ಮಾರ್ಚ್ 1ರಂದು ಸಂಭವಿಸಿದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಿಂದ ಕನಿಷ್ಠ 10 ಜನರು ಗಾಯಗೊಂಡಿದ್ದು, ಬಾಂಬ್ ಇಟ್ಟ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಿದವರಿಗೆ ₹10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಘೋಷಿಸಿದೆ. ‘ವಾಂಟೆಡ್’ ಪೋಸ್ಟರ್ ಬಿಡುಗಡೆ ಮಾಡಿರುವ ತನಿಖಾ ಸಂಸ್ಥೆಯು ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದು, ಮಾಹಿತಿದಾರರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಹೇಳಿದರು.
ಸ್ಫೋಟ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕೇಂದ್ರ ಅಪರಾಧ ವಿಭಾಗ ಮತ್ತು ಎನ್ಐಎ ಎರಡರಿಂದಲೂ ಆರೋಪಿಗೆ ತೀವ್ರ ಹುಡುಕಾಟ ನಡೆಯುತ್ತಿದೆ. ಕರ್ನಾಟಕ ಸರ್ಕಾರವು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸದ ಕಾರಣ, ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಸೂಚಿಸಿದ ನಂತರ ಎನ್ಐಎ ಮಂಗಳವಾರ ತನ್ನ ಕೆಲಸ ಪ್ರಾರಂಭಿಸಿತು.
ನಗರದ ಪೊಲೀಸರು ಪ್ರಮುಖ ಸುಳಿವುಗಳನ್ನು ಕಂಡುಕೊಂಡಿದ್ದಾರೆ ಮತ್ತು ಪ್ರಕರಣವನ್ನು ಭೇದಿಸಲು ಹತ್ತಿರವಾಗಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಹೇಳಿದ್ದಾರೆ. ನಗರಕ್ಕೆ ಆಘಾತ ಮೂಡಿಸಿದ ನಂತರ, ಕೆಫೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಮಾರ್ಚ್ 8ರಂದು ಮತ್ತೆ ತೆರೆಯಲಾಗುತ್ತದೆ ಎಂದು ತಿಳಿಸಿರುವ ಜೋಟೆಲ್ ಮಾಲೀಕರು, ಸ್ವಚ್ಛತಾ ಕೆಲಸ ಆರಂಭಿಸಿದ್ದಾರೆ.
ಮಾರ್ಚ್ 1 ರಂದು, ಜನಪ್ರಿಯ ಕೆಫೆಯಲ್ಲಿ ಊಟದ ಸಮಯದಲ್ಲಿ ವಿಪರೀತ ಜನರಿದ್ದಾಗ ಸ್ಫೋಟ ಸಂಭವಿಸಿದೆ. 10 ಮಂದಿ ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲಿಸಿದಾಗ, ಕೆಫೆಗೆ ಒಂದು ಗಂಟೆ ಮೊದಲು ಬಂದು ಇಡ್ಲಿ ಸೇವಿಸಿದ ವ್ಯಕ್ತಿಯೊಬ್ಬ ಟೈಮರ್ನೊಂದಿಗೆ ಐಇಡಿ ಹೊಂದಿದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದಾನೆ ಎಂದು ಪತ್ತೆ ಹಚ್ಚಲಾಯಿತು.
ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ, ಶಂಕಿತ ಆರೋಪಿಯ ಫೋಟೋ ಬಿಡುಗಡೆ ಮಾಡಲಾಗಿದೆ. ವೈರಲ್ ಫೋಟೋದಲ್ಲಿರುವ ವ್ಯಕ್ತಿಯನ್ನು ಶಂಕಿತ ಎಂದು ಪರಿಗಣಿಸಲಾಗುತ್ತಿದೆ ಎಂದು ಎನ್ಐಎ ಬುಧವಾರ ‘ವಾಂಟೆಡ್’ ನೋಟಿಸ್ ದೃಢಪಡಿಸಿದೆ.
ಶಂಕಿತ ವ್ಯಕ್ತಿ ಎತ್ತರದ ವ್ಯಕ್ತಿಯಾಗಿದ್ದು, ಆತನ ವಯಸ್ಸು 30 ರಿಂದ 40 ವರ್ಷ ಇರಬಹುದು. ಕೆಫೆಯೊಳಗಿನ ಸಿಸಿಟಿವಿಯಿಂದ ಪಡೆದ ಹಿಂದಿನ ಫೋಟೋಗಳಲ್ಲಿ, ಅವರು ಮುಖವಾಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಬುಧವಾರ ಎನ್ಐಎ ಬಿಡುಗಡೆ ಮಾಡಿದ ಫೋಟೋದಲ್ಲಿ ಆತನ ಮುಖವು ಸ್ವಲ್ಪ ಸ್ಪಷ್ಟವಾಗಿ ಕಾಣುತ್ತಿದೆ.
ಇದನ್ನೂ ಓದಿ; ನಿಮ್ಮ ನಿಜ ಮುಖವು ಮಹಿಳಾ ವಿರೋಧಿಯಾಗಿದೆ; ಅದು ಇಡೀ ಭಾರತಕ್ಕೆ ತಿಳಿದಿದೆ: ಮೋದಿ ವಿರುದ್ಧ ಟಿಎಂಸಿ ವಾಗ್ದಾಳಿ