ಇಸ್ರೇಲ್ನೊಂದಿಗಿನ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ (NYT) ವರದಿ ಮಾಡಿದೆ. ಈ ವರದಿ ಪ್ರಕಟವಾದ ನಂತರ ಮೋದಿ ಸರ್ಕಾರವು ವಿರುದ್ಧ ವಿಪಕ್ಷಗಳ ತ್ರೀವ್ರ ಟೀಕೆಗೆ ಗುರಿಯಾಗಿದೆ. ಆದರೆ, ಕೇಂದ್ರ ಸಚಿವ ವಿಕೆ ಸಿಂಗ್ ವರದಿಯನ್ನು ತಳ್ಳಿಹಾಕಿದ್ದಾರೆ.
NYT ವರದಿಯು, ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಖರೀದಿಸುವ 2 ಬಿಲಿಯನ್ ಡಾಲರ್ ಪ್ಯಾಕೇಜ್ನ ಒಪ್ಪಂದದ ಭಾಗವಾಗಿ ಸ್ಪೈವೇರ್ ಪೆಗಾಸಸ್ಅನ್ನು ಭಾರತವು ಇಸ್ರೇಲ್ನಿಂದ ಖರೀದಿಸಿದೆ. ಒಪ್ಪಂದವು 2017ರ ಜುಲೈನಲ್ಲಿ ಮೋದಿ ಅವರು ಇಸ್ರೇಲ್ಗೆ ಭೇಟಿ ನೀಡಿದ್ದಾಗ ನಡೆದಿದೆ ಎಂದು ಹೇಳಿದೆ.
ವರದಿ ಪ್ರಕಟವಾದ ಬಳಿಕ ಕೇಂದ್ರದ ವಿರುದ್ದ ಹರಿಹಾಯ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರವನ್ನು “ದೇಶದ್ರೋಹಿ” ಎಂದು ಕರೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಮ್ಮ ಪ್ರಜಾಪ್ರಭುತ್ವದ ಪ್ರಾಥಮಿಕ ಸಂಸ್ಥೆಗಳು, ನಾಯಕರು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಪೆಗಾಸಸ್ ಅನ್ನು ಮೋದಿ ಸರ್ಕಾರ ಖರೀದಿಸಿದೆ. ಇದು ದೇಶದ್ರೋಹ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ” ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರವು ಇಸ್ರೇಲಿ ಕಣ್ಗಾವಲು ಸ್ಪೈವೇರ್ ಪೆಗಾಸಸ್ ಮೂಲಕ ಅಕ್ರಮ ಮತ್ತು ಅಸಾಂವಿಧಾನಿಕ ಬೇಹುಗಾರಿಕೆ ಮತ್ತು ಸ್ನೂಪಿಂಗ್ ದಂಧೆಯನ್ನು ನಡೆಸಿದೆ. ಈ ದಂಧೆಗೆ ನಿಯೋಜಕ ಮತ್ತು ನಿರ್ವಾಹಕ ಎರಡೂ ಬಿಜೆಪಿ ಸರ್ಕಾರವೇ ಆಗಿದೆ. ಪೆಗಾಸಸ್ ಆಘಾತಕಾರಿ ವಿಚಾರದ ಬಗ್ಗೆ ನಾವು ಸುದೀರ್ಘ ಕಾಲದಿಂದ ಪ್ರತಿಪಾದಿಸಿದ್ದನ್ನು ಅಂತಾರಾಷ್ಟ್ರೀಯ ಪ್ರಕಟಣೆಯು ದೃಢಪಡಿಸಿದೆ ಮತ್ತು ಬಹಿರಂಗ ಪಡಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟ್ವಿಟರ್ನಲ್ಲಿ, “ಮೋದಿ ಸರ್ಕಾರ ಭಾರತದ ಶತ್ರುವಿನಂತೆ ವರ್ತಿಸಿತ್ತಿದೆ. ಭಾರತೀಯ ನಾಗರಿಕರ ವಿರುದ್ಧ ಕಣ್ಗಾವಲಿನ ಅಸ್ತ್ರವನ್ನು ಏಕೆ ಬಳಸುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು, “ಸ್ಪೈವೇರ್ ಅನ್ನು ರಕ್ಷಣಾ ಉದ್ದೇಶಗಳಿಗಾಗಿ ಬಳಸಲಾಗಿಲ್ಲ. ಆದರೆ ಪ್ರತಿಪಕ್ಷಗಳು ಮತ್ತು ಪತ್ರಕರ್ತರ ಮೇಲೆ ಕಣ್ಣಿಡಲು ಬಳಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಇಂತಹ ದುಷ್ಕೃತ್ಯಗಳು ಸಾಧ್ಯ. ಅವರು ದೇಶವನ್ನೇ ಬಿಗ್ಬಾಸ್ ಶೋ ಆಗಿ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
2017 ರಲ್ಲಿ ಇಸ್ರೇಲ್ ಜೊತೆಗಿನ ದೊಡ್ಡ $2 ಬಿಲಿಯನ್ ಒಪ್ಪಂದದ ಭಾಗವಾಗಿ ಭಾರತವು ಪೆಗಾಸಸ್ ಅನ್ನು ಖರೀದಿಸಿದೆ ಎಂದು NYT ಹೇಳುತ್ತದೆ. ಪೆಗಾಸಸ್ (ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಮೇಲೆ ಕಣ್ಣಿಡಲು ಬಳಸಲಾಗುತ್ತದೆ) ಭಾರತ ಮತ್ತು ಇಸ್ರೇಲ್ ನಡುವಿನ ಒಪ್ಪಂದದ ‘ಕೇಂದ್ರಬಿಂದು’ ಎಂದು ಮಾಧ್ಯಮ ವರದಿಯು ಗಮನ ಸೆಳೆದಿದೆ. ಇದರಿಂದ, ಸಂಸತ್ತಿನಲ್ಲಿ ಮೋದಿ ಸರ್ಕಾರ ಸುಳ್ಳು ಹೇಳಿರುವುದು ಸ್ಪಷ್ಟವಾಗಿದೆ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಅದಾಗ್ಯೂ, ಕೇಂದ್ರ ಸಚಿವ ಜನರಲ್ ವಿ ಕೆ ಸಿಂಗ್ ಅವರು ನ್ಯೂಯಾರ್ಕ್ ಟೈನ್ಸ್ನ ವರದಿಯನ್ನು ನಿರಾಕರಿಸಿದ್ದಾರೆ ಮತ್ತು ಆ ವರದಿಯನ್ನು “ಸುಪಾರಿ ಮೀಡಿಯಾ” ಎಂದು ಕರೆದಿದ್ದಾರೆ. ನೀವು NYT ಅನ್ನು ನಂಬಬಹುದೇ? ಅವರು ಸುಪಾರಿ ಮೀಡಿಯಾ ಎಂದು ಟ್ವೀಟ್ ಮಾಡಿದೆ.
ಕಳೆದ ವರ್ಷ, ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಭಾರತದಲ್ಲಿ ಉದ್ದೇಶಿತ ಕಣ್ಗಾವಲಿಗಾಗಿ ಕೇಂದ್ರ ಸರ್ಕಾರ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಬಳಿಕ ಇದು ಭಾರೀ ಸುದ್ದಿಯಾಗಿತ್ತು.
ಎನ್ಎಸ್ಒ ಗ್ರೂಪ್ನ ಫೋನ್ ಹ್ಯಾಕಿಂಗ್ ಸಾಫ್ಟ್ವೇರ್ನಿಂದ ಭಾರತೀಯ ಮಂತ್ರಿಗಳು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಮತ್ತು ಪತ್ರಕರ್ತರು ಸೇರಿದಂತೆ ಅನೇಕ ಜನರನ್ನು ಅನಧಿಕೃತ ಕಣ್ಗಾವಲಿಗೆ ಗುರಿ ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ತನಿಖಾ ಒಕ್ಕೂಟವು ಕಳೆದ ವರ್ಷ ಹೇಳಿತ್ತು.
ಭಾರತದಲ್ಲಿ ಕೇಂದ್ರ ಸರ್ಕಾರವು ಕಣ್ಗಾವಲಿಟ್ಟಿರುವ ಪಟ್ಟಿಯಲ್ಲಿ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಆಗಿನ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ, ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಪ್ರಮುಖ ನಾಯಕರು ಹಾಗೂ ಇಂಡಿಯನ್ ಎಕ್ಸ್ಪ್ರೆಸ್ನ ಮೂವರು ಸಂಪಾದಕರು ಸೇರಿದಂತೆ ಸುಮಾರು 40 ಪತ್ರಕರ್ತರ ಹೆಸರುಗಳಿವೆ ಎಂದು ದಿ ವೈರ್ ನಡೆಸಿದ ತನಿಖೆಯಲ್ಲಿ ಬಹಿರಂಗಪಡಿಸಿತ್ತು.
ಈ ಎಲ್ಲಾ ಅರೋಪಗಳನ್ನು ಅಲ್ಲಗಳೆದಿದ್ದ ಕೇಂದ್ರ ಸರ್ಕಾರ, ನಿರ್ದಿಷ್ಟ ಜನರ ಮೇಲೆ ಯಾವುದೇ ರೀತಿಯ ಕಣ್ಗಾವಲನ್ನು ಇರಿಸಲಾಗಿಲ್ಲ ಎಂದು ಹೇಳಿದ್ದ ಸರ್ಕಾರ, ಆರೋಪಗಳನ್ನು ತಳ್ಳಿಹಾಕಿತ್ತು. “ಈ ಆರೋಪವು ಯಾವುದೇ ನಿರ್ದಿಷ್ಟ ಆಧಾರ ಅಥವಾ ಸತ್ಯವನ್ನು ಹೊಂದಿಲ್ಲ” ಎಂದು ಹೇಳಿತ್ತು.
ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, “ರಾಷ್ಟ್ರೀಯ ಭದ್ರತೆ” ಎಂಬ ಭೀತಿ ಹೆಚ್ಚಿದಾಗ ಸರ್ಕಾರವು ಆರಾಮದಾಯಕವಾಗಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಂಗವು ಮೂಕ ವೀಕ್ಷನಾಗಿ ಕುಳಿತಿಲ್ಲ ಎಂದು ಹೇಳಿತ್ತು.
ಪೆಗಾಸಸ್ ಮೂಲಕ ಸರ್ಕಾರವು ಹಲವರ ಮೇಲೆ ಅನಧಿಕೃತವಾಗಿ ಕಣ್ಣಿಟ್ಟಿದೆ ಎಂದು ಆರೋಪಿಸಿ ಸಲ್ಲಿಸಲಾದ ಸುಮಾರು ಹನ್ನೆರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿತ್ತು. ನಂತರ, ಇದರ ತನಿಖೆಗಾಗಿ ಅಕ್ಟೋಬರ್ 27 ರಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ನೇತೃತ್ವದಲ್ಲಿ ಇಬ್ಬರು ತಜ್ಞರೊಂದಿಗೆ ಸ್ವತಂತ್ರ ಸಮಿತಿಯನ್ನು ನೇಮಿಸಿತು.