ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಜೀವ ಬೆದರಿಕೆಯಿದೆ ಎಂದಿದ್ದ, ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆ ಮೂಲದ ಟಿವಿ ಪತ್ರಕರ್ತರೊಬ್ಬರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಪೊಲೀಸರು ಪತ್ರಕರ್ತರ ಸಾವನ್ನು “ಬೈಕ್ ಅಪಘಾತ” ಎಂದು ಕರೆದಿದ್ದಾರೆ.
ಎಬಿಪಿ ನ್ಯೂಸ್ ಮತ್ತು ಅದರ ಪ್ರಾದೇಶಿಕ ವಿಭಾಗವಾದ ಎಬಿಪಿ ಗಂಗಾ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಸುಲಭ್ ಶ್ರೀವಾಸ್ತವ, ಶನಿವಾರವಷ್ಟೇ ತಮಗೆ ಜೀವ ಬೆದರಿಕೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಪ್ರತಾಪಗಢ ಜಿಲ್ಲೆಯಲ್ಲಿ ಇತ್ತೀಚೆಗೆ ಮದ್ಯ ಮಾಫಿಯಾಗಳ ವರದಿಯ ಮೇಲೆ ಪತ್ರಕರ್ತ ಸುಲಭ್ ಬೆಳಕು ಚೆಲ್ಲಿದ್ದರು. ನಂತರ ತನಗೆ ಬೆದರಿಕೆಯಿದೆ ಎಂದು ಹೇಳಿದ್ದರು.
“ಸುಲಭ್ ಶ್ರೀವಾಸ್ತವ ಅವರು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲಸದ ನಂತರ ತಮ್ಮ ಮೋಟಾರ್ ಸೈಕಲ್ನಲ್ಲಿ ಹಿಂದಿರುಗುತ್ತಿದ್ದರು. ಇಟ್ಟಿಗೆ ಗೂಡು ಬಳಿ ಅಪಘಾತಕ್ಕೆ ಈಡಾಗಿ ಬಿದ್ದಿದ್ದಾರೆ. ಕೆಲವು ಕಾರ್ಮಿಕರು ನೋಡಿ, ಅವರ ಸ್ನೇಹಿತರರಿಗೆ ಕರೆ ಮಾಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸುಲಭ್ ಶ್ರೀವಾಸ್ತವ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ” ಎಂದು ಪ್ರತಾಪಗಢದ ಹಿರಿಯ ಪೊಲೀಸ್ ಅಧಿಕಾರಿ ಸುರೇಂದ್ರ ದ್ವಿವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಸತಿ-ಪತಿಗಳಾದ ಸೋಶಿಯಲಿಸಂ ಮತ್ತು ಮಮತಾ ಬ್ಯಾನರ್ಜಿ
“ಪ್ರಾಥಮಿಕ ತನಿಖೆಯಲ್ಲಿ ಅವರು ಒಬ್ಬರೇ ತಮ್ಮ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್ ರಸ್ತೆಯ ಹ್ಯಾಂಡ್ಪಂಪ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಾವು ಇತರ ಕೋನಗಳಲ್ಲಿಯೂ ಸಹ ತನಿಖೆ ನಡೆಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಸುರೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ತೆಗೆದಿರುವ ಪತ್ರಕರ್ತ ಸುಲಭ್ ಅವರ ಮೃತದೇಹದ ಛಾಯಾಚಿತ್ರದಲ್ಲಿ, ಪತ್ರಕರ್ತ ನೆಲದ ಮೇಲೆ ಬಿದ್ದಿರುವುದು, ಅವರ ಮುಖಕ್ಕೆ ತೀವ್ರ ಗಾಯಗಳಾಗಿರುವುದು, ಅವರು ತೊಟ್ಟಿರುವ ಬಟ್ಟೆಗಳನ್ನು ತೆಗೆದಿರುವ ರೀತಿಯಲ್ಲಿದೆ. ಶರ್ಟ್ ಸಂಪೂರ್ಣವಾಗಿ ತೆಗೆಯಲಾಗಿದ್ದು, ಪ್ಯಾಂಟ್ ಬಿಚ್ಚಿ ಕೆಳಕ್ಕೆ ಎಳೆದಿರುವುದನ್ನು ಛಾಯಾಚಿತ್ರದಲ್ಲಿ ನೋಡಬಹುದು ಎಂದು ಎನ್ಡಿಟಿವಿ ವರದಿ ಮಾಡಿದೆ.
ಮೃತ ಪತ್ರಕರ್ತ ಶನಿವಾರ ತಮಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಮಾಜಿ ಚಾನೆಲ್ನ ಹಿರಿಯ ಪತ್ರಕರ್ತರು ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಈಗ ಇದ್ದಿದ್ದರೆ ಬಿಜೆಪಿಗರು ಅವರನ್ನು ಪಾಕ್ ಪರ ಎನ್ನುತ್ತಿದ್ದರು: ಮೆಹಬೂಬಾ ಮುಫ್ತಿ
“ಜೂನ್ 9 ರಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಮದ್ಯ ಮಾಫಿಯಾ ಕುರಿತ ನನ್ನ ವರದಿಯು ನನ್ನ ಚಾನೆಲ್ ನಡೆಸುತ್ತಿರುವ ನ್ಯೂಸ್ ಪೋರ್ಟಲ್ನಲ್ಲಿ ವರದಿಯಾಗಿದೆ. ಅಂದಿನಿಂದ ಈ ವರದಿಯ ಬಗ್ಗೆ ಸಾಕಷ್ಟು ಚರ್ಚೆಗಳಿವೆ. ನಾನು ನನ್ನ ಮನೆಯಿಂದ ಹೊರಬಂದಾಗ ಯಾರೋ ನನ್ನನ್ನು ಹಿಂಬಾಲಿಸುವಂತೆ ಅನಿಸುತ್ತಿದೆ. ನನ್ನ ವರದಿಯ ಬಗ್ಗೆ ಮದ್ಯ ಮಾಫಿಯಾ ಅತೃಪ್ತಿ ಹೊಂದಿದೆ. ನನಗೆ ತೊಂದರೆಯಾಗಬಹುದು ಎಂದು ನನ್ನ ಮೂಲಗಳು ತಿಳಿಸಿವೆ. ಇದರಿಂದ ನನ್ನ ಕುಟುಂಬವೂ ತುಂಬಾ ಆತಂಕಕ್ಕೊಳಗಾಗಿದೆ “ಎಂದು ಸುಲಭ್ ಶ್ರೀವಾಸ್ತವ ಪತ್ರದಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಅವರು ಎಬಿಪಿ ನ್ಯೂಸ್ಗೆ ಫೋನ್-ಇನ್ ಸಂದರ್ಶನದಲ್ಲಿ ಪತ್ರದ ಬಗ್ಗೆ ಮಾತನಾಡಿದ್ದು, ಬೆದರಿಕೆ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸುಲಭ್ ಶ್ರೀವಾಸ್ತವ ಸಾವಿಗೆ ಪ್ರತಿಪಕ್ಷದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, “ಸತ್ಯವನ್ನು ಬಹಿರಂಗಪಡಿಸಲು ಪತ್ರಕರ್ತರು ಅಪಾಯಕಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸರ್ಕಾರ ನಿದ್ರಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
शराब माफिया अलीगढ़ से प्रतापगढ़ तक:पूरे प्रदेश में मौत का तांडव करें।
उप्र सरकार चुप।
पत्रकार सच्चाई उजागर करे, प्रशासन को खतरे के प्रति आगाह करे।
सरकार सोई है।
क्या जंगलराज को पालने-पोषने वाली उप्र सरकार के पास पत्रकार सुलभ श्रीवास्तव जी के परिजनों के आंसुओं का कोई जवाब है?
— Priyanka Gandhi Vadra (@priyankagandhi) June 14, 2021
ಇದನ್ನೂ ಓದಿ: ಕೊಡಗು: ಪೊಲೀಸರ ದೌರ್ಜನ್ಯಕ್ಕೆ ಮಾನಸಿಕ ಅಸ್ವಸ್ಥ ಬಲಿ: ಎಂಟು ಪೊಲೀಸರ ಅಮಾನತು