರೆಸ್ನಿಂದ ಹಳೇ ಹುರಿಯಾಳು ಕೆ.ಬಿ.ಚಂದ್ರಶೇಖರ್ ಕಣಕ್ಕಿಳಿದಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಸೋತು ಕಂಗೆಟ್ಟಿರುವ ಅವರಿಗೆ ಗೆಲುವು ಬೇಕೇ ಬೇಕು. ಯಾವಾಗೆಲ್ಲ ಜೆಡಿಎಸ್ ಅಭ್ಯರ್ಥಿಗಳು ಪಕ್ಷಾಂತರ ಮಾಡಿ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದರೋ ಆಗೆಲ್ಲಾ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. 1989 ಮತ್ತು 1999ರಲ್ಲಿ ಇದೇ ರೀತಿ ಆಗಿದೆ. ಅದರ ಪುನರಾವರ್ತನೆಗಾಗಿ ಕಾಂಗ್ರೆಸ್ ಎದುರು ನೋಡುತ್ತಿದೆ. ಕ್ಷೇತ್ರದಲ್ಲಿ ಒಂದಷ್ಟು ಬಲ ಹೊಂದಿರುವ ಕರ್ನಾಟಕ ರಾಜ್ಯ ರೈತ ಸಂಘವು ಪರೋಕ್ಷವಾಗಿ ಕಾಂಗ್ರೆಸ್ಗೆ ಬೆಂಬಲಿಸುತ್ತಿರುವುದು ಕೆಬಿಸಿಗೆ ಪ್ಲಸ್ ಪಾಯಿಂಟ್.
ಲಿಂಗಾಯಿತ ಸೇರಿದಂತೆ ಕೆಲ ಮೇಲ್ಜಾತಿ ಓಟುಗಳು ಪೂರ್ತಿ ಬಿಜೆಪಿ ಪಾಲಾದರೆ, ಮಾದಿಗರು ಮತ್ತು ನಾಯಕ ಸಮುದಾಯದ ಒಂದಷ್ಟು ಓಟನ್ನು ಬಿಜೆಪಿ ಪಡೆದುಕೊಳ್ಳಲಿದೆಯೆಂದು ಅಂದಾಜಿಸಲಾಗುತ್ತಿದೆ. ಜೆಡಿಎಸ್ ಅತಿ ಹೆಚ್ಚು ಒಕ್ಕಲಿಗ ಓಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಕಾಂಗ್ರೆಸ್ ಕುರುಬರು, ಮುಸ್ಲಿಮರ ಬಹುತೇಕ ಓಟುಗಳನ್ನು ಪಡೆದರೆ ಒಕ್ಕಲಿಗರು ಮತ್ತು ದಲಿತರ ಒಂದಷ್ಟು ಓಟುಗಳನ್ನು ಸೆಳೆಯುತ್ತದೆ. ಅಲ್ಲಿಗೆ ಒಕ್ಕಲಿಗ ಓಟುಗಳನ್ನು ಎಷ್ಟು ಪಡೆದುಕೊಳ್ಳುತ್ತಾರೆ ಎನ್ನುವದರ ಮೇಲೆ ಜಯ ಜೆಡಿಎಸ್ನದೊ ಅಥವಾ ಕಾಂಗ್ರೆಸ್ನದೋ ಎನ್ನುವುದು ನಿರ್ಧಾರವಾಗುತ್ತದೆ.
ಇದನ್ನೂ ಓದಿ: ಹುಣಸೂರಿನಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ಬಿಗ್ ಫೈಟ್: ಇವರಿಬ್ಬರಲ್ಲಿ ಜೆಡಿಎಸ್ ಯಾರನ್ನು ಗೆಲ್ಲಿಸಲಿದೆ?
ಇದನ್ನೂ ಓದಿ: ಮಹಾಲಕ್ಷ್ಮಿ ಲೇಔಟ್: ಗೋಪಾಲಯ್ಯನ ಗೆಲುವಿಗೆ ಮುನ್ನುಡಿ ಬರೆಯಿತೇ ಜೆಡಿಎಸ್?
ಇದನ್ನೂ ಓದಿ: ಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್!