ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ 22 ಮಂದಿ ಮೃತಪಟ್ಟಿದ್ದು, ಶಿಮ್ಲಾದಲ್ಲಿ ದೇವಾಲಯ ಕುಸಿತಕ್ಕೆ 9 ಮಂದಿ ಮೃತಪಟ್ಟಿದ್ದಾರೆ.
ಶಿಮ್ಲಾದಲ್ಲಿ ಸಮ್ಮರ್ ಹಿಲ್ ಪ್ರದೇಶದಲ್ಲಿ ಶಿವನ ದೇವಾಲಯ ಕುಸಿದು 9 ಮಂದಿ ಮೃತಪಟ್ಟಿದ್ದಾರೆ.ಸೋಲನ್ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ.ಹಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿನ್ನೆ ರಾತ್ರಿ ಮೇಘಸ್ಫೋಟದ ನಂತರ ಸೋಲನ್ನಲ್ಲಿ ಎರಡು ಮನೆಗಳು ಕೊಚ್ಚಿಹೋಗಿವೆ. ಆರು ಜನರನ್ನು ರಕ್ಷಿಸಿಸಲಾಗಿದೆ. ಜಾಡೋನ್ ಗ್ರಾಮದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಳೇರ ಪಂಚಾಯಿತಿಯಲ್ಲಿ ಭೂಕುಸಿತದಿಂದ ತಾತ್ಕಾಲಿಕ ಮನೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ರಾಮ್ಶೆಹರ್ ತಹಸಿಲ್ನ ಬನಾಲ್ ಗ್ರಾಮದಲ್ಲಿ ಭೂಕುಸಿತದಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಸೋಲನ್ನ ಡೆಪ್ಯುಟಿ ಕಮಿಷನರ್ ಮನಮೋಹನ್ ಶರ್ಮಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಹಮರ್ಪುರದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರವಾಹ ಪರಿಸ್ಥಿತಿಯ ಬಗ್ಗೆ ಸೋಮವಾರ ಡೆಹ್ರಾಡೂನ್ನಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ನಾಗರಿಕರ ಸುರಕ್ಷತೆ ಮತ್ತು ಬೇಕಾಗಿರುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಗುಡ್ಡಗಾಡು ಪ್ರದೇಶಗಳಿಗೆ ತೆರಳದಂತೆ ಎಲ್ಲಾ ಜನರಿಗೆ ಡಿಜಿಪಿ ಅಶೋಕ್ ಕುಮಾರ್ ಮನವಿ ಮಾಡಿದ್ದಾರೆ.
ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ನೀಡಿದೆ. ಆಗಸ್ಟ್ 12 ರಿಂದ ವಿಶೇಷವಾಗಿ ಗರ್ವಾಲ್ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಪೊಲೀಸ್ ಮತ್ತು ಎಸ್ಡಿಆರ್ಎಫ್ ತಂಡವು ಅಲರ್ಟ್ ಆಗಿದೆ ಎಂದು ಡಿಜಿಪಿ ಹೇಳಿದ್ದಾರೆ.
ಇದನ್ನು ಓದಿ: NEET ಪರೀಕ್ಷೆ ತಗೆದುಹಾಕುವ ಮಸೂದೆಗೆ ರಾಜ್ಯಪಾಲರ ಅನುಮತಿ ಬೇಕಿಲ್ಲ: ಸಚಿವ ಸುಬ್ರಮಣಿಯನ್