ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸಾಮಾಜಿಕ ಕಾರ್ಯಕರ್ತರ ತಂಡವೊಂದು ‘ಪ್ರೀತಿಯಿಂದ ದ್ವೇಷವನ್ನು ಪಂಚರ್ ಮಾಡಿ’ ಎಂದು ಬ್ಯಾನರ್ ಪ್ರದರ್ಶನ ಮಾಡಿದ ಬೆಳವಣಿಗೆ ಜಯನಗರದಲ್ಲಿ ಗುರುವಾರ ನಡೆದಿದೆ.
ಬ್ಯಾನರ್ ಪ್ರದರ್ಶನದ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ತೇಜಸ್ವಿ ಸೂರ್ಯ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
We went to tell Tejasvi Surya to #PunctureHateWith💙 but his devotees snatched the banner away. Why don't they want to defeat hate? 🤷🏾♂️ pic.twitter.com/dqvf0PdQny
— Vinay Kumar (@bahudari) April 4, 2024
ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಯನಗರದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ವಿಪಕ್ಷ ನಾಯಕ ಆರ್. ಅಶೋಕ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಈ ವೇಳೆ ಸಾಮಾಜಿಕ ಕಾಯಕರ್ತ ವಿನಯ್ ಕುಮಾರ್ ಅವರ ನೇತೃತ್ವದ ಐದರಿಂದ ಆರು ಜನರಿದ್ದ ತಂಡವೊಂದು ಸ್ಥಳಕ್ಕೆ ಆಗಮಿಸಿ, ಬ್ಯಾನರ್ ಪ್ರದರ್ಶನ ಮಾಡಿದೆ. ಬ್ಯಾನರ್ನಲ್ಲಿ “ಪ್ರೀತಿಯಿಂದ ದ್ವೇಷವನ್ನು ಪಂಚರ್ ಮಾಡಿ” (Puncture Hate With Love)ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿತ್ತು. ಬ್ಯಾನರ್ ಪ್ರದರ್ಶನ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಇರುವ ಕೋಮುವಾದ ವಿರೋಧಿಸಿ ಬ್ಯಾನರ್ ಪ್ರದರ್ಶನ ಮಾಡಿದ್ದೇವೆ. ತೇಜಸ್ವಿ ಸೂರ್ಯ ಬಂಧುತ್ವ ಬೆಳೆಸುವ ಕೆಲಸ ಮಾಡಬೇಕು. ಇತ್ತೀಚೆಗೆ ನಗರ್ತಪೇಟೆಯ ಘಟನೆಯಲ್ಲೂ ಕೂಡ ಅವರು ದ್ವೇಷ ಹರಡುವ ಕೆಲಸ ಮಾಡುವ ಮೂಲಕ ಬೆಂಗಳೂರಿಗೆ ಕಳಂಕ ತಂದಿದ್ದರು. ಅಲ್ಲದೇ, ವಿವಾದಾತ್ಮಕ ಹೇಳಿಕೆಗಳನ್ನು ಕೂಡ ನೀಡುತ್ತಿದ್ದಾರೆ. ನೀವು ಜನಪ್ರತಿನಿಧಿಯಾಗಿ ತಪ್ಪು ಮಾಡುತ್ತಾ ಇದ್ದೀರಿ ಎಂಬುದನ್ನು ನೆನೆಪಿಸಲು ನಮ್ಮ ಕರ್ತವ್ಯ ಮಾಡಿದ್ದೇವೆ” ಎಂದು ಸಾಮಾಜಿಕ ಕಾಯಕರ್ತ ವಿನಯ್ ಕುಮಾರ್ ಹೇಳಿರುವುದಾಗಿ ಈ ದಿನ.ಕಾಂ ವರದಿ ಮಾಡಿದೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಲೇಜು ವಿದ್ಯಾರ್ಥಿಗಳಿಗೆ ಒತ್ತಾಯ: ಆರೋಪ