ಹಸುಗಳ ಕಳ್ಳಸಾಗಣೆ ಆರೋಪದ ಮೇಲೆ ವ್ಯಕ್ತಿಯ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಚಿತ್ತೋರ್ಗಢದಲ್ಲಿ ನಡೆದಿದೆ. ಮತ್ತೊಬ್ಬ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ.
ಮೃತ ವ್ಯಕ್ತಿಯನ್ನು ಬಾಬು ಲಾಲ್ ಭಿಲ್ ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ಅಚಲ್ಪುರದ ನಿವಾಸಿ ಎನ್ನಲಾಗಿದೆ. ಮೃತ ಬಾಬು ಮತ್ತು ಇನ್ನೊಬ್ಬ ವ್ಯಕ್ತಿ ಗಾಯಾಳು ಪಿಂಟು ಭಿಲ್ ವಾಹನದಲ್ಲಿ ತೆರಳುತಿದ್ದಾಗ ಜನರ ಗುಂಪೊಂದು ವಾಹನ ನಿಲ್ಲಿಸುವಂತೆ ಒತ್ತಾಯಿಸಿ, ಇಬ್ಬರನ್ನು ಹೊರಗೆಳೆದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಪಿಂಟು ಭಿಲ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗು ಎಂಬ ಪಟ್ಟಣದ ಬಳಿ ಈ ದಾಳಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಕೆಲವು ಜನರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪ್ರವೇಶಕ್ಕೆ ಕೊರೋನಾ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ- ಸಿಎಂ ಬಿ.ಎಸ್ ಯಡಿಯೂರಪ್ಪ
“ಹಸುಗಳನ್ನು ಸಾಗಿಸುತ್ತಿದ್ದ ವಾಹನ ನಿಲ್ಲಿಸಿ ಕೆಲವರು ಹಲ್ಲೆ ನಡೆಸುತ್ತಿದ್ದಾರೆ ಎಂದು ಮಧ್ಯರಾತ್ರಿ ಠಾಣೆಗೆ ಮಾಹಿತಿ ದೊರೆಯಿತು. ನಮ್ಮ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಹತ್ತಿರದ ರೈಟಿ ಗ್ರಾಮ ಮತ್ತು ಸುತ್ತಮುತ್ತಲಿನ ಜನರು, ಬಾಬು ಮತ್ತು ಪಿಂಟು ಎಂಬ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸುತ್ತಿದ್ದರು” ಎಂದು ಐಜಿ(ಉದಯಪುರ ಶ್ರೇಣಿ) ಸತ್ಯವೀರ್ ಸಿಂಗ್ ಹೇಳಿದ್ದಾರೆ.
“ದಾಳಿಕೋರರು, ಹಲ್ಲೆಗೊಳಗಾದ ಇಬ್ಬರ ದಾಖಲೆಗಳು ಮತ್ತು ಮೊಬೈಲ್ ಫೋನ್ಗಳನ್ನು ಕಸಿದುಕೊಂಡಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಹಲ್ಲೆ ನಡೆಸುತ್ತಿದ್ದವರು ಓಡಿಹೋದರು. ನಮ್ಮ ಅಧಿಕಾರಿಗಳು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು, ಆದರೆ, ಆಸ್ಪತ್ರೆಯಲ್ಲಿ ಬಾಬು ನಿಧನರಾದರು. ಗಾಯಾಳು ಪಿಂಟು ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.
“ನಾವು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ. ಯಾವುದೇ ಆರೋಪಿಗಳನ್ನು ಬಿಡುವುದಿಲ್ಲ. ಈಗಾಗಲೇ ನಾವು ಕೆಲವರನ್ನೂ ವಶಕ್ಕೆ ಪಡೆದಿದ್ದೇವೆ” ಎಂದು ಸತ್ಯವೀರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಜೀವ ಬೆದರಿಕೆಯಿದೆ ಎಂದು ಪೊಲೀಸರಿಗೆ ತಿಳಿಸಿದ್ದ ಪತ್ರಕರ್ತ ಸಾವು: ಅಪಘಾತ ಎಂದ ಪೊಲೀಸರು!


