ಕೊರೊನಾ ಎರಡನೇ ಅಲೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡರೆ, ಕೊರೊನಾ ಕಾರಣಕ್ಕಾಗಿ ಹೇರಲಾದ ಲಾಕ್ಡೌನ್ನಿಂದಾಗಿ ಕೋಟ್ಯಾಂತರ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂಕಷ್ಟವನ್ನು ಕಡಿಮೆ ಮಾಡಲು ಹಲವು ರಾಜ್ಯಗಳು ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಸಹ ಅದು ಬಡಜನರನ್ನು ತಲುಪಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳು ಇರುವುದರಲ್ಲಿ ಉತ್ತಮ ಪ್ಯಾಕೇಜ್ ಘೋಷಿಸಿದ್ದರೆ ಕರ್ನಾಟಕ ಸರ್ಕಾರದ ಪ್ಯಾಕೇಜ್ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ರೀತಿ ಇದೆ ಎಂದು ಹಲವರು ಟೀಕಿಸಿದ್ದಾರೆ. ಇನ್ನು ಹಲವಾರು ಜನರಿಗೆ ಪ್ಯಾಕೇಜ್ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಸಂಪೂರ್ಣ ಪ್ಯಾಕೇಜ್ಗೆ ಆಗ್ರಹಿಸಿ ಜನಾಗ್ರಹ ಆಂದೋಲನದ ವತಿಯಿಂದ ಜೂನ್ 15 ರಂದು ಮುಖ್ಯಮಂತ್ರಿಗಳ ಮನೆಗೆ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಕೋವಿಡ್ಗೆ 35,000 ಜನರು ಬಲಿಯಾಗಿದ್ದಾರೆ. 30 ಲಕ್ಷ ಜನ ಕೋವಿಡ್ಗೆ ತುತ್ತಾಗಿ, ಸಂಕಟ ಅನುಭವಿಸಿ, ಸಾಲಸೋಲ ಮಾಡಿಕೊಂಡು ಚೇತರಿಸಿಕೊಳ್ಳಲು ಪ್ರಯಾಸಪಡುತ್ತಿದ್ದಾರೆ. ಮೂರು ತಿಂಗಳಿಂದ ಲಕ್ಷಾಂತರ ದುಡಿಯುವ ಕೈಗಳಿಗೆ ಕೆಲಸವಿಲ್ಲ. ವ್ಯಾಪಾರ ವಹಿವಾಟು ನೆಲಕಚ್ಚಿದೆ. ಸಾಲದೆಂಬಂತೆ ಮೂರನೇ ಅಲೆಯ ಕತ್ತಿ ನೆತ್ತಿಯ ಮೇಲೆ ತೂಗಾಡುತ್ತಿದೆ. ಈ ಅವನತಿಯಿಂದ ರಾಜ್ಯವನ್ನು ಹಾಗೂ ಜನರನ್ನು ಮೇಲೆತ್ತಬೇಕಾದರೆ ಸರ್ಕಾರ ದಿಟ್ಟ ಕ್ರಮಗಳಿಗೆ ಮುಂದಾಗಲೇಬೇಕು. ಆದರೆ ಅದು ಸಂವೇದನಾಹೀನವಾಗಿ ನಡೆದುಕೊಳ್ಳುತ್ತಿದೆ, ನೊಂದ ಜನರಿಗೆ ಎಷ್ಟು ಮಾತ್ರಕ್ಕೂ ನೆರವಾಗದ ಬರೀ ತೋರಿಕೆಯ ಕ್ರಮಗಳನ್ನಷ್ಟೇ ತೆಗೆದುಕೊಳ್ಳುತ್ತಿದೆ. ಈ ಕಾರಣದಿಂದಾಗಿಯೇ ಸಾವು ನೋವುಗಳು ಹೆಚ್ಚಾಗಿವೆ ಎಂದು ಜನಾಗ್ರಹ ಆಂದೋಲನ ಆರೋಪಿಸಿದೆ.
ಜನಾಗ್ರಹ, ಜನರಪರ ಸಂಘಟನೆಗಳು ಹಾಗೂ ಮಾಧ್ಯಮಗಳ ಒತ್ತಡದಿಂದಾಗಿ ಸರ್ಕಾರ ಎರಡು ಅರೆಮನಸ್ಸಿನ ಪ್ಯಾಕೇಜುಗಳನ್ನು ಘೋಷಿಸಿದೆ. ಆದರೆ ಅವು ಏತಕ್ಕೂ ಸಾಲದ ಪ್ಯಾಕೇಜುಗಳು. ಕೆಲಸವಿಲ್ಲದೆ ದುಡಿಯುವ ಜನರ ಜೇಬು ಮತ್ತು ಮನೆ ಪಾತ್ರೆ ಎರಡೂ ಖಾಲಿಯಾಗಿವೆ. ಹಸಿವಿನ ಹಾಗೂ ಹಣ ಅಭಾವದ ಹಾಹಾಕಾರ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಅಪಾಯದಲ್ಲಿರುವ ಜನಸಾಮಾನ್ಯರೆಲ್ಲರ ಜೀವ ಉಳಿಸಿಕೊಳ್ಳಲು, ಕುಸಿಯುತ್ತಿರುವ ಲಕ್ಷಾಂತರ ಕುಟುಂಬಗಳ ಜೀವನೋಪಾಯವನ್ನು ರಕ್ಷಿಸಿಕೊಳ್ಳಲು ಇಂದು ಬೀದಿಗಿಳಿಯುವುದು ಅನಿವಾರ್ಯ ಅಗತ್ಯವಾಗಿದೆ ಎಂದು ಜನಾಗ್ರಹದ ಪರವಾಗಿ ಮಾವಳ್ಳಿ ಶಂಕರ್
ಬಿ.ಟಿ. ಲಲಿತಾ ನಾಯ್ಕ್ ತಿಳಿಸಿದ್ದಾರೆ.
ಜೂನ್ 15ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೌರ್ಯ ಸರ್ಕಲ್ಲಿನಿಂದ ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿಯವರನ್ನು ಕಂಡು ಜನರ ಒಕ್ಕೊರಲಿನ ಮನದಾಳದ ಆಗ್ರಹಗಳನ್ನು ಮುಂದಿಡುವುದು ನಾಳೆಯ ನಡಿಗೆಯ ಉದ್ದೇಶವಾಗಿದೆ. ನಾಳೆಯ ನಡಿಗೆಯಲ್ಲಿ ಶಸಿಕಾಂತ್ ಸೆಂದಿಲ್, ಮಾವಳ್ಳಿ ಶಂಕರ್, ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಬಿ.ಟಿ. ಲಲಿತಾ ನಾಯ್ಕ್, ಸಿರಿಮನೆ ನಾಗರಾಜ್, ಯೂಸೂಫ್ ಕನ್ನಿ, ವಿ. ನಾಗರಾಜ್, ಹಬೀಬುಲ್ಲಾ, ಅಫ್ಸರ್ ಕೊಡ್ಲಿಪೇಟೆ, ಕುಮಾರ್ ಸಮತಳ ಮುಂತಾದ ಮುಖಂಡರುಗಳು ಹಾಗೂ ಅನೇಕ ಸಮಾಜಿಕ ಕಾರ್ಯಕರ್ತರು ಸಂಪೂರ್ಣ ರೀತಿಯಲ್ಲಿ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಾ ಭಾಗವಹಿಸಲಿದ್ದಾರೆ.
ಹಕ್ಕೊತ್ತಾಯಗಳು
1. ಕೋವಿಡ್ ಚಿಕಿತ್ಸೆಯನ್ನು ಉಚಿತಗೊಳಿಸಬೇಕು, ವ್ಯವಸ್ಥಿತಗೊಳಿಸಬೇಕು, ಗ್ರಾಮಗಳಿಗೂ ವಿಸ್ತರಿಸಬೇಕು.
2. ಎಲ್ಲರಿಗೂ ಸರ್ಕಾರದಿಂದಲೇ ಉಚಿತ ವ್ಯಾಕ್ಸಿನ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು. ಸೆಪ್ಟೆಂಬರ್ ಒಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
3. ರಾಜ್ಯದಲ್ಲಿ ಬಡತನ ರೇಖಗಿಂತ ಕೆಳಗಿರುವ ಎಲ್ಲಾ 70 ಲಕ್ಷ ಕುಟುಂಬಗಳಿಗೆ ಸಮಗ್ರ ಪಡಿತರ ನೀಡಬೇಕು ಮತ್ತು 10 ಸಾವಿರ ನೆರವು ಧನ ನೀಡಬೇಕು.
4. ದುಡಿವವರನ್ನು ಕಳೆದುಕೊಂಡ ಅನಾಥಗೊಂಡಿರುವ ಕುಟುಂಬಗಳಿಗೆ 5 ಲಕ್ಷ ಪರಿಹಾರ ಧನ ನೀಡಬೇಕು.
5. ರೈತರ ಬಿತ್ತನೆ ಬೀಜ – ಗೊಬ್ಬರಕ್ಕೆ ವಿಶೇಷ ಸಬ್ಸಿಡಿ ಘೋಷಿಸಬೇಕು.
ಇದನ್ನೂ ಓದಿ: ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಬಿಎಸ್ವೈ