ಭಾರತಕ್ಕೆ ಸ್ವಾತಂತ್ರ್ಯ ಬಂದ ಕುರಿತು ವಿವಾದಿತ ಹೇಳಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅದನ್ನು ಯಾರಾದರೂ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
“ಸಂದರ್ಶನದಲ್ಲಿ ಎಲ್ಲವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಸ್ವಾತಂತ್ರ್ಯಕ್ಕಾಗಿ 1857ರ ಮೊದಲ ಹೋರಾಟದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ… ಜೊತೆಗೆ ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಜಿ ಅವರಂತಹ ಶ್ರೇಷ್ಠರ ತ್ಯಾಗವನ್ನು ಸ್ಮರಿಸಲಾಗಿದೆ. 1857ರ ಹೋರಾಟ ನನಗೆ ಗೊತ್ತು. ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ. ಆ ಬಗ್ಗೆ ಯಾರಾದರೂ ನನ್ನ ಅರಿವಿಗೆ ತರಲು ಸಾಧ್ಯವಾದರೆ ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ… ದಯವಿಟ್ಟು ನನಗೆ ಸಹಾಯ ಮಾಡಿ” ಎಂದು ಕಂಗನಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದುವರೆದು ಬರೆದಿರುವ ಅವರು, “ನಾನು ಹುತಾತ್ಮ ರಾಣಿ ಲಕ್ಷ್ಮಿ ಬಾಯಿಯವರ ಕುರಿತ ಚಲನಚಿತ್ರದಲ್ಲಿ ಕೆಲಸ ಮಾಡಿದ್ದೇನೆ… 1857ರ ಸ್ವಾತಂತ್ರ್ಯದ ಮೊದಲ ಹೋರಾಟದ ಬಗ್ಗೆ ವ್ಯಾಪಕವಾಗಿ ಸಂಶೋಧನೆ ಮಾಡಿದ್ದೇನೆ… ರಾಷ್ಟ್ರೀಯತೆಯು ಬಲಪಂಥೀಯವಾದದೊಂದಿಗೆ ಏರಿತು… ಆದರೆ, ಅದು ಏಕೆ ಹಠಾತ್ ಕಾಣೆಯಾಯಿತು? ಭಗತ್ ಸಿಂಗ್ ಸಾಯಲು ಗಾಂಧೀಜಿಯವರು ಏಕೆ ಬಿಟ್ಟರು… ಏಕೆ ನೇತಾಜಿ ಬೋಸ್ ಕೊಲ್ಲಲ್ಪಟ್ಟರು ಮತ್ತು ಅವರಿಗೇಕೆ ಗಾಂಧಿಯವರ ಬೆಂಬಲ ಸಿಗಲಿಲ್ಲ? ಬಿಳಿಯ ವ್ಯಕ್ತಿಯು ದೇಶ ವಿಭಜನೆ ಮಾಡಿದ್ದು ಏಕೆ” ಎಂದು ಪ್ರಶ್ನಿಸಿದ್ದಾರೆ.
“ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ನಾನು 2014ರ ಬಗ್ಗೆ ನಿರ್ದಿಷ್ಟವಾಗಿ ಹೇಳಿದ್ದೇನೆಂದರೆ, “ಭೌತಿಕ ಸ್ವಾತಂತ್ರ್ಯ ಸಿಕ್ಕಿದ್ದರೂ 2014 ರಲ್ಲಿ ಭಾರತದ ಪ್ರಜ್ಞೆ ಮತ್ತು ಆತ್ಮಸಾಕ್ಷಿಯನ್ನು ಮುಕ್ತಗೊಳಿಸಲಾಯಿತು, ಸತ್ತ ನಾಗರಿಕತೆಯು ಜೀವಂತವಾಯಿತು ಮತ್ತು ಈಗ ಅದು ಘರ್ಜಿಸುತ್ತಿದೆ ಮತ್ತು ಎತ್ತರಕ್ಕೆ ಏರುತ್ತಿದೆ… ಮೊದಲ ಬಾರಿಗೆ, ಜನರು ಇಂಗ್ಲಿಷ್ ಬಾರದಿದ್ದಕ್ಕಾಗಿ ಮತ್ತು ಸಣ್ಣ ಪಟ್ಟಣಗಳಿಂದ ಬರುವ ಅಥವಾ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಳಸುವುದಕ್ಕಾಗಿ ನಮ್ಮನ್ನು ನಾಚಿಕೆಪಡಿಸಲು ಸಾಧ್ಯವಿಲ್ಲ… ಈ ನಿದರ್ಶನದಲ್ಲಿ ಸ್ಪಷ್ಟವಾಗಿದೆ… ಜೈ ಹಿಂದ್” ಎಂದು ಅವರು ಪೋಸ್ಟ್ ಮಾಡಿದ್ದಾರೆ.
“ಐಎನ್ಎಯಿಂದ ಒಂದು ಸಣ್ಣ ಹೋರಾಟ” ಕೂಡ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು ಮತ್ತು ಸುಭಾಸ್ ಚಂದ್ರ ಬೋಸ್ ಪ್ರಧಾನಿಯಾಗಬಹುದಿತ್ತು ಎಂದು ಹೇಳಿಕೊಂಡಿರುವ ಅವರು, ಬಲಪಂಥೀಯರು ಹೋರಾಟಿ ಸ್ವಾತಂತ್ರ್ಯ ಪಡೆಯಲು ಸಿದ್ದರಾಗಿದ್ದಾಗಿ ಏಕೆ ಕಾಂಗ್ರೆಸ್ ಭಿಕ್ಷೆಯ ರೀತಿಯಲ್ಲಿ ಸ್ವಾತಂತ್ರ್ಯ ಸ್ವೀಕರಿಸಿತು ಎಂದು ಯಾರಾದರೂ ನನಗೆ ತಿಳಿಸಿ ಎಂದು ಬರೆದುಕೊಂಡಿದ್ದಾರೆ.
ಬುಧವಾರ (ನ.10) ಖಾಸಗಿ ಟೆಲಿವಿಷನ್ ಚಾನೆಲ್ ಟೈಮ್ಸ್ ನೌ ಆಯೋಜಿಸಿದ್ದ ಕಾನ್ಕ್ಲೇವ್ನಲ್ಲಿ ಭಾಗವಹಿಸಿದ್ದ ನಟಿ ಕಂಗನಾ ರಣಾವತ್ ಹಿಂದಿಯಲ್ಲಿ ಮಾತನಾಡುತ್ತಾ, “1947 ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದಿದ್ದರು. ಆ ಮೂಲಕ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಸ್ವತಂತ್ರಗೊಂಡಿದೆ ಎಂಬರ್ಥದಲ್ಲಿ ಕಂಗನಾ ಮಾತನಾಡಿದ್ದರು. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಲಕ್ಷಾಂತರ ಜನ ಕಂಗನಾ ಹೇಳಿಕೆಯನ್ನು ಖಂಡಿಸಿದ್ದರು.
ಬಾಲಿವುಡ್ ನಟಿ ಕಂಗನಾ ರಣಾವತ್ ‘ಭಾರತದ ಸ್ವಾತಂತ್ಯ್ರ’ದ ಕುರಿತು ನೀಡಿರುವ ಹೇಳಿಕೆಯ ವಿರುದ್ದ ಗುರುವಾರ ಮುಂಬೈನಲ್ಲಿ ದೂರು ದಾಖಲಾಗಿದೆ. ಆಮ್ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಅವರು ಈ ದೂರು ದಾಖಲಿಸಿದ್ದು, ಅವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಂಗನಾ ಹೇಳಿಕೆ ಸಂಪೂರ್ಣ ತಪ್ಪು: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ