HomeUncategorizedಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

ಜನಸಾಮಾನ್ಯರ ನೋವಿನ ಹಾಡುಗಳಲ್ಲಿ ಲೀನವಾದ ಗದ್ದರ್

- Advertisement -
- Advertisement -

ಗದ್ದರ್ ಇನ್ನಿಲ್ಲ ಎಂದು ಪತ್ರಿಕೆಗಳಲ್ಲಿ-ಟಿವಿಗಳಲ್ಲಿ ಹೇಳ್ತಿದ್ದಾರೆ. ಆದರೆ ಅವರ ಹಾಡುಗಳು ಅದನ್ನು ಸುಳ್ಳು ಮಾಡುತ್ತವೆ. ಈ ನೆಲದಲ್ಲಿ ತಮ್ಮ ಸಹಜೀವಿಗಳಿಗಾಗಿ ಅವರ ಹಕ್ಕುಗಳಿಗಾಗಿ ಹೋರಾಡಿ ಹುತಾತ್ಮರಾದ ಎಷ್ಟೋ ಜನರನ್ನು ಅವರ ಹಾಡುಗಳು ಅಮರರನ್ನಾಗಿಸಿವೆ. ಜೀವನ ಪೂರ್ತಿ ಹಾಡಿ, ತಾನೇ ಹಾಡಾದ ಆ ಸ್ವರ ಗದ್ದರ್; ಜನರ ಕ್ರಾಂತಿ ಬಯಸುವ ಯಾರಿಗೇ ಆದರೂ ಗದ್ದರ್ ಸತ್ತಿಲ್ಲ ಎಂದೇ ಅನಿಸುತ್ತದೆ.

ಕಾರ್ಮಿಕರ ದಿನಗೂಲಿ ಹೆಚ್ಚಿಸಿ ಎಂದು ಕರ್ನಾಟಕದಲ್ಲಿ ಹೋರಾಟ ಕಟ್ಟಿದ ಪಾರ್ವತಿ ಹಾಜಿಮಾರನ್ನು ಕೊಂದ ಸಂದರ್ಭದಲ್ಲಿ ಮೆಣಸಿನ ಹಾಡ್ಯಕ್ಕೆ ಬಂದ ಗದ್ದರ್ ಅಲ್ಲಿಯೇ ಅವರಿಬ್ಬರ ತ್ಯಾಗವನ್ನು ಹಾಡು ಕಟ್ಟಿ ಹಾಡಿ ಅಮರರನ್ನಾಗಿಸಿದ್ದು ಈ ತಕ್ಷಣಕ್ಕೆ ನೆನಪಾಗುತ್ತಿದೆ.

ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಸಿ, ನಕ್ಸಲ್ ಹೋರಾಟದಲ್ಲಿ ಆಸಕ್ತಿ ತಳೆದಿದ್ದ ಅವರು ಹಿರಿಯ ಹೋರಾಟಗಾರ ಕೊಂಡಪ್ಪಲ್ಲಿ ಸೀತರಾಮಯ್ಯನವರಿಂದ ಪ್ರಭಾವಿತರಾಗಿ ಚಳವಳಿಗೆ ಧುಮುಕಿದರು. ಗದ್ದರ್‌ರವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ತಂದೆ ಗುಮ್ಮಡಿ ಶೇಷಯ್ಯ, ತಾಯಿ ಲಚ್ಚುಮ್ಮಮ್ಮ.

ಗದ್ದರ್ ಒಬ್ಬ ಅಸಾಮಾನ್ಯ ಕಲಾವಿದರಾಗಿದ್ದರು. ತಮ್ಮೊಳಿಗಿನ ಆ ಕಲಾಪ್ರತಿಭೆಯನ್ನು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಬಳಸಿದ್ದರು. ತಮ್ಮ ಹಾಡುಗಳ ಮೂಲಕವೇ ಕೋಟ್ಯಾಂತರ ಜನರ ಗಮನ ಸೆಳೆದವರು ಗದ್ದರ್. ವೇದಿಕೆಯಲ್ಲಿ ಗದ್ದರ್‌ರವರು ಜನರ ಭಾಷೆಯಲ್ಲಿ, ಜಾನಪದ ಶೈಲಿಯಲ್ಲಿ, ಹಾಡುತ್ತಾ-ಕುಣಿಯುತ್ತ ಅಬ್ಬರಿಸುತ್ತಿದ್ದರೆ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆಯುತ್ತಿದ್ದರು. ಅನ್ಯಾಯ ನಡೆದ ಸ್ಥಳದಲ್ಲಿಯೇ ಹಾಡು ಕಟ್ಟಿ ತಮ್ಮದೇ ಟ್ಯೂನ್ ಹಾಕಿ ಹಾಡುತ್ತಿದ್ದರು. ತೆಲಂಗಾಣದ ಸ್ವರ ಅವರದ್ದಾಗಿತ್ತು.

ಆಂಧ್ರ ಪ್ರದೇಶದಲ್ಲಿ ಜನನಾಟ್ಯ ಮಂಡಳಿಯೆಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿದ್ದ ಗದ್ದರ್ ಆ ಮೂಲಕ ನಕ್ಸಲ್ ಚಳವಳಿಯ ಸಿದ್ಧಾಂತವನ್ನು ಪ್ರಚಾರ ಮಾಡಿದರು. ಅದಕ್ಕಾಗಿ ಅವರು 8 ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಪೊಲೀಸರು ಹಲವಾರು ಬಾರಿ ಅವರ ಮೇಲೆ ದಾಳಿ ನಡೆಸಿದ್ದರು. ಒಂದು ಗುಂಡು ಅವರ ದೇಹವೊಕ್ಕಿತ್ತು. ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.

ಗದ್ದರ್ ಅವರಿಗೆ ಮೀನು ಎಂದರೆ ಪಂಚಪ್ರಾಣ. ಅವರಿಗೆ ಮೂವರು ಮಕ್ಕಳಿದ್ದರು. ಸೂರ್ಯ, ಚಂದ್ರ ಮತ್ತು ವೆನೆಲ್ಲ (ಬೆಳದಿಂಗಳು) ಎಂಬ ಹೆಸರಿಟ್ಟಿದ್ದರು. ಮಕ್ಕಳು ತಮ್ಮಂತೆಯೇ ಹೋರಾಟದಲ್ಲಿ ತೊಡಗಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು.

ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕು. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂದು ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಮನಸ್ಥಿತಿ ನಿರ್ಮಾಣವಾಗುವುದೇ ತನ್ನ ಹೋರಾಟಕ್ಕೆ ಸಿಕ್ಕುವ ಅಂತಿಮ ಫಲಶ್ರುತಿ ಎಂದು ಅವರು ನಂಬಿದ್ದರು.

1975ರಲ್ಲಿ ಮೊದಲ ಬಾರಿಗೆ ನಾನು ಗದ್ದರ್‌ರವರನ್ನು ಭೇಟಿ ಮಾಡಿದೆ. ಆನಂತರ ಎಷ್ಟೋ ಬಾರಿ ಅವರೊಟ್ಟಿಗೆ ಚರ್ಚೆ ನಡೆಸಿದ್ದಿದೆ. ಬಾಬಾಬುಡನ್ ಗಿರಿ ಸೌಹಾರ್ದ ಹೋರಾಟಕ್ಕೆ ಗದ್ದರ್ ಕರ್ನಾಟಕಕ್ಕೆ ಬಂದಿದ್ದರು. ಗೌರಿ ಲಂಕೇಶ್ ಅವರನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಒಮ್ಮೆ ಗದ್ದರ್ ಅವರಿಗೆ ಕರ್ನಾಟಕದಲ್ಲಿ ದೊರೆತ ಪ್ರಶಸ್ತಿ ಮೊತ್ತ 1 ಲಕ್ಷ ರೂಗಳನ್ನು ಕರ್ನಾಟಕದ ಚಳವಳಿಗೆ ಬಳಸಿಕೊಳ್ಳಿ ಎಂದು ಕೊಟ್ಟು ಹೋಗಿದ್ದರು. ನಾನು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಅವರನ್ನು ಬೆಂಗಳೂರು ವಿವಿಗೆ ಕರೆಸಿದ್ದೆ. ಅವರ ಹಾಡು-ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಪುಳಕಿತರಾಗಿದ್ದರು.

ಇದನ್ನೂ ಓದಿ: ’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

ದಲಿತರು ದಮನಿತರ ಮೇಲಿನ ಹಲ್ಲೆ ದೌರ್ಜನ್ಯಗಳನ್ನು ಕಟು ಪದಗಳಲ್ಲಿ ಟೀಕಿಸಿ ಹಾಡು ಬರೆದು ಹಾಡುತ್ತಿದ್ದರು. ಆ ಕೆಚ್ಚು ಅವರಲ್ಲಿತ್ತು, ರಾಗ ಅವರದ್ದೇ ಆಗಿರುತ್ತಿತ್ತು. ಜೀವನದುದ್ದಕ್ಕೂ ಜನರನ್ನು ಎಚ್ಚರಗೊಳಿಸುವುದಕ್ಕೆ ತಮ್ಮ ಪ್ರತಿಭೆಯನ್ನು ಬಳಸಿದರು. ತಮ್ಮ ಹಾಡಿನ ಮೂಲಕ ಅವರು ಜನರಿಗೆ ಮುಟ್ಟಿಸಿದ ವಿಚಾರಗಳನ್ನು ನೂರಾರು ಭಾಷಣ-ಬರಹಗಳಿಂದಲೂ ಮುಟ್ಟಿಸಲು ಸಾಧ್ಯವಿಲ್ಲ ಎನ್ನುವಮಟ್ಟಿಗೆ ಅವರ ಹಾಡುಗಳು ಖ್ಯಾತಿ ಗಳಿಸಿದ್ದವು.

ಖಾಸಗಿ ಆಸ್ತಿ ಮಾಡಬಾರದೆನ್ನುವ ಪಕ್ಷದ ತೀರ್ಮಾನ ಅವರಿಗೆ ಹಿಡಿಸಿರಲಿಲ್ಲ. ಹಾಗಾಗಿ ಹೊರಬಂದು ಕೊನೆಗಾಲಕ್ಕೆ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಂಡಿದ್ದರು. ಸತ್ಯಂ ಎನ್ನುವ ಅವರ ಅಕ್ಕನ ಮಗ ಅವರನ್ನು ನೋಡಿಕೊಳ್ಳುತ್ತಿದ್ದರು.

8 ತಿಂಗಳ ಹಿಂದೆ ಅವರನ್ನು ನೋಡಲು ಹೈದರಾಬಾದ್‌ನ ಅವರ ಮನೆಗೆ ಹೋಗಿದ್ದೆ. ಅವರು ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದು ಹೀಗೆ: “ನಾನು ಹೋರಾಟದ ಹಾದಿ ಬಿಟ್ಟಿದ್ದೇನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಾನು ಕ್ರಾಂತಿಯ ಧ್ಯೇಯವನ್ನು ಕೈಬಿಟ್ಟಿಲ್ಲ. ನಾನು ಕಲಾವಿದ. ಹಗ್ಗದ ಮೇಲೆ ನಡೆಯುತ್ತಿದ್ದೇನೆ. ಜನ ನನ್ನನ್ನು ನೋಡಿ ಬೀಳುತ್ತಿದ್ದಾನೆ ಅಂದುಕೊಳ್ಳುತ್ತಿರಬಹುದು. ಆದರೆ ಆ ಕಡೆ ಈ ಕಡೆ ವಾಲುತ್ತಿದ್ದೇನೆ, ಬ್ಯಾಲೆನ್ಸ್ ಮಾಡುತ್ತಿದ್ದೇನೆಯೇ ಹೊರತು ಬೀಳುವುದಿಲ್ಲ.. ಕೊನೆಗೆ ನಾನು ಅದೇ ಝಂಡ ಹಿಡಿಯುತ್ತೇನೆ ನೋಡುತ್ತಿರಿ” ಎಂದಿದ್ದರು. ’ನಗರಿ ಬಾಬಯ್ಯನವರ ತಮ್ಮ ಗದ್ದರ್’ ಎಂದು ಕರ್ನಾಟಕ ಪೊಲೀಸ್ ದಾಖಲೆಯಲ್ಲಿ ಬರೆದಿದ್ದಾರೆ. ಅಷ್ಟರಮಟ್ಟಿಗೆ ಅವರಿಗೂ ನನಗೂ ಸಂಬಂಧವಿತ್ತು.

ಕಾರಂಚೇಡು ಘಟನೆಗಳ ನಂತರ ಜಾತಿ ಪದ್ಧತಿಯಿಂದ ರೋಸಿಹೋಗಿದ್ದ ಗದ್ದರ್‌ರವರು ಬೌದ್ಧ ಧರ್ಮವನ್ನು ಅಪ್ಪಿಕೊಂಡಿದ್ದರು. ಆ ಆಚರಣೆಯಂತೆಯೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಪಂಚದ ನಾಲ್ಕನೇ ಮೂರರಷ್ಟು ಜನರು ಇಂದಿಗೂ ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಪರಿಸ್ಥಿತಿ ಬದಲಾಗಲಿಲ್ಲ. ಅವು ಅಧಿಕಾರಕ್ಕೆ ಹವಣಿಸುತ್ತವೆಯೇ ಹೊರತು ಜನರ ನಿಜವಾದ ಕಷ್ಟಗಳನ್ನು ಅರಿಯುವ ಯತ್ನ ಮಾಡುತ್ತಿಲ್ಲ ಅನ್ನುವ ಕೊರಗು ಗದ್ದರ್‌ರವರಿಗೆ ಕೊನೆಯವರೆಗೂ ಇತ್ತು. ಈಗ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಡುಗಳ ಮೂಲಕ ಎಂದೆಂದಿಗೂ ಜೀವಂತವಿದ್ದಾರೆ. ಅವರ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

– ನಗರಿ ಬಾಬಯ್ಯ

ಗದ್ದರ್ ಅವರ ಒಂದು ಹಾಡು..

ಮಲ್ಲಿಗೆ ಬಳ್ಳಿಗೆ ಚಪ್ಪರದಂತೆ ಮಬ್ಬುಕತ್ತಲಲ್ಲಿ ಬೆಳದಿಂಗಳಂತೆ
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..
ನಿನ್ನ ಪಾದದ ಮೇಲೆ ಪುಟ್ಟಮಚ್ಚೆಯಂತೆ ತಂಗ್ಯಮ್ಮಾ..
ಒಡಹುಟ್ಟಿದ ಋಣ ತೀರಿಸಿಕೊಳ್ಳುವೆ ತಂಗ್ಯಮ್ಮಾ..

ಮುಳ್ಳಬಳ್ಳಿಯಮ್ಮ ಬೇಲಿಯ ಮೇಲೆ ಸೀರೆ ಹಾಕಿದರೆ ಬರಲೆ ಇಲ್ಲಮ್ಮ
ಹೆಣ್ಣುಮಗುವನ್ನು ರೆಪ್ಪೆ ರೆಪ್ಪೆ ತೆಗೆದು ನೋಡಿದರೆ ತಪ್ಪಮ್ಮಾ
ದೊಡ್ಡವಳಾಗಿ ಅರಳಿದಾಗ ಹೆಣ್ಣಿನ ಮೇಲಿನ ಬಯಕೆಗಳೆಷ್ಟೋ
ನೋಡುವುದನ್ನು ನೋಡಬೇಡೆನ್ನುವರು ನಗುವ ಕಡೆ ನಗಬೇಡೆನ್ನುವರು
ಆ ರೀತಿಯ ಅಣ್ಣನು ನಾನಲ್ಲ ತಂಗ್ಯಮ್ಮಾ.

ನಿನ್ನ ಬಾಲ್ಯದ ಸ್ನೇಹಿತನು ನಾನು ತಂಗ್ಯಮ್ಮಾ॒॒
ಅಡವಿಯಲ್ಲಿನ ನವಿಲಿನಂತೆ ತಂಗ್ಯಮ್ಮಾ.
ಆಟ ಆಡುನೀ ಹಾಡನ್ನೂ ಹಾಡು ನೀ ತಂಗ್ಯಮ್ಮಾ
ಗದ್ದರ್ ಹಾಡು

ಕನ್ನಡಕ್ಕೆ: ಅನಿಲ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...