BMTC ಬ್ರಾಂಡ್ ಅಂಬಾಸಿಡರ್ ಆಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದ್ದಾರೆ.
ನಾವು ಪುನೀತ್ ರಾಜ್ಕುಮಾರ್ ಅವರ ಮನೆಗೆ ಹೋಗಿ ಬಿಎಂಟಿಸಿ ಯ ಬ್ರಾಂಡ್ ಅಂಬಾಸಿಡರ್ ಆಗಿ ನೀವಿರಬೇಕೆಂದು ಮನವಿ ಮಾಡಿದೆವು. ಆಗ ಅವರು ಒಂದೇ ಮಾತಿಗೆ ಒಪ್ಪಿಕೊಂಡ ಅವರು, ಬೆಂಗಳೂರಿನ ಟ್ರಾಫಿಕ್ ಮತ್ತು ಮಾಲಿನ್ಯ ತಡೆಯುವಲ್ಲಿ ಇದು ಮಹತ್ವದ್ದಾಗಿದ್ದು ನಿಮ್ಮ ಜೊತೆ ನಾನು ಇದ್ದೇನೆ ಎಂದಿದ್ದಾರೆ.
ವಿಶೇಷವೆಂದರೆ ಇದಕ್ಕಾಗಿ ಪುನೀತ್ ರಾಜ್ಕುಮಾರ್ರವರು ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿದ್ದಾರೆ. ಅಷ್ಟು ಮಾತ್ರವಲ್ಲದೇ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಹೆಚ್ಚಾಗಿ ಬಳಸುವುದೇ ಮಾಲಿನ್ಯ ಮತ್ತು ಟ್ರಾಫಿಕ್ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದ್ದು ತಾನೂ ಕೂಡ ಸಾರ್ವಜನಿಕ ಸಾರಿಗೆ ಬಳಸುತ್ತೇನೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಸದ್ಯಕ್ಕೆ ಬಿಎಂಟಿಸಿಯಲ್ಲಿ ಹೊಸದಾಗಿ ಬಸ್ಲೇನ್ಗಳನ್ನು ಪ್ರಾರಂಭಿಸುತ್ತಿದ್ದು ಇದರಿಂದ ಬಸ್ ಬಳಕೆದಾರರಿಗುತ್ತಿದ್ದ ಟ್ರಾಫಿಕ್ ಬಗೆಹರಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಲೇನ್ ಉದ್ಘಾಟನೆ ಮಾಡಲಾಗಿದ್ದು ಪೊಲೀಸ್ ಕಮಿಷನರ್ ಭಾಸ್ಕರ್ರಾವ್ ಮತ್ತು ಚಿತ್ರನಟ ಚೇತನ್ ಅತಿಥಿಗಳಾಗಿ ಭಾಗವಹಿಸಿದ್ದರು.