ಪ್ರಮುಖ ತಿದ್ದುಪಡಿಗಳೊಂದಿಗೆ ದೇಶದ್ರೋಹ ಕಾನೂನನ್ನು ಉಳಿಸಿಕೊಳ್ಳಲು ಭಾರತೀಯ ಕಾನೂನು ಆಯೋಗ ಪ್ರಸ್ತಾಪಿಸಿದೆ ಎಂದು ‘ಬಾರ್ ಮತ್ತು ಬೆಂಚ್’ ಶುಕ್ರವಾರ ವರದಿ ಮಾಡಿದೆ.
ಕರ್ನಾಟಕ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಆಯೋಗವು, “ದೇಶದ್ರೋಹ ಕಾನೂನನ್ನು ವಸಾಹತುಶಾಹಿ ಪರಂಪರೆಯ ಭಾಗವೆನ್ನುವುದೇ ಅದರ ರದ್ಧತಿಗೆ ಮಾನ್ಯವಾದ ಕಾರಣವಾಗಬಾರದು” ಎಂದು ಹೇಳಿದೆ.
“ಭಾರತೀಯ ಕಾನೂನು ವ್ಯವಸ್ಥೆಯ ಸಂಪೂರ್ಣ ಚೌಕಟ್ಟು ವಸಾಹತುಶಾಹಿ ಪರಂಪರೆಯದ್ದಾಗಿದೆ” ಎಂದು ಆಯೋಗ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. “ಪೊಲೀಸ್ ಪಡೆ ಮತ್ತು ಅಖಿಲ ಭಾರತ ನಾಗರಿಕ ಸೇವೆಯ ಕಲ್ಪನೆಯು ಬ್ರಿಟಿಷ್ ಕಾಲದ ತಾತ್ಕಾಲಿಕ ಅವಶೇಷಗಳಾಗಿವೆ” ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಕಾನೂನಿನಡಿಯಲ್ಲಿ ಜೈಲು ಶಿಕ್ಷೆಯನ್ನು ಮೂರು ವರ್ಷದಿಂದ ಏಳು ವರ್ಷಕ್ಕೆ ಹೆಚ್ಚಿಸಬೇಕು ಎಂದು ಆಯೋಗ ಸೂಚಿಸಿದೆ.
“ಇದು ಎಸಗಿದ ಕೃತ್ಯದ ಪ್ರಮಾಣ ಮತ್ತು ತೀವ್ರತೆಗೆ ಅನುಗುಣವಾಗಿ ದೇಶದ್ರೋಹದ ಪ್ರಕರಣಕ್ಕೆ ಶಿಕ್ಷೆಯನ್ನು ನೀಡಲು ನ್ಯಾಯಾಲಯಗಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ” ಎಂದು ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಯಾರು? ಆತನ ಹಿನ್ನಲೆ, ಪ್ರಭಾವವೇನು?
ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಅದನ್ನು ಮರುಪರಿಶೀಲಿಸುವವರೆಗೆ ಈ ಕಾನೂನಿನ ಅಡಿಯಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು.
“ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿಸಲಾದ ಸರ್ಕಾರದ ಬಗ್ಗೆ ದ್ವೇಷ ಅಥವಾ ತಿರಸ್ಕಾರವನ್ನು ತರಲು, ಅಸಮಾಧಾನವನ್ನು ಪ್ರಚೋದಿಸುವ ಪ್ರಯತ್ನಗಳನ್ನು ದೇಶದ್ರೋಹದ ಅಪರಾಧ” ಎಂದು ಪರಿಗಣಿಸಲಾಗಿತ್ತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಪತ್ರ ಬರೆದಿರುವ ಆಯೋಗವು, “ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಅಸ್ವಸ್ಥತೆಯನ್ನು ಉಂಟುಮಾಡುವ ಪ್ರವೃತ್ತಿ” ಎಂಬ ಪದಗಳನ್ನು ಸೇರಿಸಲು ಸೂಚಿಸಿದೆ.
“ಕೆಲವು ದೇಶಗಳು ಹಾಗೆ ಮಾಡಿವೆ ಎಂಬ ಆಧಾರದ ಮೇಲೆ ದೇಶದ್ರೋಹ ಕಾನೂನನ್ನು ರದ್ದುಗೊಳಿಸುವುದು ಮೂಲಭೂತವಾಗಿ ಭಾರತದಲ್ಲಿ ಅಸ್ತಿತ್ವದಲ್ಲಿರುವ ನೆಲದ ವಾಸ್ತವಗಳಿಗೆ ಕರುಡಾಗಿಸುತ್ತದೆ” ಎಂದು ಆಯೋಗ ಅಭಿಪ್ರಾಯಪಟ್ಟಿದೆ.