Homeಅಂಕಣಗಳುಮಾತು ಮರೆತ ಭಾರತ; ಕರ್ನಾಟಕದಲ್ಲಿ ಅಸ್ಪೃಶ್ಯತೆ

ಮಾತು ಮರೆತ ಭಾರತ; ಕರ್ನಾಟಕದಲ್ಲಿ ಅಸ್ಪೃಶ್ಯತೆ

- Advertisement -
- Advertisement -

ಅಸ್ಪೃಶ್ಯತೆ ಕನ್ನಡನಾಡಿನ ಮಣ್ಣಿನ ಮೂಲಗುಣವಲ್ಲ. ಹಾಗೆ ನೋಡಿದರೆ ಮನುಷ್ಯರನ್ನು ವಿಭಜಿಸಿ ನೋಡುವ ಗುಣ ಭಾರತದ ಮೂಲವೂ ಅಲ್ಲ. ಅಸ್ಪೃಶ್ಯತೆಗೆ ಮೂಲ ಕಾರಣ ಆರ್ಯರು ಪ್ರಾಚೀನ ಭಾರತಕ್ಕೆ ಬಂದ ನಂತರದ ಬೆಳವಣಿಗೆ. ಈಗಾಗಲೇ ತಿಳಿದಂತೆ ಆರ್ಯರಲ್ಲಿದ್ದ ಬ್ರಾಹ್ಮಣ, ಕ್ಷತ್ರಿಯ ಮತ್ತು ವಿಶ್ ಎಂಬ ಮೂರು ವರ್ಣಗಳ ವ್ಯವಸ್ಥೆ ಸ್ಥಳೀಯ ಆದಿಯ ಭಾರತೀಯರೊಂದಿಗೆ ಸಮ್ಮಿಶ್ರ-ಸಂಘರ್ಷ ಹೊಂದಿ ಹೊಸ ಶೂದ್ರ ವರ್ಣ ಉಂಟಾಗಿ ರೂಪುಗೊಂಡ ಚಾತುರ್ವರ್ಣ ವ್ಯವಸ್ಥೆಯೇ ಜಾತಿಪದ್ಧತಿಯ ಮೂಲ. ಈ ಜಾತಿಪದ್ಧತಿಯೇ ಅಸ್ಪೃಶ್ಯತೆಯ ಮೂಲ. ಹಾಗಾಗಿ ಅಸ್ಪೃಶ್ಯತೆಯ ಮೂಲ ಚಾತುರ್ವರ್ಣ ಪದ್ಧತಿಯಲ್ಲಿದೆ. ಆದ್ದರಿಂದಲೇ ಅಸ್ಪೃಶ್ಯತೆಯ ಮೂಲ ಭಾರತಕ್ಕೆ ವಲಸೆ ಬಂದ ಆರ್ಯರಲ್ಲಿದೆ.

ಈ ಚಾತುರ್ವರ್ಣ ಸಿದ್ಧಾಂತವನ್ನು ಪಾಲಿಸುತ್ತಿದ್ದ ಆರ್ಯಜನರು ಕ್ರಿ.ಶ 1ರವರೆಗೂ ವಿಂಧ್ಯಾ ಪರ್ವತಗಳನ್ನು ದಾಟಿ ದಕ್ಷಿಣಕ್ಕೆ ಬಂದಿರಲಿಲ್ಲ. ಕ್ರಿ.ಪೂ 3ರಲ್ಲಿಯೇ ಉತ್ತರ ಭಾರತದ ಪಾಟಲಿಪುತ್ರವನ್ನು ಕೇಂದ್ರವಾಗಿಸಿಕೊಂಡು ರಾಜ್ಯಾಡಳಿತ ಮಾಡುತ್ತಿದ್ದ ಸಾಮ್ರಾಟ್ ಅಶೋಕ ಕರ್ನಾಟಕವನ್ನೂ ಸೇರಿದಂತೆ ದಕ್ಷಿಣ ಭಾರತಕ್ಕೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನಾದರೂ ಆತ ಚಾತುರ್ವರ್ಣ ಧರ್ಮದ ಪ್ರತಿಪಾದಕನಾಗಿರಲಿಲ್ಲ. ಅವನು ಪ್ರಚಾರ ಮಾಡಿದ್ದು ಚಾತುರ್ವರ್ಣ ವಿರೋಧಿ ಹಾಗೂ ಸಮತಾವಾದಿ ಬೌದ್ಧ ಧರ್ಮವನ್ನು. ಹಾಗಾಗಿ ಪುಶ್ಯಮಿತ್ರ ಶುಂಗನ ಕಾಲದ ನಂತರ ಮಧ್ಯಭಾರತವನ್ನು ಆಳಿದ ಶಾತವಾಹನರೇ ದಕ್ಷಿಣ ಭಾರತಕ್ಕೆ ಚಾತುರ್ವರ್ಣ ಧರ್ಮವನ್ನು ಪರಿಚಯಿಸಿದ ಮೊದಲಿಗರು ಎನ್ನಬಹುದು. ಇತಿಹಾಸಕಾರರಾದ ಡಿ.ಡಿ. ಕೊಸಾಂಬಿ ಹಾಗೂ ನೀಲಕಂಠಶಾಸ್ತ್ರಿಗಳು ಸಹ ಇದನ್ನು ಒಪ್ಪಿಕೊಳ್ಳುತ್ತಾರೆ.

ಸಾಂದರ್ಭಿಕ ಚಿತ್ರ

ಕ್ರಿ.ಶ 4ರ ನಂತರ ಗುಪ್ತರ ಕಾಲದಲ್ಲಿ ಚಾತುರ್ವರ್ಣ ಧರ್ಮ ಗಟ್ಟಿಗೊಂಡು ಊಳಿಗಮಾನ್ಯ ವ್ಯವಸ್ಥೆ ಆರಂಭವಾಯಿತು. ಸ್ವತಂತ್ರ ರಾಜ್ಯಗಳು ಉದಯಿಸಿ ಸಾಮಂತರಾಜರು ಉದಯಿಸಿದ ನಂತರ ಆರ್ಯವರ್ತದಿಂದ ದೇಶದ ವಿವಿಧ ಭಾಗಗಳಿಗೆ ಕೃಷಿ ವಿಸ್ತರಣೆಗಾಗಿ ಹೊರಟ ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು. ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಅಸ್ಪೃಶ್ಯತೆಯನ್ನು ಗಂಭೀರವಾಗಿ ಅಭ್ಯಾಸ ಮಾಡಿದ್ದ ಡಾ. ಎಂ. ಚಿದಾನಂದಮೂರ್ತಿಯವರು ತಮ್ಮ ಸುಪ್ರಸಿದ್ಧ ’ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ’ ಎಂಬ ಸಂಶೋಧನಾ ಗ್ರಂಥದಲ್ಲಿ ಕರ್ನಾಟಕಕ್ಕೆ ಅಸ್ಪೃಶ್ಯತೆ ಪರಿಚಯವಾದ ಹೆಜ್ಜೆಗುರುತುಗಳನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಲೇಖನದ ಬಹುತೇಕ ವಿಷಯಗಳು ಆ ಪುಸ್ತಕವನ್ನೇ ಅವಲಂಬಿಸಿದೆ.

ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ (ಕ್ರಿ.ಶ 850) ಚಾತುರ್ವರ್ಣ ಧರ್ಮವನ್ನು ಉಲ್ಲೇಖಿಸುತ್ತದೆ. ಆಶ್ಚರ್ಯವೆಂದರೆ ಇದು ವೈಶ್ಯರನ್ನು ಮೊದಲು ಪಟ್ಟಿ ಮಾಡಿ ತದನಂತರ ಬ್ರಾಹ್ಮಣ, ಕ್ಷತ್ರಿಯ, ಶೂದ್ರರನ್ನು ಪಟ್ಟಿ ಮಾಡುತ್ತದೆ. ಇದರ ಅರ್ಥ ಉತ್ತರದಿಂದ ಬಂದಂತಹ ಬ್ರಾಹ್ಮಣ ಪುರೋಹಿತರು ಇಲ್ಲಿನ ಪಶುಪಾಲಕರನ್ನು ಮತ್ತು ರೈತಾಪಿಗಳನ್ನು ಮೊದಲು ಚಾತುರ್ವರ್ಣಕ್ಕೆ ಸೇರಿಸಿಕೊಂಡರು ಎಂಬುವುದಾಗಿದೆ. 11ನೇ ಶತಮಾನದ ನಯಸೇನನ ಧರ್ಮಾಮೃತವು ’ಪೊಲೆಯನಂತೆ ವರ್ಣಕ್ಕೆ ಸಲ್ಲದು’ ಎಂದು ಚಾತುರ್ವರ್ಣದಿಂದ ಅಸ್ಪೃಶ್ಯರಾದ ಹೊಲೆಯ-ಮಾದಿಗರನ್ನು ಹೊರಗಿಡುತ್ತದೆ. ಹಾಗಾಗಿ ಭಾರತದಾದ್ಯಂತ ಇರುವಂತೆ ಕರ್ನಾಟಕದಲ್ಲಿಯೂ ಅಸ್ಪೃಶ್ಯರು ಚಾತುರ್ವರ್ಣ ಧರ್ಮದ ಹೊರಗಿನವರೇ ಆಗಿದ್ದಾರೆ. ಕರ್ನಾಟಕದ ಆರಂಭಿಕ ಸಾಹಿತ್ಯಕಾರರು ಚಾತುರ್ವರ್ಣದ ಮೊದಲಿಗರಾಗಿ ಬ್ರಾಹ್ಮಣರನ್ನು ಸ್ಥಾಪಿಸಲು ಹೆಣಗಾಡಿರುವುದು ಎದ್ದು ಕಾಣುತ್ತದೆ. ಪಂಚತಂತ್ರದ ದುರ್ಗ ಸಿಂಹನಿಂದ ಹಿಡಿದು ಬ್ರಹ್ಮಶಿವನವರೆಗೂ ಇದಕ್ಕೆ ಸಾಕ್ಷಿಗಳಿವೆ. ಹೊಲೆಯರನ್ನು ಸ್ಪರ್ಶಿಸುವ ಮಾತಿರಲಿ, ಅವರ ಹೆಸರು ಕಿವಿಗೆ ಬಿದ್ದರೂ ಬ್ರಾಹ್ಮಣರು ಮೈಲಿಗೆಯೆಂದು ಭಾವಿಸಿ ಉಣ್ಣುವುದನ್ನು ನಿಲ್ಲಿಸುತ್ತಾರೆ ಎಂದು ಬ್ರಹ್ಮಶಿವ ಹೇಳುತ್ತಾನೆ. ನಾಗವರ್ಮ, ರಾಘವಾಂಕರ ಕಾವ್ಯದಲ್ಲಿಯೂ ಚಂಡಾಲ ಕನ್ಯೆಯ ಚಿತ್ರಣ ಅಸ್ಪೃಶ್ಯತೆಯನ್ನೇ ಹೇಳುತ್ತದೆ. ಜೈನ ಭವಾವಳಿಯೂ ಇದಕ್ಕೆ ಹಿಂದೆ ಬಿದ್ದಿಲ್ಲ. ಮಾದಿಗ ಕುಲದಲ್ಲಿ ಹುಟ್ಟುವುದು ಘೋರ ಪಾಪಕರ್ಮದ ತುತ್ತತುದಿಯ ಫಲವೆಂದು ಹೇಳುತ್ತದೆ. ವಡ್ಡಾರಾಧನೆ, ಜನ್ನನ ಯಶೋಧರ ಚರಿತೆಯಲ್ಲಿಯೂ ಪಾಪಕರ್ಮಗಳಿಗಾಗಿ ಹೆತ್ತಬಹುದಾದ ಕೊನೆಯ ಜನ್ಮ ಅಸ್ಪೃಶ್ಯರಾಗಿಯೇ. ಹೀಗೆ ಕ್ರಿ.ಶ. 8ರಷ್ಟೊತ್ತಿಗೆ ಚಾತುರ್ವರ್ಣ ಧರ್ಮದ ಪ್ರತಿಪಾದಕರು ಕರ್ನಾಟಕದಲ್ಲಿ ಅಸ್ಪೃಶ್ಯತೆಯನ್ನು ಜಾರಿಗೊಳಿಸಿದ್ದರ ಬಗ್ಗೆ ಕನ್ನಡದ ಸಾಹಿತ್ಯ ಪ್ರಕಾರವು ಮಾಹಿತಿ ನೀಡುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕರ್ನಾಟಕದ ಪ್ರಾಚೀನ ಶಾಸನಗಳಲ್ಲಿ ಹೊಲೆಯ, ಮಾದಿಗರ ಬಗ್ಗೆ ಉಲ್ಲೇಖಗಳಿವೆ. ಅವರು ದೇಗುಲಗಳಿಗೆ ದಾನ ಮಾಡಿದ್ದರ ಬಗ್ಗೆಯೂ ಉಲ್ಲೇಖಗಳಿವೆ ಹಾಗೂ ಹೊಲೆಗೇರಿ ಅಥವಾ ಮಾದಿಗಕೇರಿಯ ಮುಖ್ಯಸ್ಥರಾಗಿ ಇದ್ದದ್ದಕ್ಕೂ ಸಾಕ್ಷಿಗಳಿವೆ. ಇತ್ತೀಚೆಗೆ ದಲಿತ ರಾಜ ಕುರಂಗರಾಜನ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಈ ಅಸ್ಪೃಶ್ಯರು ’ತೆರಿಗೆ’ಯನ್ನೂ ನೀಡುತ್ತಿದ್ದರ ಬಗ್ಗೆ ಪ್ರಸ್ತಾಪಗಳಿವೆ. ಇವುಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಲು ಮತ್ತಷ್ಟು ಇಂತಹ ಶಾಸನಗಳು ದೊರಕಬೇಕಿದೆ ಹಾಗೂ ದೊರಕಿರುವ ಶಾಸನಗಳನ್ನು ಅಸ್ಪೃಶ್ಯರಿಗೆ ಸಂಬಂಧಿಸಿದಂತೆ ಸಂಶೋಧಿಸಬೇಕಿದೆ. ಮತ್ತೊಂದು ಕಡೆಯಲ್ಲಿ ಹೊಲೆಯ-ಮಾದಿಗರನ್ನು ಜೀತಗಾರರಂತೆ ಬಿಂಬಿಸಿರುವ ಹಲವು ಶಾಸನಗಳೂ ದೊರಕುತ್ತವೆ. ಇವರನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರ ಬಗ್ಗೆಯೂ ಉಲ್ಲೇಖಗಳಿವೆ. ಇದನ್ನು ಹೊರತುಪಡಿಸಿ ಅಸ್ಪೃಶ್ಯರನ್ನು ಸ್ವಚ್ಛಕಾರರಾಗಿ, ಮಾಂಸ ಮಾರಾಟಗಾರರಾಗಿ, ಮರಣದಂಡನೆಯನ್ನು ಜಾರಿಗೊಳಿಸುವವರಾಗಿ, ತಮಟೆ ವಾದ್ಯಗಳ ಕಲಾಕಾರರಾಗಿ, ಜೀತಗಾರರಾಗಿ ಚಿತ್ರಿಸಿರುವ ಹಲವು ದಾಖಲೆಗಳು ದೊರಕುತ್ತವೆ. ಮಠಗಳೂ ಸಹ ಹೊಲೆಯರನ್ನು ಮಾರಾಟ ಮಾಡುತ್ತಿದ್ದರ ಬಗ್ಗೆಯೂ ದಾಖಲೆಗಳಿವೆ.

12ನೇ ಶತಮಾನದಷ್ಟೊತ್ತಿಗೆ ವಚನ ಚಳವಳಿಯು ಈ ಅಸ್ಪೃಶ್ಯತೆಯನ್ನು ಖಂಡಿಸಿದ್ದಲ್ಲದೇ ಚಾತುರ್ವರ್ಣ ಧರ್ಮವನ್ನು ವಿರೋಧಿಸಿದ್ದರ ಫಲವಾಗಿ ಅಲ್ಲಿಯೂ ಅಸ್ಪೃಶ್ಯತೆಗೆ ಸಂಬಂಧಪಟ್ಟಂತಹ ಹಲವು ವಿಚಾರಗಳನ್ನು ನೋಡಬಹುದಾಗಿದೆ. ಸುಮಾರು 7ನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಹದಿನೆಂಟು ಜಾತಿಗಳಿವೆ ಎಂಬ ಉಲ್ಲೇಖಗಳಿವೆ. ಜಾತಿಯನ್ನು ’ಪ್ರಕೃತಿ’ ’ವರ್ಣ ’ಜಾತಿ’ ’ಕುಲ’ದ ಹೆಸರಿನಲ್ಲಿ ಬಳಸಲಾಗಿದೆ. ಬ್ರಾಹ್ಮಣ-ಮುಖ, ಕ್ಷತ್ರಿಯ-ಭುಜ, ವೈಶ್ಯ-ತೊಡೆ ಮತ್ತು ಶೂದ್ರ-ಪಾದ ಹೀಗೆ ಆಯಾ ವರ್ಣದ ಹುಟ್ಟನ್ನು ವಿವರಿಸುವ ಬ್ರಾಹ್ಮಣತ್ವದ ವಿರುದ್ಧವಾಗಿ ಒಬ್ಬನೇ ಮನುಷ್ಯರಲ್ಲಿ ಹದಿನೆಂಟು ಜಾತಿಗಳೂ ಅಡಗಿರುವಾಗ ಯಾರು ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ ಎಂದು ಅಮ್ಮದೇವ, ಸೊಡ್ಡಳ ಬಾಚರಸ, ಅಂಬಿಗರ ಚೌಡಯ್ಯ ಮುಂತಾದವರು ವಿವರಿಸುತ್ತಾರಲ್ಲದೇ ಹದಿನೆಂಟು ಜಾತಿಗಳಿಗೂ ಮಾನವರ ದೇಹದ ಒಂದೊಂದು ಅಂಗವನ್ನು ಸಮೀಕರಿಸಿದ್ದಾರೆ. ಹೊಲೆಯ, ಸಮಗಾರ ಹಾಗೂ ಶುದ್ಧ ಮಾದಿಗರನ್ನು ಉಲ್ಲೇಖಿಸುತ್ತಾರೆ. ಜೊತೆಗೆ ಅಲೆಮಾರಿಗಳಾದ ಬೈಲಗಂಬಾರರನ್ನೂ ಹೆಸರಿಸುತ್ತಾರೆ. ಕ್ರಿ.ಶ 12ನೇ ಶತಮಾನದಿಂದ ಕರ್ನಾಟಕದಲ್ಲಿ ಹೆಚ್ಚು ಬ್ರಾಹ್ಮಣ, ಶೂದ್ರ ಹಾಗೂ ಅಸ್ಪೃಶ್ಯರ ಬಗ್ಗೆ ಉಲ್ಲೇಖಗಳಾಗುತ್ತವೆಯೇ ಹೊರತು ಕ್ಷತ್ರಿಯ ಮತ್ತು ವೈಶ್ಯ ವರ್ಣಗಳು ಕ್ರಮೇಣ ನಶಿಸಿಹೋಗುತ್ತವೆ. ಇದು ದಕ್ಷಿಣ ಭಾರತದ ಶೂದ್ರ-ಅಸ್ಪೃಶ್ಯ ಜಾತಿಗಳು ಕ್ಷತ್ರಿಯ ಹಾಗೂ ವೈಶ್ಯ ವರ್ಣಕ್ಕೆ ಸ್ಥಾನಾಂತರವಾದ ವಿದ್ಯಮಾನವನ್ನು ತಿಳಿಸುತ್ತದೆ.

ಕನ್ನಡದ ವಚನಕಾರರೆಲ್ಲರೂ ಬಹುತೇಕವಾಗಿ ಬ್ರಾಹ್ಮಣರು ಹಾಗೂ ಅಸ್ಪೃಶ್ಯರು ಒಂದೇ ಎಂಬ ಭಾವನೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಜೇಡರ ದಾಸಿಮಯ್ಯನ ಪ್ರಕಾರ ಜನಿವಾರ ಹಾಕಿರುವ ಬ್ರಾಹ್ಮಣ ಹಾಗೂ ಸಂಬಳಿಗೋಲು ಹಿಡಿದಿರುವ ಅಸ್ಪೃಶ್ಯನೂ ಒಂದೇ. ಸಂಗಮೇಶ್ವರ ಅಪ್ಪಣ್ಣನ ಅಭಿಪ್ರಾಯದಲ್ಲಿ ಭಕ್ತನಾದ ಹೊಲೆಯ ಬ್ರಾಹ್ಮಣನಿಗಿಂತಲೂ ಶ್ರೇಷ್ಠ. ಶಿವನೇ ಹೊಲೆಯ-ಮಾದಿಗರಾಗಿ ವೇಷಧರಿಸಿ ಪ್ರತ್ಯಕ್ಷನಾಗಿಬಿಡುತ್ತಾನೆ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಕಾಳೆವ್ವೆ, ಹರಳಯ್ಯ ಮುಂತಾದ ಅಸ್ಪೃಶ್ಯರು ವಚನಕಾರರೇ ಆಗಿದ್ದರು. ಕಾಳೆವ್ವೆಯ ಒಂದು ವಚನ ಅಸ್ಪೃಶ್ಯರಲ್ಲಿದ್ದ ಅನುಭವಜನ್ಯ ಪ್ರತಿಭೆಯನ್ನು ಹಾಗೂ ವ್ಯವಸ್ಥೆಯ ವಿರುದ್ಧವಿದ್ದ ಅಸಮಾಧಾನವನ್ನು ಹೊರಹಾಕುತ್ತದೆ. ಆ ವಚನ ಹೀಗಿದೆ.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ
ಕುಲಜ ಕುಲಜರೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ
ಮಾದಿಗ ಕೀಳು ಜಾತಿಯೆಂಬರು
ಅವರೆಂತು ಕೀಳು ಜಾತಿಯಾದರು?
ಜಾತಿಗಳು ನಿಮಗೇಕೆ ಕೀಳಾದಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು
ಮಾದಿಗರುಂಡುದು ಪುಲ್ಲಿಗೆ
ಬ್ರಾಹ್ಮಣಗೆ ಶೋಭಿತವಾಯಿತು
ಅದೆಂತೆಂದಡೆ ಸಿದ್ದಲಿಕೆಯಾಯಿತು, ಸಗ್ಗಳಿಕೆಯಾಯಿತು
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ
ನಾಯಕ ನರಕ ತಪ್ಪದಯ್ಯಾ
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ

ಈ ಕಾಲಘಟ್ಟದಲ್ಲಿಯೇ ನಾಥಸಿದ್ಧರು, ಭಕ್ತಿ ಚಳವಳಿ, ಆಳ್ವಾರರು, ನಾಯನರ್ ಹೀಗೆ ಹಲವು ಪಂಥಗಳು ಚಾತುರ್ವರ್ಣ ಧರ್ಮವನ್ನು ಹಾಗೂ ಜಾತಿಪದ್ಧತಿಯನ್ನು ಧಿಕ್ಕರಿಸಿ ಅಸ್ಪೃಶ್ಯರಿಗೆ ದೀಕ್ಷೆ ನೀಡಿದ ಮಾನವೀಯ ಘಟನೆಗಳೂ ಕರ್ನಾಟಕದಲ್ಲಿ ಜರುಗಿವೆ.

ಕುತೂಹಲಕಾರಿಯೆಂದರೆ ಒಂದು ಕಾಲಕ್ಕೆ ಹೊಲೆಯರ ಕೇರಿಗೆ ಬ್ರಾಹ್ಮಣರ ನಿಷೇಧವಿತ್ತು. ಬ್ರಾಹ್ಮಣರು ತಮ್ಮ ಕೇರಿ ಪ್ರವೇಶಿಸಿದರೆ ಹಾಸನದ ಹೊಲೆಯರು ಸೆಗಣಿಯಲ್ಲಿ ಹೊಡೆಯುತ್ತಿದ್ದ ಬಗ್ಗೆ ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ತಮಿಳುನಾಡಿನಲ್ಲಿಯೂ ಇಂತಹುದೇ ಘಟನೆ ದಾಖಲಾಗಿದೆ. ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ.

ಒಟ್ಟಾರೆ ಕರ್ನಾಟಕದಲ್ಲಿಯೂ ಅಸ್ಪೃಶ್ಯತೆಯು ತನ್ನ ಕರಾಳಮುಖವನ್ನು ಹೊಂದಿತ್ತು ಹಾಗೂ ಈಗಲೂ ಹೊಂದಿದೆ. ಆಶ್ಚರ್ಯವೆಂದರೆ ವಚನ ಚಳವಳಿಯು ಅಸ್ಪೃಶ್ಯತೆಯನ್ನು ಖಂಡಿಸಿ ಅಸ್ಪೃಶ್ಯರನ್ನು ಗುರುಸ್ಥಾನಕ್ಕೂ ಸಮೀಕರಿಸಿ ಅಸ್ಪೃಶ್ಯತೆಯನ್ನು ಆಚರಿಸುವ ಬ್ರಾಹ್ಮಣಾದಿ ಸಕಲ ಜಾತಿಗಳಿಗೂ ಕಿವಿ ಹಿಂಡಿ ಮಾನವೀಯತೆಯನ್ನು ಮೆರೆದಿದೆ. ಇದರ ಪ್ರಭಾವದಲ್ಲಿ ಸ್ಥಾಪಿತವಾದ ಲಿಂಗಾಯತ ಧರ್ಮ ಇಂದು ತನ್ನ ಒಡಲಲ್ಲಿ ಜಾತೀಯತೆಯನ್ನು ತುಂಬಿಕೊಂಡು ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದು ದುರಂತ. ಇದೇ ಮಾತು ನಾಥಪಂಥವನ್ನು ಪಾಲಿಸುವ ಒಕ್ಕಲಿಗರಿಗೂ ಅನ್ವಯಿಸುತ್ತದೆ. ಕನಕದಾಸರನ್ನು ಅನುಸರಿಸುವ ಕುರುಬರಿಗೂ ಅನ್ವಯಿಸುತ್ತದೆ. ಜೈನರು ಮತ್ತು ಬ್ರಾಹ್ಮಣರಿಗೂ ಅನ್ವಯಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಮಾತು ಮರೆತ ಭಾರತ; 18-19 ನೇ ಶತಮಾನದ ಭಾರತದಲ್ಲಿನ ಅಸ್ಪೃಶ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹಲವು ಹೇಳಿಕೆಗಳಿಗೆ ಸೂಕ್ತ ಉಲ್ಲೇಖಗಳನ್ನು (ರೆಫೆರೆನ್ಸ್) ಕೊಟ್ಟಿದ್ದರೆ ಸ್ಪಷ್ಠವಾಗುತ್ತಿತ್ತು. ಉದಾಹರಣೆಗೆ
    “ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ” ಇದು ಎಲ್ಲಿ ಹೇಳಿದೆ?
    ಮಹಾಭಾರತದಲ್ಲಿ ಕರ್ಣನು ಶಲ್ಯನನ್ನು ಹೀಯಾಳಿಸುವಾಗ ಮಾದ್ರಕರ ಹೆಂಗಸರ ಬಗ್ಗೆ ಕೀಳಾಗಿ ವರ್ಣಿಸುತ್ತಾನೆ. ಆದರೆ ಅಲ್ಲಿ ಅಸ್ಪೃಶ್ಯತೆಯ ಪ್ರಸ್ತಾಪವಿಲ್ಲ. ಮಾದ್ರಕ – ಮಾದ್ರ ರಾಜ್ಯ – ಮಾದ್ರಿ – ಅವಳ ಅಣ್ಣ ಶಲ್ಯ. ಭೀಷ್ಮ ಮಾದ್ರ ರಾಜ್ಯಕ್ಕೆ ಹೋಗಿ ಮಾದ್ರಿಯನ್ನು ಪಾಂಡುವಿಗೆ ವಧುವಾಗಲು ಕೋರಿದಾಗ ಶಲ್ಯ ‘ಪಾಣಿಗ್ರಹಣ ತಮ್ಮಲ್ಲಿಲ್ಲ ‘ತೆರ’ ಕೊಟ್ಟು ಕರೆದುಕೊಂಡು ಹೋಗು ‘ ಎಂದಾಗ ಭೀಷ್ಮ ಹಣ, ಚಿನ್ನ, ಆನೆ, ಕುದುರೆ ಇತ್ಯಾದಿ ಕೊಟ್ಟು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಮಾದ್ರಕರು ಮಾದರುಗಳಾದರೆ (ಕರ್ಣನ ಹೀಯಾಳಿಕೆ ಅರ್ಥೈಸಿ) ಭೀಷ್ಮ ಪಾಂಡುವಿಗೆ ಮಾದ್ರಿಯನ್ನು ಮದುವೆಯಾಗಿಸಿದ ಅಂದರೆ ಅಲ್ಲಿ ವರ್ಣ ಸಂಕರ ಇರಲಿಲ್ಲ ಎಂದರ್ಥವೇ? ಉತ್ತರದಲ್ಲಿ ಮಹಾಭಾರತದ ಕಾಲಕ್ಕೆ (ಆಗಿನ ಆರ್ಯರ ಪದ್ಧತಿಯಂತೆ) ಅಸ್ಪೃಶ್ಯತೆ ಇರಲಿಲ್ಲ ಅಂದರೆ ಅಲ್ಲಿಂದ ದಕ್ಷಿಣಕ್ಕೆ ಬಂದ “ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು” ಎನ್ನುವುದನ್ನು ಹೇಗೆ ಅರ್ಥೈಸುವಲ್ಲಿ ಸ್ವಲ್ಪ ಗೊಂದಲ ಇದೆ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...