ಇತ್ತೀಚೆಗೆ ನಡೆದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ (28) ಹತ್ಯೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಮತ್ತೋರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಭಾನುವಾರ ಸಂಜೆ ಹರಿಯಾಣದ ಫತೇಹಾಬಾದ್ನಿಂದ ದೇವಿಂದರ್ ಅಲಿಯಾಸ್ ಕಾಲಾ ಎಂಬುವರನ್ನು ಬಂಧಿಸಲಾಗಿದೆ. ಹತ್ಯೆಯಲ್ಲಿ ಭಾಗಿಯಾಗಿರುವ ಇಬ್ಬರು ಶಂಕಿತರು ಆತನೊಂದಿಗೆ ತಂಗಿದ್ದರು ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಜೂನ್ 3 ರಂದು, ಪಂಜಾಬ್ ಪೊಲೀಸರು ಫತೇಹಾಬಾದ್ನಿಂದ ಇತರ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದರು. ಗಾಯಕ ಮೂಸೆವಾಲಾ ಹತ್ಯೆಯಲ್ಲಿ ಅವರ ಪಾತ್ರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಸಿಕ್ಕ ಮಾಹಿತಿ ಆಧಾರದಲ್ಲಿ ದೇವಿಂದರ್ ಅವರನ್ನು ಬಂಧಿಸಲಾಗಿದೆ.
ಮೇ 16 ಮತ್ತು 17 ರಂದು ದೇವಿಂದರ್ ಕಾಲಾ ಇಬ್ಬರು ಶಂಕಿತ ಆರೋಪಿಗಳಾದ ಕೇಶವ್ ಮತ್ತು ಚರಂಜೀತ್ ಅವರಿಗೆ ಆಶ್ರಯ ನೀಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿಂದೆ ಪವನ್ ಮತ್ತು ನಸೀಬ್ ಎಂಬ ಆರೋಪಿಗಳನ್ನು ಪೊಲೀಸರು ಭಿರ್ದಾನದಿಂದ ಬಂಧಿಸಿದ್ದರು.
ಇದನ್ನೂ ಓದಿ: ಪಂಜಾಬ್: ಸರ್ಕಾರ ಭದ್ರತೆ ಹಿಂತೆಗೆದುಕೊಂಡ ಒಂದೇ ದಿನದಲ್ಲಿ ಕಾಂಗ್ರೆಸ್ ನಾಯಕನ ಗುಂಡಿಕ್ಕಿ ಹತ್ಯೆ
ಕಾಂಗ್ರೆಸ್ ನಾಯಕ ಮತ್ತು ಪಂಜಾಬಿ ಗಾಯಕರಾಗಿದ್ದ ಸಿಧು ಮೂಸೆವಾಲಾ ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದ ಘಟನೆ ಮೇ 29 ರ ಭಾನುವಾರ ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ನಡೆದಿತ್ತು. ಕೆನಡಾ ಮೂಲದ ಗೋಲ್ಡಿ ಬ್ರಾರ್ ಫೇಸ್ಬುಕ್ ಪೋಸ್ಟ್ನಲ್ಲಿ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದರು.
ಪಂಜಾಬ್ ಸರ್ಕಾರ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಘಟನೆ ನಡೆದಿತ್ತು. ಅವರ ಜೊತೆಗೆ 424 ಜನರ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂತೆಗೆದುಕೊಂಡಿತ್ತು. ರಾಜ್ಯ ಪೊಲೀಸರು ಈ ಘಟನೆಯನ್ನು ಗ್ಯಾಂಗ್ ನಡುವಿನ ಪೈಪೋಟಿಯ ಪ್ರಕರಣ ಎಂದು ಕರೆದಿದ್ದಾರೆ. ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ಹೇಳಿದ್ದಾರೆ.
ಮೃತ ಸಿಧು ಮೂಸೆವಾಲಾ ಅವರ ಕುಟುಂಬವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ (ಜೂನ್ 7) ಭೇಟಿಯಾಗಲಿದ್ದಾರೆ. ಮೂಸೆವಾಲಾ ಪಂಜಾಬ್ನ ಮಾನ್ಸಾದಿಂದ ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ ಸೋತಿದ್ದರು.
ಇದನ್ನೂ ಓದಿ: ಪೊಲೀಸ್ ವ್ಯವಸ್ಥೆಯ ಹುಳುಕು ಬಿಚ್ಚಿಡುತ್ತಿವೆ ತಮಿಳು, ಮಲಯಾಳಂ ಸಿನಿಮಾಗಳು