2022ರಲ್ಲಿ ಟಿ20 ಕ್ರಿಕೆಟ್ನಲ್ಲಿ ಒಂದೂ ಸೋಲು ಕಾಣದೇ ಅಜೇಯರಾಗುಳಿದ್ದ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಭಾರತವು ಸೂಪರ್ ಓವರ್ನಲ್ಲಿ ಮಣಿಸಿ ಸರಣಿಯಲ್ಲಿ ಸಮಬಲ ಸಾಧಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ ಮಂದಾನ ಭಾರತದ ಗೆಲುವಿನ ರೂವಾರಿಯೆನೆಸಿದರು.
ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಕ್ರಿಕೆಟ್ ಪಂದ್ಯ ನೋಡಲು 40 ಸಾವಿರಕ್ಕೂ ಅಧಿಕ ಪ್ರೇಕ್ಷಕರು ನೆರೆದಿದ್ದರು. ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟ್ ಮಾಡಿ ಒಂದು ವಿಕೆಟ್ 187 ರನ್ ಗಳಿಸಿದರೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿತು. ಪಂದ್ಯ ಸೂಪರ್ ಓವರ್ವರೆಗೂ ತಲುಪಿ ರೋಚಕತೆ ಹುಟ್ಟಿಸಿತ್ತು. ಕೊನೆಗೆ ಸೂಪರ್ ಓವರ್ನಲ್ಲಿ ಭಾರತ 4 ರನ್ಗಳ ಜಯ ಸಾಧಿಸಿತು.
2022ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ 12 ಟಿ20 ಪಂದ್ಯಗಳನ್ನಾಡಿ 9 ಗೆಲವು ಕಂಡರೆ ಮೂರು ಪಂದ್ಯಗಳು ಫಲಿತಾಂಶ ಕಾಣದೆ ರದ್ದುಗೊಂಡಿದ್ದವು. 13ನೇ ಪಂದ್ಯದಲ್ಲಿ ಅದು ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ.
ರೋಚಕ ಸೂಪರ್ ಓವರ್
ಸೂಪರ್ ಓವರ್ನಲ್ಲಿ ಆಸ್ಟ್ರೇಲಿಯಾದ ಗ್ರಹಂ ಎಸೆದ ಮೊದಲ ಬಾಲ್ ಎದುರಿಸದ ರಿಚಾ ಘೋಷ್ ಸಿಕ್ಸರ್ ಎತ್ತಿದ್ದರು. ಎರಡನೇ ಬಾಲ್ನಲ್ಲಿ ಅವರಿಗೆ ಕ್ಯಾಚಿತ್ತ ನಿರ್ಗಮಿಸಿದರು. ಆಗ ಕ್ರೀಸ್ಗಿಳಿದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಒಂದು ರನ್ ಗಳಿಸಿದರು. ನಾಲ್ಕನೇ ಎಸೆತವನ್ನು ಸ್ಮೃತಿ ಮಂದಾನ ಬೌಂಡರಿಗೆ ಅಟ್ಟಿದರು. 5ನೇ ಎಸೆತವನ್ನು ಆಕರ್ಷಕ ಸಿಕ್ಸರ್ ಬಾರಿಸಿದರು. ಆರನೇ ಎಸೆತದಲ್ಲಿ ಮೂರು ರನ್ ಕಲೆ ಹಾಕಿದರು. ಭಾರತವು ಒಂದು ಓವರ್ನಲ್ಲಿ 20 ರನ್ ಗಳಿಸಿತು.
ಗೆಲುವಿಗೆ 21 ರನ್ ಗುರಿ ಪಡೆದು ಕ್ರೀಸ್ಗಿಳಿದ ಆಸ್ಟ್ರೇಲಿಯಾದ ಹ್ಯಾಲಿ ರೇಣುಕಾ ಎಸೆದ ಮೊದಲ ಎಸೆತವನ್ನು ನೇರ ಬೌಂಡರಿಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾದ ಗಾರ್ಡನೆರ್ ರಾಧಾಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ಆಸ್ಟ್ರೇಲಿಯಾ 3 ಎಸೆತದಲ್ಲಿ 16 ರನ್ ಗಳಿಸಬೇಕಿತ್ತು. ನಾಲ್ಕನೇ ಎಸೆತ ಎದುರಿಸಿದ ಮ್ಯಾಗ್ರಥ್ ಒಂದು ರನ್ ಗಳಿಸಿದರು. ಹ್ಯಾಲಿ ಐದನೇ ಎಸೆತ ಬೌಂಡರಿ ಮತ್ತು ಆರನೇ ಎಸೆತ ಸಿಕ್ಸರ್ ಎತ್ತಿದ್ದರು ಸಹ ಆಸ್ಟ್ರೇಲಿಯಾ 4 ರನ್ನಿಂದ ಸೋಲು ಕಂಡಿತು.
ರನ್ಗಳ ಸುರಿಮಳೆ
ಸೂಪರ್ ಓವರ್ಗೂ ಮೊದಲು ನಡೆದ ಪಂದ್ಯದಲ್ಲಿ ರನ್ಗಳ ಸುರಿಮಳೆಯಾಯಿತು. ಆಸ್ಟ್ರೇಲಿಯಾದ ಮೂನಿ 54 ಎಸೆತಗಳಲ್ಲಿ 82 ರನ್ ಗಳಿಸಿದರೆ, ಮ್ಯಾಗ್ರಥ್ 51 ಎಸೆತಗಳಲ್ಲಿ 70 ರನ್ ಗಳಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು.
188 ರನ್ಗಳ ಗುರಿ ಪಡೆದ ಭಾರತ ತಂಡದ ಸ್ಮೃತಿ ಮಂದಾನ 49 ಎಸೆತಗಳಲ್ಲಿ 79 ರನ್ ಗಳಿಸಿದರು. ಸೆಫಾಲಿ ವರ್ಮಾ ಸಹ 26 ಎಸೆತಗಳಲ್ಲಿ 34 ರನ್ ಗಳಿಸಿದರು. ಕಡೆಯದಾಗ 13 ಎಸೆತಗಳಲ್ಲಿ 26 ರನ್ ಗಳಿಸಿದ ರಿಚಾ ಘೋಷ್ ಪಂದ್ಯ ಟೈ ಆಗುವಂತೆ ನೋಡಿಕೊಂಡರು.
ಉಚಿತ ಪ್ರವೇಶ
ಮಹಿಳಾ ಕ್ರಿಕೆಟ್ ಅನ್ನು ಪ್ರಚಾರ ಮಾಡುವ ದೃಷ್ಟಿಯಿಂದ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಪಂದ್ಯಕ್ಕೆ ಉಚಿತ್ರ ಪ್ರವೇಶ ಕಲ್ಪಿಸಲಾಗಿತ್ತು. ಸುಮಾರು 45,000 ಪ್ರೇಕ್ಷಕರು ಆಟ ಕಣ್ತುಂಬಿಕೊಂಡರು.
ಇದನ್ನೂ ಓದಿ: ಜಿಟಿಜಿಟಿ ಮಳೆಯ ನಡುವೆ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ: ಒಳಮೀಸಲಾತಿಗಾಗಿ ಹರಿದು ಬಂತು ಭೀಮಸಾಗರ