Homeಕರ್ನಾಟಕಜಿಟಿಜಿಟಿ ಮಳೆಯ ನಡುವೆ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ: ಒಳಮೀಸಲಾತಿಗಾಗಿ ಹರಿದು ಬಂತು ಭೀಮಸಾಗರ

ಜಿಟಿಜಿಟಿ ಮಳೆಯ ನಡುವೆ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ: ಒಳಮೀಸಲಾತಿಗಾಗಿ ಹರಿದು ಬಂತು ಭೀಮಸಾಗರ

- Advertisement -
- Advertisement -

ಅದು ಮೂವತ್ತು ವರ್ಷಗಳ ಕೂಗು. ಸರ್ಕಾರಗಳು ಬಂದವು, ಸರ್ಕಾರಗಳು ಹೋದವು. ಪಕ್ಷಗಳು ಅಧಿಕಾರ ಪಡೆದವು, ಅಧಿಕಾರ ಕಳೆದುಕೊಂಡವು. ಕೊಟ್ಟ ಭರವಸೆಯನ್ನು ಯಾವ ಸರ್ಕಾರವೂ ಈಡೇರಿಸಲೇ ಇಲ್ಲ. ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿ ಮಾತ್ರ ವಿಧಾನಸೌಧದಲ್ಲಿ ಧೂಳು ಹಿಡಿಯುತ್ತಿದೆ. ಅದನ್ನು ಕನಿಷ್ಠ ಸೌಜನ್ಯಕ್ಕಾದರೂ ತೆರೆದು ನೋಡಲಿಲ್ಲ. ಈಗ ಮತ್ತೆ ದಲಿತರು ಬೀದಿಗಿಳಿದಿದ್ದಾರೆ.

ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮತ್ತೆ ಹೋರಾಟದ ಕಾವು ಪಡೆದಿದೆ. ಸಾರ್ವಜನಿಕವಾಗಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ- ಜಸ್ಟೀಸ್ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಉಪಪಂಗಡಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ. 33.4ರಷ್ಟಿರುವ ಎಡಗೈ(ಮಾದಿಗ) ಸಮುದಾಯಕ್ಕೆ ಶೇ. 6ರಷ್ಟು, ಶೇ. 32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ. 5ರಷ್ಟು, ಶೇ. 23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ. 3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕೆಂಬ ಕೂಗು ಮತ್ತೆ ಶುರುವಾಗಿದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಭಾನುವಾರ (ಡಿಸೆಂಬರ್‌ 11) ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿದೆ. ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಕ, ಹೋರಾಟಗಾರ ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕದಿಂದ ಆರಂಭವಾದ ಪಾದಯಾತ್ರೆ ರಾಜಧಾನಿಯನ್ನು ತಲುಪಿದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಲಿತರು ಇಂದು ಜಮಾಯಿಸಿದ್ದರು.

ಕಳೆದೆರಡು ದಿನಗಳಿಂದಲೂ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಹಾಗೂ ಕಪ್ಪು ಸುರಿದ ಮೋಡ ಆವರಿಸಿದ್ದರೂ ಹೋರಾಟಗಾರರು ಯಾವುದಕ್ಕೂ ಅಂಜದೆ ಫ್ರೀಡಂ ಪಾರ್ಕ್‌ಗೆ ಬಂದು ಸೇರಿದರು. ಜೈ ಭೀಮ್‌ ಘೋಷಣೆ ಮೊಳಗಿತು. ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನರಾಮ್‌, ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಗಳನ್ನು ಒಳಗೊಂಡ ನೀಲಿ ಭಾವುಟಗಳನ್ನು ಹಿಡಿದ ದಲಿತ ಶಕ್ತಿ ಸಾಗೋರೋಪಾದಿಯಲ್ಲಿ ಹರಿದುಬಂತು. ಸಂಚಾರಿ ವೇದಿಕೆಯನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಮುಖ್ಯರಸ್ತೆಯ ಉದ್ದಕ್ಕೂ ಭೀಮ ಶಕ್ತಿ ಮೊಳಗಿತು.

ರಾಜ್ಯದ ಮೂಲೆಮೂಲೆಗಳಿಂದ ಬಂದ ಒಳಮೀಸಲಾತಿ ಹೋರಾಟಗಾರರು, ಸುರಿವ ಮಳೆಯಲ್ಲೇ ನಿಂತು ಹೋರಾಟಗಾರರ ಮಾತುಗಳನ್ನು ಆಲಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾ ಸ್ಥಳದಲ್ಲಿ ಇಂಟರ್‌ನೆಟ್ ನಿರ್ಬಂಧ ಹೇರಲಾಗಿತ್ತು.

ಹೋರಾಟಗಾರರು ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಮೂವತ್ತು ವರ್ಷಗಳ ನೋವು, ಮಾತುಗಳ ಮೂಲಕ ಬೆಂಕಿಯುಂಡೆಯಾಗಿ ಹೊರಬಿದ್ದವು. ಮುಂದಿನ ಚುನಾವಣೆಯಲ್ಲಿ ಈ ಮೂರು ಪಕ್ಷಗಳಿಗೆ ದಲಿತರು ಪಾಠ ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದರು.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ದಲಿತ ಮುಖಂಡರಾದ ಅಂಬಣ್ಣ ಅರೋಲಿಕರ್‌ ಹಾಡಿನ ಮೂಲಕ ರಾಜಕೀಯ ಪಕ್ಷಗಳನ್ನು ಟೀಕಿಸಿದರು. ಮೂರು ಪಕ್ಷಗಳ ನಾಯಕರುಗಳ ವಿರುದ್ಧ ಹಾಡಿನ ಮೂಲಕವೇ ವಾಗ್ದಾಳಿ ನಡೆಸಿದರು. “ನಾವು ಯಾವ ಪಕ್ಷದ ಪರವೂ ಇಲ್ಲ. ವಿರೋಧವೂ ಇಲ್ಲ. ನೋಟಿಗೆ ವೋಟು ಹಾಕುವುದಿಲ್ಲ. ಸದಾಶಿವ ಆಯೋಗದ ವರದಿಗೆ ವೋಟು ಹಾಕುತ್ತೇವೆ” ಎಂದು ಗುಡುಗಿದರು.

ದಲಿತ ಹೋರಾಟಗಾರ ವೆಂಕಟಗಿರಿಯಯ್ಯ ಮಾತನಾಡಿ, “ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದಲಿತರು ಹೋರಾಟ ಮಾಡಿದರು. ಒಳಮೀಸಲಾತಿಗಾಗಿ ಆಯೋಗವನ್ನು ರಚನೆ ಮಾಡುವ ತೀರ್ಮಾನ ಮಾಡಲಾಯಿತು. ಸದಾಶಿವ ಆಯೋಗವು ನೀಡಿರುವ ವರದಿಯು ವೈಜ್ಞಾನಿಕವಾಗಿದೆ. ನಮ್ಮ ಪಾಲನ್ನು ಹಂಚಿಕೊಳ್ಳುವುದಕ್ಕೆ ಯಾರಿಂದಲೂ ಭಿಕ್ಷೆ ಬೇಡಬೇಕಿಲ್ಲ. ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಇವರಿಗೆ ಈ ಜನರ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇದ್ದದ್ದೇ ನಿಜವಾದರೆ, ಒಳಮೀಸಲಾತಿ ಜಾರಿಗೆ ಕ್ರಮವಹಿಸಲಿ. ಆದರೆ ಈ ಮನುವಾದಿ ಪಕ್ಷಗಳು, ದಲಿತರನ್ನು ಒಡೆದು ಆಳಲು ಬಯಸುತ್ತಿವೆ” ಎಂದು ಆಕ್ರೋಶ ಹೊರಹಾಕಿದರು.

ದಲಿತ ಮುಖಂಡರಾದ ಮೋಹನ್ ರಾಜ್ ಮಾತನಾಡಿ, “ಒಳಮೀಸಲಾತಿ ಜಾರಿ ಜೊತೆಗೆ, ಪಿಟಿಸಿಎಲ್‌ ಕಾಯ್ದೆಯನ್ನು ಬಲಪಡಿಸಬೇಕು. ಲಿಂಗಾಯತ ಬೇಡ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆಯುತ್ತಿರುವುದನ್ನು ಸರ್ಕಾರ ಕೂಡಲೇ ತಡೆಯಬೇಕು” ಎಂದು ಆಗ್ರಹಿಸಿದರು.

ಹೋರಾಟಗಾರರ ಬಂಧನ; ಆಕ್ರೋಶ

ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಮಿಸಬೇಕೆಂದು ಹೋರಾಟಗಾರರು ಪಟ್ಟು ಹಿಡಿದರು. ಇಳಿಸಂಜೆಯವರೆಗೆ ತಾಳ್ಮೆ ವಹಿಸಿದ್ದ ದಲಿತರು ಅಂತಿಮವಾಗಿ ಅರೆಬೆತ್ತಲೆ ಮೆರವಣಿಗೆ ಮೂಲಕ ಸಿಎಂ ನಿವಾಸದತ್ತ ಹೊರಟಿದ್ದರು. ಆಗ ಪೊಲೀಸರು ಒಳಮೀಸಲಾತಿ ಹೋರಾಟಗಾರರನ್ನು ಬಂಧಿಸಿದ್ದಾರೆ. ಪೊಲೀಸ್ ನೂಕಾಟದಲ್ಲಿ ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿಯವರ ತಲೆಗೆ ಪೆಟ್ಟಾಗಿದೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿರಿ: ದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣರನ್ನು ಸಂಧಾನಕ್ಕೆ ಕಳಿಸ್ತೀರಾ? ಒಳಮೀಸಲಾತಿ ಹೋರಾಟಗಾರರ ಆಕ್ರೋಶ

ಕರಿಯಪ್ಪ ಗುಡಿಮನಿಯವರು ಪ್ರತಿಕ್ರಿಯಿಸಿ, “ಕೊಟ್ಟ ಮಾತು ತಪ್ಪಿದೆ ಬಿಜೆಪಿ ಸರ್ಕಾರ. ಸದಾಶಿವ ವರದಿ ಜಾರಿಗೆ ತರುತ್ತೇವೆ ಎಂದು ನಮ್ಮವರ ನಂಬಿಸಿ ಈಗ ಬೆನ್ನಿಗೆ ಚೂರಿ ಹಾಕಿದೆ. 10 ವರ್ಷದ ಹಿಂದೆ ಇದೇ ದಿನ ಬೆಳಗಾವಿಯಲ್ಲಿ ನಮ್ಮ ಮೇಲೆ ಲಾಠಿ ಛಾರ್ಜ್ ಮಾಡಲಾಗಿತ್ತು. ಇವತ್ತು ಮತ್ತೆ ನಮ್ಮ ಮೇಲೆ ದಾಳಿ ಮಾಡಿ ನಮ್ಮ ದನಿಯನ್ನು ತುಳಿಯಲು ನೋಡುತ್ತಿದೆ. ನನ್ನ ತಲೆಗೆ ಪಟ್ಟಾಗಿದೆ. ಆಸ್ಪತ್ರೆಯಲ್ಲಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ. ಹೋರಾಟ ನಿಲ್ಲಬಾರದು. ಸಮುದಾಯ ಸೋಲಬಾರದು. ನಾಳೆ ಇನ್ನೂ ಬಿರುಸಿನ ಹೋರಾಟ ನಡೆಯಲಿದೆ. ಎಲ್ಲಾ ಬಂಧುಗಳು ಗೆಲ್ಲುವ ಹೋರಾಟಕ್ಕೆ ಸಿದ್ಧರಾಗೋಣ” ಎಂದು ಕರೆ ನೀಡಿದ್ದಾರೆ.

ಅಂಬಣ್ಣ ಅರೋಲಿಕರ್‌ ಮಾತನಾಡಿ, “ಸಹಜ ಆಶಯವನ್ನು ಸರ್ಕಾರ ಗಾಳಿಗೆ ತೂರಿದೆ. ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ಭೀಮ ಸೈನಿಕರು ರಸ್ತೆಯಲ್ಲಿದ್ದರು. ಮುಖ್ಯಮಂತ್ರಿಯವರು ಕನಿಷ್ಠ ಸೌಜನ್ಯದಿಂದ ನಮ್ಮೊಂದಿಗೆ ಮಾತನಾಡಬೇಕಿತ್ತು. ನಾವೇನು ಭಯೋತ್ಪಾದಕರಾ? ಭಾರತದ ನಿವಾಸಿಗಳಲ್ಲವಾ? ಪ್ರಜಾಪ್ರಭುತ್ವದ ಹಾದಿಯಲ್ಲಿ ನಾವು ನಡೆಯುತ್ತಿಲ್ಲವಾ? ನೀವು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತೀರಿ. ಮುಂದಿನ ಚುನಾವಣೆಯಲ್ಲಿ ಸೋಲುತ್ತೀರಿ, ಮೂಲೆಗುಂಪಾಗುತ್ತೀರಿ” ಎಂದು ಎಚ್ಚರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...