ರಾಹುಲ್ ಗಾಂಧಿ ಅವರನ್ನು ಸದನದಿಂದ ಅಕ್ರಮವಾಗಿ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸೋಮವಾರ ಸಂಸತ್ತಿನಲ್ಲಿ ಕಪ್ಪು ಬಟ್ಟೆ ಧರಿಸಿಕೊಂಡು ಬಂದಿದ್ದರು. ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷಗಳು, ಅದಾನಿ ಹಾಗೂ ರಾಹುಲ್ ಗಾಂಧಿ ಅವರ ಅನರ್ಹತೆ ಸಂಬಂಧ ಘೋಷಣೆ ಕೂಗಿದರು ಇದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಮೊದಲ ಕೆಲವು ಸೆಕೆಂಡುಗಳಲ್ಲಿ ಸದನವನ್ನು ಮುಂದೂಡಿದರು.
ಸದನ ಸಭೆ ಸೇರುತ್ತಿದ್ದಂತೆಯೇ ಕಾಂಗ್ರೆಸ್ ಸಂಸದರಾದ ಟಿಎನ್ ಪ್ರತಾಪನ್ ಹಿಬಿ ಈಡನ್, ಜೋತಿಮಣಿ ಎಸ್ ಮತ್ತು ರಮ್ಯಾ ಹರಿದಾಸ್ ಅವರು ಸದನದ ಬಾವಿಗೆ ಧಾವಿಸಿ ತಮ್ಮ ಕೈಯಲ್ಲಿದ್ದ ಕಾಗದಗಳನ್ನು ಹರಿದು ಸಭಾಧ್ಯಕ್ಷರತ್ತ ಎಸೆದರು.
ಕೆಲ ಸಂಸದರು ಸ್ಪೀಕರ್ಗೆ ಕಪ್ಪು ಬಟ್ಟೆ ಬೀಸಿದರು. ಆಗ ಓಂ ಬಿರ್ಲಾ ಅವರು ‘ನಾನು ಘನತೆಯಿಂದ ಸಂಸತ್ ಕಲಾಪವನ್ನು ನಡೆಸಬೇಕು‘ ಎಂದು ಹೇಳಿ, ಲೋಸಕಭೆ ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಿದರು.
ಕಾಂಗ್ರೆಸ್ ಸಂಸದರು ಪ್ರತಿಭಟನೆ ಮುಂದುವರಿಸಿ ಹರಿದ ಕಾಗದಗಳನ್ನು ಸಭಾಧ್ಯಕ್ಷರ ಪೀಠದ ಮೇಲೆ ಎಸೆದರು. ಸ್ಪೀಕರ್ ಕುರ್ಚಿಯ ಮೇಲೆ ಬ್ಯಾನರ್ವೊಂದನ್ನು ಎಸೆಯಲಾಯಿತು.
ಕಾಂಗ್ರೆಸ್ ಸದಸ್ಯರೊಂದಿಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ), ಎಡಪಕ್ಷಗಳು ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸದಸ್ಯರೂ ಕಪ್ಪು ಬಟ್ಟೆ ಧರಿಸಿದ್ದರು. ತೃಣಮೂಲ ಕಾಂಗ್ರೆಸ್ ಸಂಸದರು ಕಪ್ಪು ಪಟ್ಟಿಯಿಂದ ಬಾಯಿ ಮುಚ್ಚಿಕೊಂಡರು. ಈ ವೇಳೆ ಸಂಸದರು ”ಜಾಗೋ ಇಡಿ” ಮತ್ತು ”ಇಡಿ ಮೋದಾನಿ ಭಾಯಿ ಭಾಯಿ” ಎಂದು ಬಬರೆದಿರುವ ಫಲಕಗಳನ್ನು ಹಿಡಿದುಕೊಂಡಿದ್ದರು.
ಸದನವನ್ನು ಮುಂದೂಡಿದ ನಂತರ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷಗಳ ಸದಸ್ಯರು ಕೆಲಕಾಲ ಧರಣಿ ನಡೆಸಿದರು. ನಂತರ ಪ್ರತಿಪಕ್ಷಗಳು ವಿಜಯ್ ಚೌಕ್ಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.