ಕಳೆದೊಂದು ತಿಂಗಳಿಂದ ತೀವ್ರ ವಿವಾದ ಮತ್ತು ಚರ್ಚೆಗೊಳಗಾಗಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಇಂದು ಕೋರ್ಟ್ಗೆ ಹಾಜರಾಗಿದ್ದು, ಮಹತ್ವದ ಹೇಳಿಕೆ ದಾಖಲಿಸುತ್ತಿದ್ದಾಳೆ ಎಂದು ವರದಿಯಾಗಿದೆ.
ತಮ್ಮ ವಕೀಲರ ತಂಡದ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುವತಿಯು ನಾಲ್ಕು ಬೆಂಗಾವಲು ಕಾರುಗಳ ಭದ್ರತೆಯೊಂದಿಗೆ ಗುರುನಾನಕ್ ಭವನದಲ್ಲಿರೋ ಕೋರ್ಟ್ ಹಾಲ್ ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದು ಸತತ ಒಂದು ಗಂಟೆಯಿಂದ ಹೇಳಿಕೆ ದಾಖಲಿಸುತ್ತಿದ್ದಾರೆ ಎನ್ನಲಾಗಿದೆ.
ಮ್ಯಾಜಿಸ್ಟ್ರೇಟ್ ಯುವತಿಯ ಹೇಳಿಕೆಯನ್ನು ಪಡೆಯಲಿದ್ದು, ಎರಡು ಕ್ಯಾಮರಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ ಎನ್ನಲಾಗಿದೆ. ಯುವತಿ ನೀಡಿದ ದೂರನ್ನು ಪೊಲೀಸ್ ಆಯುಕ್ತ ಕಮಲ್ ಪಂತ್ ಎಸ್ಐಟಿಗೆ ವರ್ಗಾಯಿಸಿದ್ದಾರೆ. ಆ ದೂರಿನ ಅಂಶಗಳು ಮತ್ತು ಈ ಹಿಂದೆ ಐದು ವಿಡಿಯೋ ಸಂದೇಶದಲ್ಲಿ ಆಕೆ ನೀಡಿದ ಹೇಳಿಕೆಯನ್ನೇ ಇಂದು ಜಡ್ಜ್ ಮುಂದೆ ದಾಖಲಿಸಿದ್ದಲ್ಲಿ ಎಸ್ಐಟಿ ಅಧಿಕಾರಿಗಳು ಸೆಕ್ಷನ್ 377 ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಂಧಿಸುವುದು ಅನಿವಾರ್ಯವಾಗುತ್ತದೆ ಎನ್ನಲಾಗಿದೆ.
ಅದೇ ರೀತಿಯಲ್ಲಿ ಯುವತಿಯ ಮೇಲೆ ಸೆಕ್ಷನ್ 384 ಅಡಿಯಲ್ಲಿ ವಂಚನೆ, ಬಲತ್ಕಾರದ ಸುಲಿಗೆ ಪ್ರಕರಣ ದಾಖಲಿಸಿ ಪೊಲೀಸರು ಆಕೆಯನ್ನು ವಿಚಾರಣೆಗೆ ಪಡೆಯಬಹುದು ಎಂಬ ಅಂಶಗಳು ಸಹ ಚರ್ಚೆಗೆ ಬಂದಿವೆ. ಈ ಕುರಿತು ಎಸ್ಐಟಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.
ಯುವತಿ ಕೋರ್ಟ್ಗೆ ಹಾಜರಾಗಿ ಹೇಳಿಕೆ ನೀಡಿದ ಬೆನ್ನಲ್ಲೆ ಎಸ್ಟಿಐ ಮುಖ್ಯಸ್ಥರು, ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಸಭೆ ನಡೆಸುತ್ತಿದ್ದಾರೆ.
ಇನ್ನು ಸಿಡಿ ಗದ್ದಲ ಮತ್ತಿತರ ಕಾರಣಗಳಿಂದಾಗಿ ಇಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಿಎಂ ಯಡಿಯೂರಪ್ಪನವರು ತಮ್ಮ ನಿಗಧಿತ ಕಾರ್ಯಗಳನ್ನು ರದ್ದುಗೊಳಿಸಿದ್ದಾರೆ. ಇಂದು ಬೆಳಗಾವಿ ಉಪಚುನಾವಣೆ ಕುರಿತು ನಡೆಯಬೇಕಿದ್ದ ಬಿಜೆಪಿ ಮುಖಂಡರೊಂದಿಗಿನ ಸಭೆಯನ್ನು ಸಹ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಿಡಿ ಪ್ರಕರಣ: ರಕ್ಷಣೆ ಕೊಡಿ ಎಂದು ಹೈಕೋರ್ಟ್ ಸಿಜೆಐಗೆ ಪತ್ರ ಬರೆದ ಸಂತ್ರಸ್ತ ಯುವತಿ