“ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ನೀಡಲಾಗಿರುವ 40 ದಿನಗಳ ಪೆರೋಲ್ನಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ” ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆಂದು ಎಎನ್ಐ ವರದಿ ಮಾಡಿದೆ.
ಸಿರ್ಸಾ ಜಿಲ್ಲೆಯ ಡೇರಾ ಪ್ರಧಾನ ಕಚೇರಿಯಲ್ಲಿ ತನ್ನ ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ಗುರ್ಮೀತ್ಗೆ 2017ರಲ್ಲಿ ಕೋರ್ಟ್ ವಿಧಿಸಿದೆ. ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ್ಯಾಯಾಲಯವು ಗುರ್ಮೀತ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು 2021ರಲ್ಲಿ ವಿಧಿಸಿತ್ತು.
ಶುಕ್ರವಾರ ನೀಡಲಾದ ಪೆರೋಲ್ನಿಂದಾಗಿ ಗುರ್ಮಿತ್ ಶನಿವಾರ ಮಧ್ಯಾಹ್ನ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ ಹೊರಬಂದಿದ್ದಾನೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ. ಕಳೆದ ವರ್ಷದಿಂದ ಇದು ನಾಲ್ಕನೇ ಬಾರಿಗೆ ಡೇರಾ ಮುಖ್ಯಸ್ಥನಿಗೆ ಪೆರೋಲ್ನಲ್ಲಿ ಹೊರಬರಲು ಅವಕಾಶ ದೊರೆತಿದೆ. ನವೆಂಬರ್ 25 ರಂದು ಕೊನೆಯದಾಗಿ ಪೆರೋಲ್ ಮುಗಿದಿತ್ತು.
ಜೂನ್ನಲ್ಲಿ, ಪಂಜಾಬ್ನ ಸಂಗ್ರೂರ್ ಉಪಚುನಾವಣೆಯ ಮೊದಲು ತಿಂಗಳ ಅವಧಿಯ ಪೆರೋಲ್ನಲ್ಲಿ ಬಿಡುಗಡೆ ಮಾಡಲಾಯಿತು. ಫೆಬ್ರವರಿಯಲ್ಲಿ, ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಗುರ್ಮೀತ್ಗೆ 21 ದಿನಗಳ ಫರ್ಲೋ ನೀಡಲಾಯಿತು.
ತುರ್ತು ಬೇಡಿಕೆ ಅಥವಾ ಅಗತ್ಯದ ಆಧಾರದ ಮೇಲೆ ಖೈದಿಗೆ ಪೆರೋಲ್ ನೀಡಲಾಗುತ್ತದೆ, ಜೈಲಿನಲ್ಲಿ ನಿಗದಿತ ಸಮಯವನ್ನು ಪೂರೈಸಿದ ನಂತರ ಯಾವುದೇ ಕಾರಣವಿಲ್ಲದೆ ಫರ್ಲೋ ನೀಡಬಹುದು.
ಇದನ್ನೂ ಓದಿರಿ: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ಧರ್ಮಗುರುಗಳು: ಇಲ್ಲಿದೆ ಪ್ರಮುಖರ ಪಟ್ಟಿ
ಶನಿವಾರ ಮುಖ್ಯಮಂತ್ರಿ ಕಟ್ಟರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಗುರ್ಮೀತ್ಗೆ ಕಾರ್ಯವಿಧಾನದ ಪ್ರಕಾರ ಪೆರೋಲ್ ನೀಡಿರಬೇಕು ಮತ್ತು ಪರಿಹಾರವನ್ನು ಪಡೆಯುವುದು ಆತನ ಹಕ್ಕು” ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಹರ್ಯಾಣ ಜೈಲು ಸಚಿವ ರಂಜಿತ್ ಸಿಂಗ್ ಚೌಟಾಲಾ ಕೂಡ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆಯಾಗುವುದು ಡೇರಾ ಮುಖ್ಯಸ್ಥನ ಮೂಲಭೂತ ಹಕ್ಕು ಎಂದಿದ್ದಾರೆ.
“ಮೂರು-ಐದು ವರ್ಷಗಳ [ಜೈಲು ಶಿಕ್ಷೆಯ] ನಂತರ, ಒಬ್ಬ ಖೈದಿ ಪೆರೋಲ್ಗೆ ಅರ್ಜಿ ಸಲ್ಲಿಸಬಹುದು ಮತ್ತು ಅದು ನಮ್ಮ ಕೈಯಲ್ಲಿಲ್ಲ, ಜಾಮೀನಿನ ಬಗ್ಗೆ ಸಕ್ಷಮ ಪ್ರಾಧಿಕಾರವು ನಿರ್ಧರಿಸುತ್ತದೆ” ಎಂದು ಚೌಟಾಲಾ ಪ್ರತಿಕ್ರಿಯಿಸಿದ್ದಾರೆ.