Homeಮುಖಪುಟಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಪಂಚಾಯತ್ ರಾಜ್ ಅಧಿನಿಯಮ 1993 ರ 268/2 ರ ಅನ್ವಯ ಯಾವುದೇ ಪಂಚಾಯ್ತಿ ಸತತವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದಲ್ಲಿ ಅಂತಹ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ ಮರುಚುನಾವಣೆ ನಡೆಸಬೇಕು ಎಂಬ ನಿಯಮವಿದೆ ಎನ್ನುತ್ತಾರೆ ರಾಯಚೂರಿನ ಹೋರಾಟಗಾರ ರಝಾಕ್ ಉಸ್ತಾದ್.

- Advertisement -
- Advertisement -

ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ರಾಯಚೂರು ಸಹ ಒಂದು. ಡಿ.ಎಂ ನಂಜುಂಡಪ್ಪ ವರದಿಯ ಪ್ರಕಾರ ಅತಿಹೆಚ್ಚು ಹಿಂದುಳಿದ ತಾಲ್ಲೂಕು ರಾಯಚೂರಿನ ದೇವದುರ್ಗ. ಇಂತಹ ಸಮಯದಲ್ಲಿ ಜನರ ಸತತ ಹೋರಾಟದ ಫಲವಾಗಿ ದಕ್ಕಿದ 371ಜೆ ವಿಶೇಷ ಸ್ಥಾನಮಾನ, ಹಲವು ನೀರಾವರಿ ಯೋಜನೆಗಳು ಸೇರಿದಂತೆ ಇತ್ಯಾದಿ ಕಾರ್‍ಯಕ್ರಮಗಳು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿತ್ತು. ಆದರೆ ಅದು ಆಗಲೇ ಇಲ್ಲ. ಸರ್ಕಾರದ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ. ಆದರೆ ಅಷ್ಟೇ ಮತ್ತೊಂದು ಪ್ರಮುಖ ಕಾರಣವೆಂದರೆ ಇಲ್ಲಿನ ಸ್ಥಳೀಯ ಆಡಳಿತದ ವೈಫಲ್ಯ. ಅಂದರೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳು ತಮಗಿರುವ ಅಧಿಕಾರವನ್ನು ಬಳಸಿ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಹೋದುದಾಗಿದೆ.

ಪಂಚಾಯತ್ ರಾಜ್ ವ್ಯವಸ್ಥೆಗೆ ತನ್ನದೇ ಆದ ಮಹತ್ವವಿದೆ. ಗಾಂಧೀಜಿಯವರ ಗ್ರಾಮಸ್ವರಾಜ್ಯವನ್ನು ಸಾಕಾರಗೊಳಿಸುವ ಉತ್ತಮ ಆಯುಧವಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಅನೇಕರು ಶ್ರಮಿಸಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಪ್ರಧಾನ ಸಂಸ್ಥೆಗಳಾಗಿ ಇವುಗಳು ಉನ್ನತ ಅಧಿಕಾರಗಳನ್ನು ಹೊಂದಿವೆ. ಪಂಚಾಯ್ತಿಗಳು ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೇಲುಸ್ತುವಾರಿ ಸಮಿತಿಗಳಾಗಿವೆ. ಆದರೆ ಅದರ ಮಹತ್ವ ಅಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳಿಗೆ ಅರಿವಾಗದಿರುವುದು ದೊಡ್ಡ ದುರಂತ.

ಇಷ್ಟೆಲ್ಲಾ ಏಕೆ ಹೇಳಬೇಕಾಗಿದೆಯೆಂದರೆ ರಾಯಚೂರು ಜಿಲ್ಲಾ ಪಂಚಾಯ್ತಿಯು ವಿಸರ್ಜನೆಯಾಗುವ ಹಂತಕ್ಕೆ ಬಂದು ನಿಂತಿದೆ. ಸರ್ಕಾರ ಕಾನೂನುಪ್ರಕಾರ ನಡೆದುಕೊಂಡಿದ್ದಲ್ಲಿ ಅದು ಈಗಾಗಲೇ ವಿಸರ್ಜನೆಯಾಗಬೇಕಾದಷ್ಟು ಕರ್ತವ್ಯ ಲೋಪ ಮತ್ತು ಅಸಡ್ಡೆ ತೋರಿದೆ. ಅದು ಎಸಗಿರುವ ಗುರುತರ ಪ್ರಮಾದವೆಂದರೆ ತನ್ನ ಪ್ರಾಥಮಿಕ ಕರ್ತವ್ಯವಾದ ಸಭೆ ಸೇರುವುದನ್ನೇ ಸತತವಾಗಿ ಉಲ್ಲಂಘಿಸುತ್ತಾ ಬಂದಿರುವುದಾಗಿದೆ. ಪಂಚಾಯತ್ ಕಾಯ್ದೆ ಪ್ರಕಾರ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಾಯ್ತಿಯ ಸಾಮಾನ್ಯ ಸಭೆ ಸೇರುವುದು, ಪ್ರತಿ ತಿಂಗಳು ಕೆಡಿಪಿ (ಕರ್ನಾಟಕ ಡೆವಲಪ್‌ಮೆಂಟ್ಸ್ ಪ್ರೋಗ್ರಾಮ್ಸ್) ಸಭೆ ನಡೆಸುವುದು, ಈ ಸಭೆಗಳಿಗೆ ಮುಂಚಿತವಾಗಿ ಸ್ಥಾಯಿ ಸಮಿತಿಗಳು ಸಭೆ ಸೇರುವುದು ಕಡ್ಡಾಯ. ಆದರೆ ಪಂಚಾಯ್ತಿಯೊಂದು ಸಭೆಯೇ ಸೇರದಿದ್ದರೆ ಅಲ್ಲಿನ ಪ್ರಗತಿ ಹೇಗೆ ಸಾಧ್ಯ? ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಅಧ್ಯಕ್ಷರು ಸಭೆ ಕರೆಯದಿದ್ದರೆ ಉಪಾಧ್ಯಕ್ಷರು ಕರೆಯಬಹುದು. ಅವರೂ ಕರೆಯದಿದ್ದರೆ ಮೂರನೇ ಒಂದು ಭಾಗದ ಸದಸ್ಯರು ಸೇರಿ ಸಿಇಓಗೆ ಪತ್ರ ನೀಡಿ ಸಭೆ ಕರೆಯಬೇಕು. ಅದೂ ಆಗದಿದ್ದರೆ ಸಿಇಓ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವುದಾಗಿದೆ. ದುರಾದೃಷ್ಟವೆಂದರೆ ಇವರಲ್ಲಿ ಯಾರೂ ಸಹ ಸಭೆ ಕರೆಯದೇ ಕಾಲ ದೂಡಿದ್ದಾರೆ.

ರಾಯಚೂರು ಜಿ.ಪಂ ಸಾಮಾನ್ಯ ಸಭೆಯ ಚಿತ್ರ

ಕೊರೊನಾ ಕಾಲದಲ್ಲಿ ಸಭೆ ಸೇರುವುದು ಕಷ್ಟವಲ್ಲವೇ ಎಂದು ನಿಮಗೆ ಅನಿಸಬಹುದು. ಆದರೆ ನಾವೀಗ ಮಾತನಾಡುತ್ತಿರುವುದು ಕೊರೊನಾ ಕಾಲದಲ್ಲಿ ಅಲ್ಲ. ರಾಯಚೂರು ಹಾಲಿ ಜಿಲ್ಲಾ ಪಂಚಾಯ್ತಿಯು 52 ತಿಂಗಳುಗಳನ್ನು ಪೂರೈಸಿದೆ. ಅಂದರೆ ಅದು ಇಷ್ಟರಲ್ಲಿ 26 ಸಾಮಾನ್ಯ ಸಭೆಗಳನ್ನು ನಡೆಸಬೇಕಿತ್ತು. ಆದರೆ ಅದು ಕೇವಲ 9 ಸಭೆಗಳನ್ನು ಮಾತ್ರ ನಡೆಸಿದೆ. 20 ತಿಂಗಳ ಹಿಂದೆಯೇ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹಿರಿಯ ಮುಖಂಡರಾದ ಡಾ. ರಝಾಕ್ ಉಸ್ತಾದ್‌ರವರು ಈ ಕುರಿತು ದೂರು ನೀಡಿದ್ದರು. ಮೇ ತಿಂಗಳಿನಲ್ಲಿ ಸಿಇಓ ಈ ಕುರಿತು ಸರ್ಕಾರಕ್ಕೆ ಮೂರು ಪುಟಗಳ ವರದಿ ನೀಡಿ ’ಸಭೆಗಳು ನಡೆಯುತ್ತಿಲ್ಲ ಎನ್ನುವುದು ನಿಜ, ಬಹಳಷ್ಟು ಸದಸ್ಯರು ಅಸಮರ್ಥರಿದ್ದಾರೆ, ಅವರಿಗೆ ತರಬೇತಿಯ ಅಗತ್ಯವಿದೆ’ ಎಂದು ಬರೆದಿದ್ದರು. ಅದರನ್ವಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಈ ವಿಚಾರವಾಗಿ ನೋಟಿಸ್ ಹೋಗಿದೆ. ನಿಮ್ಮನ್ನು ಮತ್ತು ಪಂಚಾಯ್ತಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ. ಆದರೂ ಅಲ್ಲಿಯ ಜಿಲ್ಲಾ ಪಂಚಾಯ್ತಿಯು ಕೇವಲ ಒಮ್ಮೆ ಮಾತ್ರ ಸಭೆ ಸೇರಿದೆಯೆಂದರೆ ಅದರ ದರ್ಪ ಎಷ್ಟಿರಬೇಡ?

ಕಾನೂನು ಏನು ಹೇಳುತ್ತದೆ?
ಪಂಚಾಯತ್ ರಾಜ್ ಅಧಿನಿಯಮ 1993 ರ 268/2 ರ ಅನ್ವಯ ಯಾವುದೇ ಪಂಚಾಯ್ತಿ ಸತತವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದಲ್ಲಿ ಅಂತಹ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ ಮರುಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಇದರನ್ವಯ 2019ರ ಜನವರಿಯಲ್ಲಿ ಡಾ. ರಝಾಕ್ ಉಸ್ತಾದ್‌ರವರು ಸರ್ಕಾರಕ್ಕೆ ದೂರು ನೀಡಿ ಪಂಚಾಯ್ತಿ ವಿಸರ್ಜಿಸಲು ಆಗ್ರಹಿಸಿದ್ದರು. ಆಗಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರು ಅದನ್ನು ಪರಿಶೀಲಿಸಿ ವಿಸರ್ಜನೆಗೆ ಶಿಫಾರಸ್ಸು ಸಹ ಮಾಡಿದ್ದರು. ಆದರೆ ಅಷ್ಟರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಲ್ಲಿಗೆ ಆ ಶಿಫಾರಸ್ಸು ಮೂಲೆ ಸೇರಿತು. ಏಕೆಂದರೆ ರಾಯಚೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಬಿಜೆಪಿಯವರಾಗಿರುವುದು.

ತಮ್ಮ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಯುತ್ತಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬುದು ಎಲ್ಲರಿಗಿಂತ ಅಲ್ಲಿನ ಸಿಇಓಗೆ ಗೊತ್ತಿರುತ್ತದೆ. ಅದನ್ನು ಸರ್ಕಾರಕ್ಕೆ ವರದಿ ಮಾಡಿ ಕೆಲಸ ಮಾಡಿಸುವಂತೆ ಮಾಡುವುದು ಅವರ ಕರ್ತವ್ಯ ಸಹ. ಆದರೆ ಸಿಇಓ ಮಾತ್ರ ಈ ವಿಚಾರವಾಗಿ ಕೈಚೆಲ್ಲಿ ಕೂತಿದ್ದಾರೆ.

ಆದರೆ ರಝಾಕ್ ಉಸ್ತಾದ್‌ರವರು ತಮ್ಮ ಪಟ್ಟುಬಿಡದೆ ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ, 2020ರ ಜೂನ್‌ನಲ್ಲಿ ಸರ್ಕಾರ ಪ್ರಾದೇಶಿಕ ಆಯಕ್ತರ ಕಚೇರಿಗೆ (ಕಲಬುರಗಿ) ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಆದೇಶಿಸಿತ್ತು. ಅಂತೆಯೆ ಅದು ಜುಲೈ 3ರಂದು ತನ್ನ ವರದಿ ಸಲ್ಲಿಸಿದ್ದು, ರಾಯಚೂರು ಜಿಲ್ಲಾ ಪಂಚಾಯ್ತಿ ಸತತವಾಗಿ ಕೆಲಸ ಮಾಡಿಲ್ಲದಿರುವುದು ಕಂಡುಬಂದಿದ್ದು, ನಿಯಮ 268/2ರ ಪ್ರಕಾರ ಜಿಲ್ಲಾ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ, ಇದರ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೇಳಿದೆ. ಆದರೂ ಈಗಿನ ಸಚಿವರಾದ ಕೆ.ಎಸ್ ಈಶ್ವರಪ್ಪನವರು ಮೌನಕ್ಕೆ ಶರಣಾಗಿದ್ದಾರೆ.

ನಿಲ್ಲದ ಹೋರಾಟ
ಇನ್ನು ರಿಟ್ ಆಫ್ ಮ್ಯಾಂಡಮಸ್ ಮೂಲಕ ಕೋರ್ಟಿಗೆ ಹೋಗಿ ನಿರ್ದೇಶನ ತೆಗೆದುಕೊಳ್ಳಬೇಕೆಂದು ಉಸ್ತಾದ್‌ರವರು ನಿರ್ಧರಿಸಿದ್ದಾರೆ. ಜಿಲ್ಲಾ ಪಂಚಾಯ್ತಿಯ ಅಧಿಕಾರಾವಧಿ ಇನ್ನು ಕೇವಲ 7 ತಿಂಗಳು ಉಳಿದಿದೆ. ಆದರೂ ಅವರು ಹೋರಾಟ ಬಿಟ್ಟಿಲ್ಲ. ಕೇವಲ ಒಂದು ತಿಂಗಳ ಮೊದಲು ವಿಸರ್ಜನೆಯಾದರೂ ಪರವಾಗಿಲ್ಲ, ಜಿಪಂ ವಿಸರ್ಜನೆ ಆಗಲೇಬೇಕು. ಏಕೆಂದರೆ ಇದು ಉಳಿದ ಜಿಲ್ಲೆಗಳಿಗೂ, ಮುಂದೆ ಅಧಿಕಾರಕ್ಕೆ ಬರುವ ಸದಸ್ಯರಿಗೂ ಪಾಠವಾಗಬೇಕಿದೆ. 2020-21ನೇ ಸಾಲಿನ ಕ್ರಿಯಾಯೋಜನೆಯ ಅನುಮೋದನೆಗಾಗಿ ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆದಿಲ್ಲ, ಕ್ರಿಯಾಯೋಜನೆ ಅನುಮೋದನೆಯಾಗಿಲ್ಲ ಅಂದರೆ ಕೆಲಸ ಯಾವಾಗ ಮಾಡುತ್ತಾರೆ? ಎಂದು ಉಸ್ತಾದ್‌ರವರು ಪ್ರಶ್ನಿಸಿದ್ದಾರೆ.

ಡಾ.ರಝಾಕ್ ಉಸ್ತಾದ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ

2018ರಿಂದ ಇಲ್ಲಿಯವರೆಗೂ ಕೇವಲ 3 ಸಾಮಾನ್ಯಸಭೆಗಳು ಮಾತ್ರ ನಡೆದಿವೆ. ಅದು ಸಹ ಕ್ರಿಯಾಯೋಜನೆಗೆ ಅನುಮೋದನೆ ಪಡೆಯುವ ಕಾರಣಕ್ಕಾಗಿ ಮಾತ್ರ ಮಾಡಿದ್ದಾರೆ ಅಷ್ಟೇ. ಇದು ಕೇವಲ ರಾಯಚೂರು ಜಿಲ್ಲಾ ಪಂಚಾಯ್ತಿಯ ವಿಷಯ ಮಾತ್ರವಲ್ಲ. ರಾಜ್ಯದ ಅರ್ಧಕ್ಕರ್ಧ ಜಿಲ್ಲಾ ಪಂಚಾಯ್ತಿಗಳು, ತಾಲ್ಲೂಕು, ಗ್ರಾಮಪಂಚಾಯ್ತಿಗಳು ಹೀಗೆಯೇ ಕೆಲಸ ಮಾಡುತ್ತಿವೆ. ಹಾಗಾಗಿ ರಾಯಚೂರು ಜಿಲ್ಲಾ ಪಂಚಾಯ್ತಿಯನ್ನು ವಿಸರ್ಜನೆ ಮಾಡಿದರೆ ಅದು ಇಡೀ ರಾಜ್ಯಕ್ಕೆ ಪಾಠವಾಗುತ್ತದೆ. ಸರ್ಕಾರ ಜಿಲ್ಲಾ ಪಂಚಾಯತ್ ಸದಸ್ಯರ ಮೇಲೆ ಕ್ರಮ ಜರುಗಿಸಬಹುದು ಎಂಬುದಾದರೂ ಜನರ ಅರಿವಿಗೆ ಬರಲಿ ಎಂಬುದು ಅವರ ಆಶಯ.

ಪ್ರತಿಪಕ್ಷ ಕಾಂಗ್ರೆಸ್ ಏನು ಮಾಡುತ್ತಿದೆ?
ರಾಯಚೂರಿನಲ್ಲಿ 3 ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್‌ಸಿಗಳು ಇದ್ದಾರೆ. ಆದರೆ ಜಿ.ಪಂನ ವಿರೋಧಪಕ್ಷವಾಗಿ ಅವರ್‍ಯಾರು ಸಹ ಜಿಲ್ಲಾ ಪಂಚಾಯತ್‌ನ ಈ ನಿರ್ಲಕ್ಷ್ಯದ ಕುರಿತು ಮಾತನಾಡಿಲ್ಲ. ಏಕೆಂದರೆ ಜಿಲ್ಲೆಯ ಅಭಿವೃದ್ಧಿ ಕುರಿತು ಅವರಿಗೂ ಕಾಳಜಿಯಿಲ್ಲ. ಬಹುತೇಕ ಜಿಲ್ಲಾ ಪಂಚಾಯ್ತಿಗಳು ಈ ರೀತಿ ಕೆಲಸ ಮಾಡುತ್ತಿಲ್ಲ. ಜಿ.ಪಂ ಸದಸ್ಯರು ಅವರ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಹಲವು ಶಾಸಕರಿಗೆ ಜಿಲ್ಲಾ ಪಂಚಾಯ್ತಿಗಳು ಇರುವುದು ಬೇಕಿಲ್ಲ. ಏಕೆಂದರೆ ಜಿ.ಪಂ ಸದಸ್ಯರು ತಮಗೆ ಸರಿಸಮಾನವಾಗಿ ಕೂಡುತ್ತಾರೆ ಎಂಬ ಅಹಂ ಕೆಲಸ ಮಾಡುತ್ತದೆ.

ಜಿ.ಪಂ ಸದಸ್ಯರ ವಾದ
ನಮಗೆ ಪ್ರತ್ಯೇಕ ಅನುದಾನ ಇಲ್ಲ ಅಂದಮೇಲೆ ನಾವು ಸಭೆ ಸೇರಿ ಏನು ಪ್ರಯೋಜನ? ಶಾಸಕರಿಗೆ ವಾರ್ಷಿಕ 2 ಕೋಟಿ ವಿಶೇಷ ಅನುದಾನವಿರುತ್ತದೆ. ಇನ್ನು ಸಂಸತ್ ಸದಸ್ಯರಿಗೆ 5 ಕೋಟಿ ರೂ ಇರುತ್ತದೆ. ಈ ರೀತಿಯಾಗಿ ನಮಗೆ ಹೆಚ್ಚಿನ ಅನುದಾನ ಇಲ್ಲ ಎನ್ನುವುದು ಜಿ.ಪಂ ಸದಸ್ಯರ ತಕರಾರು. ಕೇವಲ 5 ಲಕ್ಷ ಹಣ ಬಂದರೆ ನಮ್ಮ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿರುತ್ತವೆ. ಅದರಿಂದ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಆದರೆ ಕ್ರಿಯಾಯೋಜನೆ ತಯಾರು ಮಾಡುವಾಗ ನಮ್ಮ ರಾಯಚೂರು ಜಿ.ಪಂ.ಗೆ 300ಕೋಟಿ ರೂ ಅನುದಾನವಿದೆ. ಇದು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿರುತ್ತದೆ. ಆದರೆ ಈ ಅನುದಾನ ಜಿ.ಪಂ ಸದಸ್ಯರಿಗೆ ಬೇಕಿಲ್ಲ. ಏಕೆಂದರೆ ಅವರ ಕೈಗೆ ಹಣ ಬರುವಂತಹ ಅನುದಾನಗಳು ಅವರಿಗೆ ಬೇಕು, ಆಗ ಮಾತ್ರ ದುಡ್ಡು ನುಂಗಲು ಸಾಧ್ಯ ಎನ್ನುವ ದುರಾಲೋಚನೆ ಅವರದು. ಈ ಮೇಲಿನ ಅನುದಾನ ಬಳಸಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು, ಜನರ ಹಿತ ಕಾಯಲು ಅವರಿಗೆ ಮನಸ್ಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಡಾ. ರಝಾಕ್ ಉಸ್ತಾದ್‌ರವರು.

ಈ ಮೊದಲೇ ಹೇಳಿದಂತೆ ಇದು ಕೇವಲ ರಾಯಚೂರು ಜಿ.ಪಂನ ಲೋಪವಲ್ಲ. ಇದು ಇಡೀ ರಾಜ್ಯದ ಹಲವು ಜಿಲ್ಲೆಗಳ ಶೋಚನೀಯ ಪರಿಸ್ಥಿತಿಯಾಗಿದೆ. ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಎಲ್ಲಾ ಸದಸ್ಯರು ಹಾಜರಿರುತ್ತಾರೆ. ಅದೇನೂ ಉತ್ಸಾಹ ತೋರಿಸುತ್ತಾರೆ. ಆದರೆ ಒಮ್ಮೆ ಆಯ್ಕೆಯಾದಮೇಲೆ ಮುಗೀತು, ಇತ್ತ ತಲೆಹಾಕುವುದಿಲ್ಲ. ಜಿ.ಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನವಿದೆ. ಸಾಕಷ್ಟು ಅಧಿಕಾರವಿದೆ. ಆದರೂ ಅವರು ಕೆಲಸ ಮಾಡುತ್ತಿಲ್ಲ ಎಂದರೆ ಅವರು ಆ ಸ್ಥಾನದಲ್ಲಿ ಏಕಿರಬೇಕು ಅಲ್ಲವೇ? ಇದು ರಾಯಚೂರಿನ ವರದಿ. ನೀವು ನಿಮ್ಮ ಜಿ.ಪಂ.ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತೀರಿ ಅಲ್ಲವೇ?

– ಮುತ್ತುರಾಜು


ಇದನ್ನೂ ಓದಿ: ಗಾಂಧಿ ಪ್ರತಿಮೆ ಇರುವ ಪ್ರದೇಶ ಧಾರ್ಮಿಕ ಸ್ಥಳವಲ್ಲ: ಕರ್ನಾಟಕ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...