ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರರನ್ನು ಬಂಧಿಸಿದ್ದ ಪೊಲೀಸರು ರಾತ್ರಿ 8 ಗಂಟೆ ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಒಳಮೀಸಲಾತಿ ಹೋರಾಟದ ಧರಣಿ ಮುಂದುವರಿದಿದ್ದು 2ನೇ ದಿನಕ್ಕೆ ಕಾಲಿಟ್ಟಿದೆ.
ಬಿಡುಗಡೆ ಬಳಿಕ ಮಾತನಾಡಿದ ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್, “ಕಳೆದ ನವೆಂಬರ್ 28ರಿಂದ 350 ಕಿ.ಮಿ ಪಾದಯಾತ್ರೆ ಮಾಡಿ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದೇವೆ. ಇದು ಸಮುದಾಯ ಹಿತಾಸಕ್ತಿಯ ಸ್ವಾಭಿಮಾನದ ಹೋರಾಟವೇ ಹೊರತು ಯಾವುದೇ ಪಕ್ಷ ಪ್ರೇರಿತ ಹೋರಾಟವಲ್ಲ. ಬೊಮ್ಮಾಯಿಯವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಚರ್ಚೆ ನಡೆಸಬೇಕಿತ್ತು. ಆದರೆ ಲಾಠೀ ಚಾರ್ಜ್ ಮಾಡಿ, ಬಂಧಿಸಿ ಅವರ ತಮ್ಮ ಕಾಲ ಮೇಲೆ ಅವರೆ ಕಲ್ಲು ಹಾಕಿಕೊಂಡಿದ್ದಾರೆ” ಎಂದರು.
“ಮುಖ್ಯಮಂತ್ರಿಗಳು ರಾಯಚೂರಿಗೆ ಬಂದಾಗ ನಾವೇ ಒಳಮೀಸಲಾತಿ ಜಾರಿ ಮಾಡುತ್ತೇವೆ, ನೀವು ಗಾಬರಿ ಪಡಬೇಕಿಲ್ಲ ಎಂದು ಆಶ್ವಾಸನೆ ನೀಡಿದ್ದರು. ಆದರೆ ನಾವು ಬೆಂಗಳೂರಿಗೆ ಬಂದರೆ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಆದರೆ ಸರ್ಕಾರದ ಲಾಠಿ ಬೂಟಿಗೆ ಹೆದರುವವರು ನಾವಲ್ಲ, ನಾವು ಅಂಬೇಡ್ಕರ್ರವರ ಮಕ್ಕಳು. ಅವರು ನಮಗೆ ಕಾನೂನು ಕಲಿಸಿದ್ದಾರೆ. ಅದರಂತೆಯೇ ಹೋರಾಡುತ್ತೇವೆ. ನಿಮಗೆ ಕಾನೂನು ಗೊತ್ತಿದ್ದರೆ ಒಳಮೀಸಲಾತಿ ಜಾರಿಗೊಳಿಸಿ” ಎಂದರು.
ಸಿಎಂ ಬೊಮ್ಮಾಯಿಯವರೆ, ಸಂವಿಧಾನದ ಮೇಲೆ, ಪ್ರಜಾತಂತ್ರದ ಮೇಲೆ, ನೀವು ಕೂತಿರುವ ಕುರ್ಚಿಯ ಮೇಲೆ ನಿಮಗೆ ಏನಾದರೂ ಘನತೆ, ಗೌರವವಿದ್ದರೆ, ಡಿಸೆಂಬರ್ 19 ಅಧಿವೇಶನ ಆರಂಭವಾಗುವ ಮೊದಲೇ ದಿನವೇ 101 ಜಾತಿಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹಂಚಿಕೆ ಮಾಡುತ್ತೇವೆ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಅದು ಸಂವಿಧಾನಾತ್ಮಕವಾಗಿ ಸರ್ಕಾರದ ಜವಾಬ್ದಾರಿ. ಕೇವಲ ನಮ್ಮನ್ನು ಬಂಧಿಸಿ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಸುನಾಮಿಯಂತೆ ಪುಟಿದೆದ್ದ ಹೋರಾಟದ ಕಣಕ್ಕಿಳಿಯುತ್ತೇವೆ. ಎಲ್ಲಾ ದಲಿತ, ಮಾದಿಗ, ಪ್ರಜಾತಂತ್ರವಾದಿಗಳು ಈ ಹೋರಾಟದ ಜೊತೆಗಿದ್ದಾರೆ ಎಂದು ಅಂಬಣ್ಣ ತಿಳಿಸಿದ್ದಾರೆ.
ಇದು ಕೇವಲ ಆಳುವ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮತ್ತು ಕುಮಾರಸ್ವಾಮಿಯವರು ತಮ್ಮ ಪಕ್ಷದ ಎಲ್ಲಾ ಶಾಸಕರ ಮನವೊಲಿಸಿ ಒಳಮೀಸಲಾತಿ ಜಾರಿಗೆ ಶ್ರಮಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ನಿಮಗೂ ಪಾಠ ಕಲಿಸುತ್ತೇವೆ ಎಂದರು.
ಇನ್ನೊಂದೆಡೆ ತಲೆ ಮತ್ತು ಕಾಲಿಗೆ ಪೆಟ್ಟುಬಿಟ್ಟು ಆಸ್ಪತ್ರೆ ಸೇರಿದ್ದ ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿಯವರು ಸಹ ಚೇತರಿಸಿಕೊಂಡಿದ್ದು ಹೋರಾಟದ ಕಣ ಸೇರಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣರನ್ನು ಸಂಧಾನಕ್ಕೆ ಕಳಿಸ್ತೀರಾ? ಒಳಮೀಸಲಾತಿ ಹೋರಾಟಗಾರರ ಆಕ್ರೋಶ
ಬೀದಿಗಿಳಿದು ಹೋರಾಟ ಸಾಕೆ?ಮುಖ್ಯವಾಗಿ ಸಮುದಾಯ ದವರಿಗೆ ತಮ್ಮ ತಮ್ಮ ಮತಗಳ ಮೌಲ್ಯದ ಬಗ್ಗೆ ಅರಿವುಮೂಡಿಸೋದು ಸಮುದಾಯದ ರಾಜಕೀಯ ಅಧಿಕಾರ ಹಿಡಿಯಲು ಮುಖ್ಯವಾದ ಮೆಟ್ಟಿಲು.ಇದು ಅರಿತಿರುವುದರಿಂದಲೇ ಒಕ್ಕಳಿಗರಾಗಲಿ,ಲಿಂಗಾಯತರಾಗಲಿ,ಕುರುಬರಾಗಲಿ ಬೀದಿ ಗಿಳಿಯುವುದಕ್ಕಿಂತ ತಮ್ಮ ತಮ್ಮ ಮತಗಳನ್ನ ವಿವೇಚನೆಯಿಂದ ಬಳಸಿ ರಾಜಕೀಯ ಅಧಿಕಾರ ಗಳಿಸಿದ್ದಾರೆ.
ಭಾಬಾಸಾಹೇಬರು ನೀಡಿರುವ ಈ ಅಸ್ತ್ರ ಬಿಟ್ಟು ಮನುವಾದಿ, ಜಾತಿವಾದಿ ಅದಿಕಾರಸ್ತರ ಬಳಿ ಬೇಡುವುದೇಕೆ?