ಕ್ಯಾನ್ಸರ್ನಿಂದ ಬಳಲುತ್ತಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ರಶೀದ್ ಖಾನ್ ಮಂಗಳವಾರ ಮಧ್ಯಾಹ್ನ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ತಿಳಿಸಿದ್ದಾರೆ. ಅವರಿಗೆ ಕೇವಲ 55 ವರ್ಷ ವಯಸ್ಸಾಗಿತ್ತು.
ಉಸ್ತಾದ್ ರಶೀದ್ ಖಾನ್ ಉತ್ತರ ಪ್ರದೇಶದ ಬಡಾಯುನ್ನಲ್ಲಿ ಜನಿಸಿದರು. ಅವರ ತಾಯಿಯ ಅಜ್ಜ ಉಸ್ತಾದ್ ನಿಸ್ಸಾರ್ ಹುಸೇನ್ ಖಾನ್ ಅವರಿಂದ ಆರಂಭಿಕ ಸಂಗೀತ ತರಬೇತಿ ಪಡೆದರು. ಉಸ್ತಾದ್ ಖಾನ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
‘ಇದು ತುಂಬಾ ದುರದೃಷ್ಟಕರ. ಅವರು ಕೇವಲ 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದು ದೇಶಕ್ಕೆ ಮತ್ತು ನಮಗೆಲ್ಲರಿಗೂ ದೊಡ್ಡ ನಷ್ಟವಾಗಿದೆ. ನನ್ನ ಸಹೋದರನಂತೆ ಇದ್ದ ಅವರು, ನನ್ನನ್ನು ‘ತಾಯಿ’ ಎಂದು ಕರೆಯುತ್ತಿದ್ದರು’ ಎಂದು ಬ್ಯಾನರ್ಜಿ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Deeply saddened by the tragic demise of Ustad Rashid Khan, one of the greatest exponents of Indian classical music of our times.
A hugely respected vocalist with unparalleled genius in creating music, he made us proud by settling here and making Bengal his home. He and Soma,…
— Mamata Banerjee (@MamataOfficial) January 9, 2024
ಖಾನ್ ಅವರು ಕಳೆದ ವರ್ಷ ನವೆಂಬರ್ 22ರಂದು ಪೂರ್ವ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಇಂಟ್ರಾಸೆರೆಬ್ರಲ್ ಹೆಮರೇಜ್ಗೆ ಒಳಗಾಗಿದ್ದರು.
ನರಶಸ್ತ್ರಚಿಕಿತ್ಸಕರ ತಂಡವು ಅವರನ್ನು ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಇರಿಸಲು ನಿರ್ಧರಿಸಿತು. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದರು. ಆದರೆ ಇಷ್ಟು ದಿನ ಆಸ್ಪತ್ರೆಯಲ್ಲಿದ್ದ ಕಾರಣ ಅವರಿಗೆ ಸೋಂಕು ಉಲ್ಭಣವಾಗಿ ವೇಗವಾಗಿ ಹರಡಿತ್ತು. ‘ಅವರನ್ನು ಇಂದು ಬೆಳಿಗ್ಗೆ ವೆಂಟಿಲೇಟರ್ನಲ್ಲಿ ಇರಿಸಲಾಯಿತು. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ’ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
‘ಉಸ್ತಾದ್ ರಶೀದ್ ಖಾನ್ ಅವರಿಗೆ ನಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಬಂಗಾ ಬಿಭೂಷಣ’ ಮತ್ತು ಸಂಗೀತ ಮಹಾಸಮ್ಮಾನ್ ಕೂಡ ಲಭಿಸಿದೆ. ಅವರು ನಮ್ಮ ರಾಜ್ಯದ ಹಲವಾರು ಸಾಂಸ್ಕೃತಿಕ ಸಂಸ್ಥೆಗಳಿಗೆ ಸಲಹೆ ನೀಡುತ್ತಿದ್ದರು’ ಎಂದು ಬ್ಯಾನರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕನಿಗೆ 2006ರಲ್ಲಿ ಪದ್ಮಶ್ರೀ ಮತ್ತು 2022 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಸಹ ನೀಡಲಾಯಿತು. ‘ಅವರು ಉತ್ತರ ಪ್ರದೇಶದಲ್ಲಿ ಜನಿಸಿದ್ದರೂ ಪಶ್ಚಿಮ ಬಂಗಾಳವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಶವವನ್ನು ಶವಾಗಾರದಲ್ಲಿ ಇಡಲಾಗುವುದು. ಬುಧವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವದ ಬಳಿಕ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು’ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ; ರಾಮಮಂದಿರ ಉದ್ಘಾಟನೆ ಗಿಮಿಕ್ ಶೋ: ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ